ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಜಿನ ಉತ್ಪನ್ನಗಳ ಗುಲಾಮರನ್ನಾಗಿ ಮಾಡುವುದು ಪ್ರಗತಿಯೇ?

Last Updated 21 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಸಹಜ ಜೀವನ‍ ಕ್ರಮದ ಕುರಿತು ಅರಿವು ಮೂಡಿಸುವುದನ್ನು ತಪಸ್ಸಿನಂತೆ ಆಚರಿಸುತ್ತಾ ಬಂದವರು ರಂಗಕರ್ಮಿ ಪ್ರಸನ್ನ. ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿ ಆದಾಗ, ಅದರಿಂದ ದೇಶದ ಗ್ರಾಮೀಣ ಭಾಗದ ಸಹಜ ಜೀವನ ಪದ್ಧತಿ ಮೇಲೆ ಆಗುವ ದುಷ್ಪರಿಣಾಮಗಳನ್ನು ಸೂಕ್ಷ್ಮವಾಗಿ ಗ್ರಹಿಸಿದವರು ಅವರು. ಕೈ ಉತ್ಪನ್ನಗಳಿಗೆ, ಗುಡಿ ಕೈಗಾರಿಕೆಗಳಿಗೆ ಶೂನ್ಯ ಕರ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ‘ಕರ ನಿರಾಕರಣೆ’ ಹೋರಾಟ ಆರಂಭಿಸಿದ್ದಾರೆ. ಈ ಬಗ್ಗೆ ಜನಜಾಗೃತಿ ಮೂಡಿಸಲು ಸಾಂಕೇತಿಕವಾಗಿ ಉಪವಾಸ ಸತ್ಯಾಗ್ರಹವನ್ನೂ ಕೈಗೊಂಡಿದ್ದಾರೆ.

ಭಾರತೀಯ ಪರಂಪರೆಯಲ್ಲಿ ಕೈ ಉತ್ಪನ್ನಗಳ ಪ್ರಾಮುಖ್ಯತೆ, ಅವುಗಳನ್ನು ಉಳಿಸಿಕೊಳ್ಳುವಲ್ಲಿ ಸರ್ಕಾರಗಳ ಹಾಗೂ ಗ್ರಾಹಕರ ಪಾತ್ರಗಳ ಕುರಿತು ಅವರು ‘ಪ್ರಜಾವಾಣಿ’ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

* ಕೈ ಉತ್ಪನ್ನಗಳು ಯಾವುವು ಎಂಬ ಬಗ್ಗೆಯೇ ಜನರಲ್ಲಿ ಗೊಂದಲಗಳಿವೆಯಲ್ಲ?
ಕೈಮಗ್ಗ ಹಾಗೂ ಕರಕುಶಲ ವಸ್ತುಗಳು, ಎಂಪೋರಿಯಂಗಳಲ್ಲಿ ಮಾರುವ ಹಾಗೂ ಗೋಡೆಗಳಲ್ಲಿ ನೇತು ಹಾಕುವ ಸೌಂದರ್ಯ ಪರಿಕರಗಳು ಮಾತ್ರ ಕೈ ಉತ್ಪನ್ನ ಎಂಬ ತಪ್ಪು ಕಲ್ಪನೆ ಇದೆ. ಚಮ್ಮಾರ ತಯಾರಿಸುವ ಚಪ್ಪಲಿ, ಸಹಜ ಕೃಷಿಯಿಂದ ಉತ್ಪಾದನೆ ಆಗುವ ಪದಾರ್ಥಗಳು, ಕಾಡಿನ ಉತ್ಪನ್ನಗಳೆಲ್ಲವೂ ಕೈಉತ್ಪನ್ನಗಳೇ. ಮೂರನೇ ಒಂದು ಭಾಗಕ್ಕಿಂತ ಹೆಚ್ಚಿಲ್ಲದೆ ಯಂತ್ರ ಬಳಸಿದರೂ ಅದು ಕೈ ಉತ್ಪನ್ನ.

