ಹುಣಸಗಿ: ಕಾಲಜ್ಞಾನದ ವಚನಗಳ ಮೂಲಕ ಸಮಾನತೆಯ ತತ್ವ ಸಾರಿದ ಕೊಡೇಕಲ್ಲ ಬಸವೇಶ್ವರ ಜಾತ್ರೆ ಅಂಗವಾಗಿ ಜೋಡು ಪಲ್ಲಕ್ಕಿ ಉತ್ಸವ ಶನಿವಾರ ಸಂಭ್ರಮದಿಂದ ಜರುಗಿತು. ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಬಂದ ಭಕ್ತರು ಜೋಡು ಪಲಕ್ಕಿ ಮೆರವಣಿಗೆಯಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.
ಬಸವ ಪೀಠಾಧಿಪತಿ ವೀರಯ್ಯ ಅಪ್ಪನವರ ಮಾರ್ಗದರ್ಶನದಲ್ಲಿ ಶುಕ್ರವಾರ ರಾತ್ರಿ ಜೋಡು ಪಲ್ಲಕ್ಕಿಗಳಿಗೆ ಕಳಸಾರೋಹಣ ಕಾರ್ಯಕ್ರಮ ನಡೆಯಿತು. ಶನಿವಾರ ಬೆಳಿಗ್ಗೆ ಬಸವಣ್ಣನವರ ಐಕ್ಯ ಸ್ಥಳದಿಂದ (ಊರಾನ ಗುಡಿ) ಹೊರಗಿನ ಗುಡಿಯವರೆಗೆ ಕಾಲಜ್ಞಾನದ ವಚನ ಬರೆದ ಸ್ಥಳದವರೆಗೆ (ಪ್ಯಾಟಿಗುಡಿ) ಜೋಡು ಪಲ್ಲಕ್ಕಿ ಉತ್ಸವ ನಡೆಯಿತು.
ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದ ಬಳಿಕ ಧೂಳ್ ಗಾಯಿ ಒಡೆಯಲಾಯಿತು. ಗ್ರಾಮದ ಬಾರಾ ಬಲೂತಿ ವತನದಾರರು ಜಾತ್ರಾ ಮಹೋತ್ಸವಲ್ಲಿ ಪಾಲ್ಗೊಂಡಿದ್ದರು. ಜಾತ್ರೆಯ ಅಂಗವಾಗಿ ಶನಿವಾರ ಹುಣಸಗಿ ತಾಳಿಕೋಟೆ, ಮುದ್ದೇಬಿಹಾಳ, ಲಿಂಗಸುಗೂರು, ಸುರಪುರದಿಂದ ವಿಶೇಷ ಬಸ್ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು.