ಕೂಡಲಸಂಗಮ: ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳ ಹೇಳಿಕೆ ಖಂಡಿಸಿ ಮಹೇಶ್ವರ ನಗರದ ಜಂಗಮ ಸಮಾಜದವರು ನಡೆಸಿದ ಪ್ರತಿಭಟನೆಯಲ್ಲಿ ಕೆಲವರು ಶ್ರೀಗಳಿಗೆ, ಪಂಚಮಸಾಲಿ ಸಮಾಜಕ್ಕೆ ಅತ್ಯಂತ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಅವರು ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸವರಾಜ ಗೌಡರ ಹೇಳಿದರು.
ಪಂಚಮಸಾಲಿ ಪೀಠದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿ, ಅವಾಚ್ಯ ಪದಗಳಿಂದ ನಿಂದಿಸಿದ ಇಬ್ಬರ ಮೇಲೂ ಪ್ರಕರಣ ದಾಖಲಿಸುವಂತೆ ಮನವಿ ಕೊಟ್ಟಿದ್ದೇವೆ ಎಂದರು.
ಹಿರಿಯ ಮುಖಂಡ ಶೇಖರಗೌಡ ಗೌಡರ ಮಾತನಾಡಿ, ಶ್ರೀಗಳು ತಮ್ಮ ಹೇಳಿಕೆಗೆ ಸ್ಪಷ್ಟನೆ ಕೊಟ್ಟಿದ್ದಾರೆ. ವಿಷಾದ ವ್ಯಕ್ತಪಡಿಸಿದ್ದಾರೆ ಆದರೆ ಕೆಲವರು ಉದ್ದೇಶ ಪೂರ್ವಕವಾಗಿ ಪ್ರತಿಭಟನೆ ಮಾಡುತ್ತಿರುವುದು ಸರಿಯಲ್ಲ. ಮಾತೆ ಮಹಾದೇವಿ ಅವರ ಮೇಲೆ ರಂಭಾಪುರಿ ಶ್ರೀಗಳು ಆರೋಪ ಮಾಡಿದಾಗ ಈಗ ಪ್ರತಿಭಟಿಸುವರು ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು.
ಸಮಾಜದ ಮುಖಂಡ ಮಲ್ಲಣ್ಣ ಬಾಗೇವಾಡಿ ಮಾತನಾಡಿ, ಜಗತ್ತಿಗೆ ಸಮಾನತೆ ಭಿತ್ತರಿಸಿದ ಬಸವಣ್ಣನ ಸ್ಥಳಕ್ಕೆ ಶ್ರೀಗಳು ಬರಲು ಅವಕಾಶ ಕೊಡುವುದಿಲ್ಲ ಎಂದು ಕೆಲವರು ಹೇಳುತ್ತಿರುವುದು ಮೂರ್ಖತನದ ಹೇಳಿಕೆ, ಪ್ರಜಾಪ್ರಭುತ್ವದಲ್ಲಿ ಮುಕ್ತ ಸ್ವಾತಂತ್ರ್ಯ ಇದೆ ಎಂಬ ಪರಿಜ್ಞಾನವು ಅವರಿಗೆ ಇಲ್ಲ.
ಇದೇ ವಾರದಲ್ಲಿ ಸಮಾಜದ ಹಾಗೂ ಶ್ರೀಗಳ ನಿಂದನೆ ಮಾಡಿದವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಪಂಚಮಸಾಲಿ ಪೀಠದಿಂದ ಸಂಗಮೇಶ್ವರ ದೇವಾಲಯದವರೆಗೆ ಪಾದಯಾತ್ರೆ ಹಮ್ಮಿಕೊಳ್ಳುತ್ತೇವೆ. ಈ ಪಾದಯಾತ್ರೆಯಲ್ಲಿ ಎಲ್ಲ ಸಮಾಜದ ಜನರು ಭಾಗವಹಿಸುವರು ಎಂದರು.
ಸಭೆಯಲ್ಲಿ ಸಂಗಣ್ಣ ಬಾಗೇವಾಡಿ, ಅಶೋಕ ಗೌಡರ, ಪ್ರಭು ಪಾಟೀಲ, ಶೇಖಪ್ಪ ದೇಶಿ, ಶಂಕರಗೌಡ ಗೌಡರ, ಮಂಜು ಮೇಲಿನಮನಿ, ಮಲ್ಲು ಹಿರೇಗೌಡರ, ಮಹಾಂತೇಶ ಗೌಡರ, ಸಂಗಣ್ಣ ಗೌಡರ, ಮುಂತಾದವರು ಇದ್ದರು.