* ಆಧುನಿಕ ಕಾಲಘಟ್ಟದಲ್ಲಿ ಕೈ ಉತ್ಪನ್ನಗಳನ್ನು ಉಳಿಸಿಕೊಳ್ಳುವ ಅಗತ್ಯವಾದರೂ ಏನು?
ಬ್ರಿಟಿಷರು ಬರುವವರೆಗೆ ದೇಶದ ಆರ್ಥಿಕತೆಯನ್ನು ಕಾಪಾಡಿದ್ದೇ ಕೈ ಉತ್ಪನ್ನಗಳು. ಕೈಮಗ್ಗ ಬಟ್ಟೆಗಳ ರಫ್ತಿನಿಂದಲೇ ಚಿನ್ನವನ್ನು ಗಳಿಸಿದ್ದವರು ನಾವು. ಇಲ್ಲಿಂದ ರೋಮ್‌ಗೆ ಬಟ್ಟೆಗಳು ರಫ್ತಾಗುತ್ತಿದ್ದವು. ಈ ಬಟ್ಟೆಗಳಿಂದಾಗಿ ದೊಡ್ಡ ಪ್ರಮಾಣದಲ್ಲಿ ಚಿನ್ನ ಕಳೆದುಕೊಳ್ಳುತ್ತಿದ್ದೇವೆ ಎಂದು ಆತಂಕಗೊಂಡ ಅಲ್ಲಿನ ಸೆನೆಟ್‌, ಭಾರತದ ಹತ್ತಿ ಬಟ್ಟೆ ಕೊಳ್ಳಬಾರದು ಎಂದು ನಿರ್ಣಯ ಕೈಗೊಂಡಿತ್ತು. ಅಷ್ಟೊಂದು ಪ್ರಾಮುಖ್ಯ ಕೈ ಉತ್ಪನ್ನಗಳಿಗೆ ಇದೆ.

ಇತ್ತೀಚಿನ ದಿನಗಳಲ್ಲಿ ನಾವು, ಯಂತ್ರದಿಂದ ತಯಾರಿಸುವಂಥವು ಮಾತ್ರ ಉತ್ಪನ್ನಗಳು; ಟಾಟಾ, ಬಿರ್ಲಾರಂಥವರು ಮಾತ್ರ ಉದ್ಯಮಶೀಲರು, ಚಪ್ಪಲಿ ತಯಾರಿಸುವವರು, ಕಂಬಳಿ, ಬಟ್ಟೆ ನೇಯುವವರು, ಬುಟ್ಟಿ ಹೆಣೆಯುವವರು ಉದ್ಯಮಶೀಲರಲ್ಲ. ಗ್ರಾಮೀಣ ಬಡವರು ಅಯೋಗ್ಯರು, ದರಿದ್ರರು ಎಂಬ ನಿರ್ಧಾರಕ್ಕೆ ಬಂದುಬಿಟ್ಟಿದ್ದೇವೆ. ಇವರೆಲ್ಲರೂ ಯಾವತ್ತೂ ಉದ್ಯಮಶೀಲರಾಗಿದ್ದರು. ಉದ್ಯಮಶೀಲತೆ ಕಿತ್ತುಕೊಂಡಿದ್ದರಿಂದ ಅವರು ಬಡವರಾಗಿದ್ದಾರೆ ಎಂಬ ವಿಚಾರವನ್ನು ನಾವು ಈ ಚಳವಳಿ ಮೂಲಕ ಹೇಳುತ್ತಿದ್ದೇವೆ.

* ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದಾದರೂ ಹೇಗೆ?
ಮೊದಲು ಬ್ರಿಟಿಷರು ನಮ್ಮ ಕೈ ಉತ್ಪನ್ನಗಳನ್ನು ಹಾಳು ಮಾಡಿದರು. ಅವರ ದೇಶದ ಕಾರ್ಖಾನೆಗಳಲ್ಲಿ ತಯಾರಾದ ಬಟ್ಟೆಗಳು, ಕೈಗಾರಿಕೋತ್ಪನ್ನಗಳನ್ನು ಇಲ್ಲಿ ಮಾರಬೇಕಿತ್ತು. ಹಾಗಾಗಿ ಅವರು ಕೈ ಉತ್ಪನ್ನಗಳಿಗೆ ದಂಡ, ಕರ ವಿಧಿಸಿದರು. ಹಲವಾರು ದೌರ್ಜನ್ಯ ಕ್ರಮಗಳ ಮೂಲಕ ದೇಸಿ ಉತ್ಪನ್ನಗಳ ಪ್ರಾಮುಖ್ಯತೆ ಕುಗ್ಗಿಸಿದರು. ನೇಕಾರರ ಬೆರಳು ಕತ್ತರಿಸುವ ಮಟ್ಟಕ್ಕೆ ಹೋದರು. ಇದನ್ನು ವಿರೋಧಿಸುವ ಸಲುವಾಗಿಯೇ ರಾಷ್ಟ್ರೀಯ ಹೋರಾಟದ ಲಾಂಛನವನ್ನಾಗಿ ಕೈ ಉತ್ಪನ್ನಗಳನ್ನು ಬಳಸಲಾಯಿತು. ಇವತ್ತಿಗೂ ರಾಷ್ಟ್ರೀಯ ಬಾವುಟವನ್ನು ಕೈಯಿಂದಲೇ ಮಾಡಲಾಗುತ್ತದೆ.

* ಸ್ವಾತಂತ್ರ್ಯ ಬಂದ ಬಳಿಕ ಪರಿಸ್ಥಿತಿ ಸುಧಾರಿಸಬೇಕಿತ್ತಲ್ಲವೇ?
ದುರಂತ ಏನಪ್ಪಾ ಅಂದರೆ, ಸ್ವಾತಂತ್ರ್ಯ ಬಂದ ಬಳಿಕ ಎಲ್ಲ ಸರ್ಕಾರಗಳೂ ದೇಸಿ ಉತ್ಪನ್ನಗಳನ್ನು ನಿಧಾನವಾಗಿ ಕಡೆಗಣಿಸಲು ಶುರುಮಾಡಿದವು. ಕೈಗಾರಿಕೆಗಳು ಮಾತ್ರ ಉದ್ದಿಮೆ ಎಂಬ ನಿಲುವಿಗೆ ಬಂದವು. ಇವತ್ತು ಇದು ಯಾವ ಘಟ್ಟ ತಲುಪಿದೆ ಅಂದರೆ, ನಾವು ಸುತ್ತಲೂ ಪ್ಲಾಸ್ಟಿಕ್‌ ರಾಶಿ ಹಾಕಿಕೊಂಡು ಕುಳಿತಿದ್ದೇವೆ. ಬದುಕನ್ನೇ ಹಾಳು ಮಾಡಿಕೊಳ್ಳುವ ಸ್ಥಿತಿಗೆ ಬಂದಿದ್ದೇವೆ. ಅರಣ್ಯಗಳನ್ನು, ನದಿಗಳನ್ನು ನಾಶ ಮಾಡಿದ್ದೇವೆ. ಉಸಿರಾಡುವ ಗಾಳಿಯನ್ನು ಕೆಡಿಸಿದ್ದೇವೆ. ವಾತಾವರಣ ಏರುಪೇರಾಗಿದೆ. ಒಂದು ರೀತಿ ನೈತಿಕ ಬಿಕ್ಕಟ್ಟನ್ನು ಸೃಷ್ಟಿಸಿಕೊಂಡಿದ್ದೇವೆ. ಎಲ್ಲಿಯವರೆಗೆ ಕೈ ಉತ್ಪನ್ನಗಳಿಗೆ ಪ್ರಾಮುಖ್ಯತೆ ಸಿಗುವುದಿಲ್ಲವೋ ಅಲ್ಲಿಯವರೆಗೆ ಪರಿಸರ ಸಮಸ್ಯೆ, ನೈತಿಕ ಬಿಕ್ಕಟ್ಟು ಪರಿಹಾರವಾಗದು.

ಮೋಜಿನ ಉತ್ಪನ್ನಗಳು ಮಾತ್ರವೇ ಒಟ್ಟು ಆಂತರಿಕ ಉತ್ಪನ್ನವನ್ನು (ಜಿಡಿಪಿ) ಬೆಳೆಸುತ್ತವೆ ಎಂಬ ಭ್ರಮೆ ನಮ್ಮಲ್ಲಿದೆ.  ಅತಿರೇಕದ ಆಸೆಯಿಂದ ಮೋಜಿನ ಉತ್ಪನ್ನಗಳನ್ನು ತಯಾರಿಸಿ, ವಿಪರೀತ ಪ್ರಚಾರ ಕೊಡಲಾಗುತ್ತಿದೆ. ಜನರನ್ನು ಅದರ ಗುಲಾಮರನ್ನಾಗಿ ಮಾಡುವುದೇ ದೇಶದ ಪ್ರಗತಿ ಅಂತ ರಾಜಕಾರಣಿಗಳು ಭಾವಿಸಿದ್ದಾರೆ. ಇದು ಆಗಬಾರದು.

* ಇದಕ್ಕೆಲ್ಲ ಜನರೂ ಕಾರಣವಲ್ಲವೇ?
ಹೌದು. ಹಾಗಾಗಿಯೇ ನಾವು ಕೇವಲ ರಾಷ್ಟ್ರೀಯ ಚಳವಳಿಯನ್ನು ಮಾತ್ರ ಮಾಡುತ್ತಿಲ್ಲ, ನಮ್ಮದು ಗ್ರಾಹಕರ ಚಳವಳಿಯೂ ಹೌದು. ಗ್ರಾಹಕರು ಬದಲಾಗಬೇಕು. ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡಾದರೂ ಸಹಜ ಬದುಕಿಗೆ ಹಿಂತಿರುಗಬೇಕು.

ಕೈ ಉತ್ಪನ್ನಗಳು ಸಹಜ ಪದಾರ್ಥಗಳು. ಕೈಗಳನ್ನು ಬಳಸಿ ಉತ್ಪಾದಿಸುವ ಅವು ಸಹಜವಾಗಿ ದುಬಾರಿ. ಅವು ಮತ್ತಷ್ಟು ದುಬಾರಿ ಆಗದಂತೆ ನೋಡಿಕೊಳ್ಳಬೇಕು. ಅಸಹಜವಾಗಿರುವ ಯಂತ್ರೋತ್ಪನ್ನಗಳು ಅವುಗಳ ಮೇಲೆ ಸವಾರಿ ಮಾಡುತ್ತಿವೆ. ಅಸಹಜವಾಗಿ ಅಗ್ಗವಾಗಿರುವ ಕೈಗಾರಿಕೋತ್ಪನ್ನಗಳಿಗೆ ಸರ್ಕಾರಗಳು ಹಲವು  ವಿನಾಯಿತಿ ನೀಡಿ ಅವುಗಳು ಮತ್ತೂ ಅಗ್ಗ ಆಗುವಂತೆ ಮಾಡುತ್ತಿದ್ದೇವೆ. ಇದು ಘೋರ ಅನ್ಯಾಯ. ಕೈ ಉತ್ಪನ್ನ ಕಡಿಮೆ ದರದಲ್ಲಿ ಸಿಗುವಂತೆ ಮಾಡಬೇಕು ಎಂದು ಜನರೇ ಸರ್ಕಾರವನ್ನು ಕೇಳಬೇಕು.

