ಬೆಂಗಳೂರು: ‘ಕಾಮಾಕ್ಷಿಪಾಳ್ಯದ ಸಮೀಪದ ಚೆನ್ನಪ್ಪ ಕೈಗಾರಿಕಾ ಪ್ರದೇಶದಲ್ಲಿ ರಸ್ತೆ, ಪಾದಚಾರಿ ಮಾರ್ಗ ಹಾಗೂ ಒಳಚರಂಡಿಗಳ ನಿರ್ಮಾಣ ಯೋಜನೆ ಕೈಗೊಳ್ಳಲು ಬಿಬಿಎಂಪಿ ₹35 ಕೋಟಿ ವಿಶೇಷ ಅನುದಾನ ನೀಡಲಿದೆ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಗೋವಿಂದರಾಜನಗರ ಹಾಗೂ ವಿಜಯನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಗುರುವಾರ ಪರಿವೀಕ್ಷಣೆ ಮಾಡಿದ ಸಚಿವರು, ‘ಚೆನ್ನಪ್ಪ ಕೈಗಾರಿಕಾ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆರ್.ಪಿ.ಸಿ ಬಡಾವಣೆಯಲ್ಲಿ ಬೃಹತ್ ರಾಜಕಾಲುವೆಯು ಮಳೆಯ ನೀರಿನ ಒತ್ತಡದಿಂದ ಕುಸಿದಿದೆ. ಅದನ್ನು ಮರುನಿರ್ಮಿಸುವಂತೆ ಆದೇಶಿಸಿದ್ದೇನೆ’ ಎಂದರು.
ವಿಜಯನಗರದ ಶಾಮಣ್ಣ ಗಾರ್ಡನ್ ರೈಲ್ವೆ ಗೇಟ್ನ ಪೈಪ್ಲೈನ್ ಪ್ರದೇಶದಲ್ಲಿ ಮಳೆ ಅನಾಹುತವನ್ನು ಸಚಿವರು ಪರಿಶೀಲಿಸಿದರು.
‘ರಾಜಕಾಲುವೆಯಿಂದಾಗಿ ಸುತ್ತಲಿನ ಮನೆಗಳಿಗೆ ನೀರು ನುಗ್ಗಿತ್ತು. ಇದರಿಂದ ಮನೆಗಳ ಅಡಿಪಾಯ ಹಾಳಾಗಿದೆ. ಪ್ರಾಣ ಭಯದಲ್ಲಿ ಜೀವನ ನಡೆಸುವಂತಾಗಿದೆ’ ಎಂದು ಅಲ್ಲಿನ ನಿವಾಸಿಗಳು ಅಳಲುತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ರಾಜಕಾಲುವೆ ನಿರ್ಮಿಸಲು ಹೆಚ್ಚುವರಿಯಾಗಿ ₹10 ಕೋಟಿ ಬಿಡುಗಡೆ ಮಾಡಿದ್ದು, ಕೂಡಲೇ ಕಾಮಗಾರಿ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಸಂತ್ರಸ್ತರಿಗೆ ಕೆಎಚ್ಬಿ ಮನೆಗಳನ್ನು ರಿಯಾಯಿತಿಯಲ್ಲಿ ನೀಡಲು ಕ್ರಮಕೈಗೊಳ್ಳುತ್ತೇನೆ’ ಎಂದು ಹೇಳಿದರು.