ಚಿಕ್ಕೋಡಿ: ಸಚಿವರಾದ ಬಳಿಕ ಪ್ರಥಮ ಬಾರಿಗೆ ಚಿಕ್ಕೋಡಿ ಪಟ್ಟಣಕ್ಕೆ ಬುಧವಾರ ಬಂದಿದ್ದ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅವರನ್ನು ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲ್ಲೂಕು ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಪಟ್ಟಣದ ವಕೀಲ ಎಚ್.ಎಸ್.ನಸಲಾಪುರೆ ಅವರ ಮನೆಗೆ ಬಂದು ಸತ್ಕಾರ ಸ್ವೀಕರಿಸಿದ ಸಚಿವ ರೇವಣ್ಣ, ‘ಪ್ರಯಾಣಿಕರಿಗೆ ಅನುಕೂಲವಾಗಲು ಗಡಿ ಭಾಗದಲ್ಲಿ ಸಾರಿಗೆ ಸಂಸ್ಥೆಯು ಒಳ್ಳೆಯ ಸೌಲಭ್ಯ ನೀಡುತ್ತಿದೆ. ಬಸ್ ಸೇವೆ ಇಲ್ಲದ ಗ್ರಾಮಗಳಿಗೆ ನೂತನ ಬಸ್ ಸೇವೆ ನೀಡಲು ಸರ್ಕಾರ ಬದ್ಧವಾಗಿದೆ.
ಹಾಲುಮತ ಕುರುಬ ಸಮಾಜವು ಸಂಘಟನಾತ್ಮಕ ಹೋರಾಟದ ಮೂಲಕ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯ ಮಾಡಿದ್ದಾರೆ. ಮುಖ್ಯಮಂತ್ರಿಗಳ ಜೊತೆ ಸಮಾಲೋಚಿಸಿ ಸಮಾಜದ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ಮಾಡಲಾಗುವುದು’ ಎಂದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಸೋಮಶೇಖರ ಬಿ, ತಾಲ್ಲೂಕು ಘಟಕದ ಸುರೇಶ ಕಟ್ಟಿಕರ, ವಕೀಲ ಎಚ್.ಎಸ್.ನಸಲಾಪೂರೆ, ರೂಪಾ ನಸಲಾಪೂರೆ, ಲಕ್ಷ್ಮೀಕಾಂತ ಉಪಸ್ಥಿತರಿದ್ದರು.