* ಸರ್ಕಾರಗಳೂ ಸಕಾರಾತ್ಮಕ ಭೇದಭಾವ ನೀತಿ ಅನುಸರಿಸಿ ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡಿವೆಯಲ್ಲ?
ಎಲ್ಲಿ ಕೊಟ್ಟಿವೆ? ಕೊಟ್ಟಿದ್ದು ಕೆಲಸದ ಮೀಸಲಾತಿ, ಉಚಿತ ಅಕ್ಕಿ ಅಷ್ಟೇ. ಸಕಾರಾತ್ಮಕ ಭೇದಭಾವ ನೀತಿ ಅನುಸರಿಸಿ, ಮಾರುಕಟ್ಟೆ ಒದಗಿಸಿ ಎಂಬುದು ನಮ್ಮ ಬೇಡಿಕೆ. ಕೈ ಉತ್ಪನ್ನಗಳನ್ನು ತಯಾರಿಸುವ ಗ್ರಾಮೀಣ ಬಡವರು ಮಾರುಕಟ್ಟೆ ಸಹಕಾರ ಸಂಘಗಳ ಮೂಲಕ ದೊಡ್ಡ ಮಾರುಕಟ್ಟೆಗಳಿಗೆ, ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೆ ಬರಬೇಕು. ಅವರ ಉತ್ಪನ್ನಗಳಿಗೆ ತೆರಿಗೆ ಇಲ್ಲದಿದ್ದರೆ, ಹೆಚ್ಚು ಸೌಲಭ್ಯ ಕೊಟ್ಟರೆ ಮಾತ್ರ ಅವರಿಗೂ ಸ್ಪರ್ಧಾತ್ಮಕ ಜಾಗ ಸಿಗುತ್ತದೆ. ಕೈ ಉತ್ಪನ್ನ ಮಾಡುವವರಿಗೆ ಜಿಎಸ್‌ಟಿ ವಿನಾಯಿತಿ ಕೇಳುವುದು ಇದರ ಮೊದಲ ಹೆಜ್ಜೆ.

ಉತ್ಪಾದನಾ ಕ್ಷೇತ್ರದಲ್ಲಿ, ಉತ್ಪಾದನಾ ಘಟ್ಟದಲ್ಲಿ ಇಂತಹವರಿಗೆ ಪ್ರೋತ್ಸಾಹ ನೀಡಿದರೆ, ಅವರು ತಯಾರಿಸುವ  ಪದಾರ್ಥಗಳು ಕಡಿಮೆ ಬೆಲೆಗೆ ಸಿಗುವಂತಾಗುತ್ತವೆ. ಆಗ ಗ್ರಾಮೀಣ ಜನರು ಗ್ರಾಮದಲ್ಲೇ ಆತ್ಮಸ್ಥೈರ್ಯದಿಂದ ಬದುಕಲು ಸಾಧ್ಯ. ನಿರುದ್ಯೊಗ ಸಮಸ್ಯೆಯೂ ಕಡಿಮೆ ಆಗುತ್ತದೆ.

* ಕೈ ಉತ್ಪನ್ನಗಳಿಗೆ ಶೂನ್ಯ ಕರ ವಿಧಿಸಿದ ಮಾತ್ರಕ್ಕೆ ಗ್ರಾಮೀಣ ಜನರ ಉದ್ಧಾರ ಆಗುತ್ತದೆಯೇ?
ಅಮುಲ್‌ ಹೋರಾಟ ಆರಂಭವಾದಾಗ ಎಲ್ಲರೂ ಹೀಗಳೆದಿದ್ದರು. ಕುರಿಯನ್‌ ನೇತೃತ್ವದಲ್ಲಿ ನಡೆದ ಹಾಲಿನ ಕ್ರಾಂತಿ ಕೋಟ್ಯಂತರ ಗ್ರಾಮಿಣ ಮಹಿಳೆಯರಿಗೆ, ಹಾಲು ಉತ್ಪಾದಕರಿಗೆ ಸಹಾಯ ಮಾಡಿದೆ. ಲಿಜ್ಜತ್‌ ಪಾಪಡ್‌ ದಶಕಗಳಿಂದ ಬಡ ಮಹಿಳೆಯರ ಉತ್ಪಾದಕತೆಗೆ ಸಾಕ್ಷಿಯಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಇಂತಹ ಅನೇಕ ಯಶಸ್ವಿ ಉದಾಹರಣೆಗಳಿವೆ. ವಾರ್ಷಿಕ ₹ 20 ಲಕ್ಷದಷ್ಟು ವಹಿವಾಟು ನಡೆಸುವ ವೈಯಕ್ತಿಕ ಉತ್ಪಾದಕರು ಈಗ ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ. ನೇಕಾರ, ಗುಡಿಗಾರರಂತಹವರಿಗೆ ಈ ಮಿತಿಯನ್ನು ₹ 50 ಲಕ್ಷಕ್ಕೆ ನಿಗದಿ ಪಡಿಸಿ. ಇದನ್ನು ದಾಟಿದಾಗ ಸ್ವಸಹಾಯ ಸಂಘ ಅಥವಾ ಸಹಕಾರ ಸಂಘಗಳನ್ನು ರಚಿಸಿಕೊಂಡು ವ್ಯಾಪಾರ ಮಾಡುವಂತೆ ಉತ್ತೇಜನ ನೀಡಿ ಎಂದಷ್ಟೇ ನಾವು ಕೇಳುವುದು.

* ಈಗಲೂ ಬ್ರ್ಯಾಂಡೆಡ್‌ ಕೃಷಿ ಉತ್ಪನ್ನಗಳಿಗೆ ತೆರಿಗೆ ಇಲ್ಲವಲ್ಲ?
ಬ್ರ್ಯಾಂಡೆಡ್‌ ಅಲ್ಲದ ಕೃಷಿ ಉತ್ಪನ್ನಗಳಿಗೆ ಕೊಟ್ಟ ರಿಯಾಯಿತಿಯನ್ನು ಸರ್ಕಾರ ಮಾರಾಟ ಸಹಕಾರ ಸಂಘಗಳ  ಬ್ರ್ಯಾಂಡೆಡ್‌ ಉತ್ಪನ್ನಗಳಿಗೂ ಕೊಡಬೇಕು. ತೋಟಗಾರರ ಸಂಘಗಳು ಮಾರಾಟ ಮಾಡುವ ಬ್ರ್ಯಾಂಡೆಡ್‌ ತೋಟಗಾರಿಕಾ ಉತ್ಪನ್ನಗಳಿಗೂ ಈ ವಿನಾಯಿತಿ ಸಿಗಬೇಕು. ಬಡವರ ಸಹಕಾರ ಸಂಘಗಳಿಗೆ ಮಾತ್ರ ಇದನ್ನು ಅನ್ವಯಿಸಬೇಕು. ಕ್ರಮೇಣ ಈ ಸಂಘಗಳು ಬೆಳೆಯುತ್ತವೆ. ಅವುಗಳ ಆರ್ಥಿಕತೆ ಸ್ಥಿರವಾಗುತ್ತದೆ.

* ‘ಮೇಕ್‌ ಇನ್‌ ಇಂಡಿಯಾ’ ಕಾರ್ಯಕ್ರಮದ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಆಕರ್ಷಕ ಹೆಸರಿನ ಈ ಕಾರ್ಯಕ್ರಮದ ಮೂಲಕ ಸಂಪೂರ್ಣವಾಗಿ ವಿದೇಶಿ ವಸ್ತುಗಳನ್ನು ತಯಾರಿಸಲಾಗುತ್ತಿದೆ. ಅದರಲ್ಲಿ ಯಾವ ಸ್ವದೇಶಿಯೂ ಇಲ್ಲ. ವಿದೇಶಿ ಬಂಡವಾಳಗಾರರು ವಿದೇಶಿ ವಸ್ತು ತಯಾರಿಸಲು ನಮ್ಮ ಕೆಲಸಗಾರರನ್ನು ಗುಲಾಮರನ್ನಾಗಿ ಬಳಸುತ್ತಿದ್ದಾರೆ. ಅವರಿಂದ ಉತ್ಪಾದನೆ ಮಾಡಿಸಿ, ಅದರ ಲಾಭ ಪಡೆಯುತ್ತಿದ್ದಾರೆ. ಈ ಕಾರ್ಯಕ್ರಮದಡಿ ಎಷ್ಟು ಬುಟ್ಟಿ ಹೆಣೆಸಿದಿರಿ, ಎಷ್ಟು ಮಾದಾರರಿಗೆ, ಎಷ್ಟು ನೇಕಾರರಿಗೆ ಸಹಾಯ ಮಾಡಿಸಿದರಿ. ಇವೆಲ್ಲ ಕೇಳಬೇಕಾದ ಪ್ರಶ್ನೆಗಳು.

