ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮು ಸೌಹಾರ್ದದಂತೆಯೇ ಭಾಷಾ ಸೌಹಾರ್ದವೂ ಮುಖ್ಯ: ಸಿದ್ದರಾಮಯ್ಯ

Last Updated 24 ನವೆಂಬರ್ 2017, 9:55 IST
ಅಕ್ಷರ ಗಾತ್ರ

ಮಹಾರಾಜ ಕಾಲೇಜು ಮೈದಾನ, ಮೈಸೂರು: ಇಲ್ಲಿ ನಡೆಯುತ್ತಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ ಭಾಷಣದ ಪೂರ್ಣ ಪಠ್ಯ ಇಲ್ಲಿದೆ.

ಈ ಸಮ್ಮೇಳನಾಧ್ಯಕ್ಷರಾದ  ಪ್ರೊ ಚಂದ್ರಶೇಖರಪಾಟೀಲ್ ಅವರೆ, ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ  ನಾಡೋಜ ಡಾ ಬರಗೂರು ರಾಮಚಂದ್ರಪ್ಪ ಅವರೆ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಹಾಗೂ ಲೋಕೋಪಯೋಗಿ ಸಚಿವರಾದ ಡಾ ಹೆಚ್. ಸಿ.ಮಹದೇವಪ್ಪ ಅವರೆ, ಕನ್ನಡ ಮತ್ತು ಸಂಸ್ಕೃತಿ ಹಾಗೂ   ಮಹಿಳಾ ಮತ್ತುಮಕ್ಕಳ ಅಭಿವೃದ್ಧಿ ಸಚಿವರಾದ  ಶ್ರೀಮತಿ ಉಮಾಶ್ರೀಅವರೆ,ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ  ಶ್ರೀತನ್ವೀರ್ ಸೇಠ್ ಅವರೆ, ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಸಚಿವರಾದ  ಡಾ ಎಂ.ಸಿ. ಮೋಹನ್ ಕುