ಅರಸೀಕೆರೆ: ‘ನಗರದಲ್ಲಿ ನಡೆಯುತ್ತಿರುವ ಸರ್ಕಾರಿ ಜಯಂತಿ ಕಾರ್ಯಕ್ರಮಗಳು ಅರ್ಥ ಕಳೆದುಕೊಂಡು ರಾಜಕೀಯ ವೇದಿಕೆಗಳಾಗುತ್ತಿವೆ’ ಎಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಜಿ.ವಿ.ಟಿ. ಬಸವರಾಜ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನ.13ರಂದು ತಾಲ್ಲೂಕು ಕಚೇರಿ ಆವರಣದಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮ ಶಿಷ್ಟಾಚಾರ ದಂತೆ ನಡೆಯದೇ ಶಾಸಕ ಕೆ.ಎಂ.ಶಿವಲಿಂಗೇಗೌಡರ ಅಣತಿಯಂತೆ ನಡೆಯಿತು. ಕನಕರ ಬಗ್ಗೆ ಮಾತನಾಡದೇ ಹುಸಿ ಭರವಸೆಗಳ ನೀಡಿದರು. ಸಮುದಾಯ ಭವನ ನಿರ್ಮಾಣಕ್ಕೆ ₹ 50 ಲಕ್ಷ ಕೊಡುವುದಾಗಿ ಘೋಷಿಸಿದರು. ಇದು ಮತದಾರರಿಗೆ ನೀಡಿದ ಆಮಿಷ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಗುವುದು. ಮುಂದೆ ಜಯಂತಿ ಕಾರ್ಯಕ್ರಮಗಳಲ್ಲಿ ಇದು ಪುನರಾವರ್ತನೆಯಾದಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಮಾಜಿ ಶಾಸಕ ಕೆ.ಪಿ.ಪ್ರಭುಕುಮಾರ್ ಮಾತನಾಡಿ, ‘ಶಾಸಕರು ಎಲ್ಲ ಕಡೆ ಅಭಿವೃದ್ಧಿ ಕೆಲಸ ನಾನೇ ಮಾಡಿದ್ದೇನೆ ಎನ್ನುತ್ತಾರೆ. ಅದು ಸರ್ಕಾರದ ಹಣ ಎಂದು ಮರೆಯಬಾರದು’ ಎಂದರು.
ನಗರ ಬಿಜೆಪಿ ಅಧ್ಯಕ್ಷ ಮನೋಜ್ ಕುಮಾರ್, ಬಿಜೆಪಿ ಗ್ರಾಮೀಣ ಘಟಕದ ಕಾರ್ಯದರ್ಶಿ ಶ್ರೀನಿವಾಸ್, ನಗರ ಘಟಕದ ಕಾರ್ಯದರ್ಶಿ ಸುಭಾಷ್, ಮುಖಂಡರಾದ ಜಯದೇವ್, ರವಿ ಕುಮಾರ್, ಲಾಳನಕೆರೆ ಯೋಗೀಶ್ ಇದ್ದರು.