* ಇದರಿಂದ ಕೃಷಿ ಜಾಗ ಕೈಗಾರಿಕೆಗಳ ಪಾಲಾಗುತ್ತಿದೆ ಎಂಬ ಕೂಗು ಎದ್ದಿದೆಯಲ್ಲಾ?
ಕೃಷಿಕರ ಭೂಮಿ ಮಾತ್ರ ಅಲ್ಲ, ಸರ್ವ ಸಂಪತ್ತನ್ನೂ ಕೊಳ್ಳೆ ಹೊಡೆಯಲಾಗುತ್ತಿದೆ. ಬಾಟಲಿ ನೀರು ಮಾಡಲಿಕ್ಕೆ ನಮ್ಮ ನೀರನ್ನು ಬಹುರಾಷ್ಟ್ರೀಯ ಕಂಪೆನಿಗಳಿಗೆ ಮಾರುತ್ತಿದ್ದಾರೆ. ನೆಲವನ್ನು ಹೊರಗಿನ ಉದ್ಯಮಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಕಲ್ಲಿನ ಗಣಿಗಾರಿಕೆ ಮಾಡುವವರು ಹಳ್ಳಿಯ ಇಡೀ ಗುಡ್ಡಗಳನ್ನೇ ಅಗೆದು ಬಳಸಿಕೊಳ್ಳುತ್ತಿದ್ದಾರೆ. ಕೇವಲ ತೆರಿಗೆ ಆಸೆಗೆ ಕೊಳ್ಳೆ ಹೊಡೆಯಲು ಅವಕಾಶ ನೀಡಲಾಗುತ್ತಿದೆ. ಇದು ಯಾವ ನ್ಯಾಯ?

* ಕೇಂದ್ರದಲ್ಲಿ ಆಡಳಿತದಲ್ಲಿರುವ ಪಕ್ಷ ಸಂಸ್ಕೃತಿ ರಕ್ಷಣೆ ಬಗ್ಗೆ ಮಾತನಾಡುತ್ತದೆ. ಅವರಿಂದ ದೇಶದ ಸಂಸ್ಕೃತಿ ರಕ್ಷಣೆ ಆಗುತ್ತಿದೆ ಎಂದು ಅನಿಸುತ್ತಿದೆಯೇ?
ಸಂಸ್ಕೃತಿ ಬಗ್ಗೆ ಮಾತನಾಡುವ ಕೇಂದ್ರ ಸರ್ಕಾರ ಎಲ್ಲ ಸಾಂಸ್ಕೃತಿಕ ಪ್ರದರ್ಶನಗಳ ಮೇಲೆ ತೆರಿಗೆ ವಿಧಿಸಿದೆ. ಜಾನಪದ ಪ್ರದರ್ಶನ, ರಂಗ ಪ್ರದರ್ಶನ, ಸಂಗೀತ ಪ್ರದರ್ಶನಗಳನ್ನೂ ಬಿಟ್ಟಿಲ್ಲ. ಅವರು ಏನು ಹೇಳುತ್ತಿದ್ದಾರೋ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ.

* ಯಂತ್ರಗಳ ಬೆನ್ನು ಹತ್ತಿ ಬಹಳ ಮುಂದೆ ಬಂದು ಬಿಟ್ಟಿದ್ದೇವೆ. ಇನ್ನು ಹಿಂದೆ ಹೋಗಲು ಸಾಧ್ಯವೇ?
ಒಂದೇ ಸಲಕ್ಕೆ ಎಲ್ಲವನ್ನು ಬಿಟ್ಟು ಬಿಡಬೇಕು ಎಂದೇನಿಲ್ಲ. ಒಂದೊಂದೇ ಹೆಜ್ಜೆ ಹಿಂದಕ್ಕೆ ಹೋಗಬೇಕು. ನಾಳೆಯಿಂದ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಕೈ ಉತ್ಪನ್ನ ಬಳಸುತ್ತೇನೆ ಎಂದು ಸಣ್ಣ ನಿರ್ಧಾರ ಮಾಡಬಹುದು. ಸರಳವಾಗಿ ಬದುಕುವ ನಿರ್ಧಾರ ಮಾಡಿದರೆ ಸಾಕು, ಬದಲಾವಣೆ ತನ್ನಿಂದ ತಾನೆ ಆಗುತ್ತದೆ.

* ಜಾಹೀರಾತುಗಳ ಮೂಲಕ ಸಣ್ಣ ಮಕ್ಕಳ ತಲೆಯೊಳಗೂ ಕೊಳ್ಳುಬಾಕ ಸಂಸ್ಕೃತಿಯನ್ನು ತುರುಕುವ ಪ್ರಯತ್ನಗಳು ನಡೆಯುತ್ತಿವೆ. ಈ ವ್ಯೂಹದಿಂದ ಬಿಡುಗಡೆ ಹೇಗೆ?
ಇಂತಹದ್ದನ್ನು ತಡೆಯಲೆಂದೇ ನಮ್ಮ ಚಳವಳಿ ಹುಟ್ಟಿದ್ದು. ನಮ್ಮದು ರಾಜಕೀಯ ಪ್ರತಿಭಟನೆ ಅಲ್ಲ. ಗ್ರಾಹಕರ ಚಳವಳಿ. ಇದು ಎರಡನೇ ಸ್ವಾತಂತ್ರ್ಯ ಸಂಗ್ರಾಮ.  ಬೇಗ ಮುಗಿಯುವುದೂ ಇಲ್ಲ. ನಾವು ಬಳಸುವ ಅಸ್ತ್ರ ಬರೇ ಭಾಷಣಗಳಲ್ಲ. ಪಾದಯಾತ್ರೆ, ಉಪವಾಸ ಸತ್ಯಾಗ್ರಹ, ಕರ ನಿರಾಕರಣೆಗಳೇ ನಮ್ಮ ಅಸ್ತ್ರ.

* ಹೋರಾಟಕ್ಕೆ ನಿರೀಕ್ಷಿತ ಪ್ರತಿಕ್ರಿಯೆ ಸಿಕ್ಕಿದೆಯೇ?
ಈ ಹೋರಾಟದಲ್ಲಿ ನಾವು ಗೆದ್ದಿದ್ದೇವೆ ಎನ್ನುವುದಿಲ್ಲ. ಆದರೆ, ಇದರಿಂದಾಗಿ ಜನರಲ್ಲಿ ಸಾಕಷ್ಟು ಪ್ರಜ್ಞೆ ಮೂಡಿದೆ. ಹೋರಾಟ ಆರಂಭಿಸಿದಾಗ, ಜಿಎಸ್‌ಟಿ ಬಗ್ಗೆ ನಿಮಗೇನೂ ಗೊತ್ತಿಲ್ಲ, ಹುಚ್ಚರು ನೀವು ಎಂದರು. ಅಂತಹವರಿಗೂ ಈಗ, ನಾವು ವಿಷಯವನ್ನು ಸಂಪೂರ್ಣ ತಿಳಿದೇ ಹೋರಾಟ ಕೈಗೆತ್ತಿಕೊಂಡಿದ್ದೇವೆ ಎಂಬುದು ಅರಿವಾಗಿದೆ. ಈ ಅರಿವನ್ನು ಗ್ರಾಮ ಗ್ರಾಮಗಳಿಗೆ, ನಗರಗಳಿಗೆ ಹಾಗೂ ರಾಜ್ಯದಾಚೆಗೂ ವಿಸ್ತರಿಸುತ್ತೇವೆ.

* ಕರನಿರಾಕರಣೆ ಹೋರಾಟ ಯಶಸ್ವಿಯಾದ ನಂತರವೂ ಚಳವಳಿ ಮುಂದುವರಿಯಲಿದೆಯೇ?
ಹೌದು. ಬಡವರ ಉತ್ಪನ್ನಗಳಿಗೆ ಬೆಲೆ ತರಿಸಿಕೊಡುವುದು, ಅದರ ಮೂಲಕ ಬಡವರಿಗೆ ಬೆಲೆ ಬರುವಂತೆ ಮಾಡುವವರೆಗೆ ನಾವು ಸುಮ್ಮನೆ ಕೂರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT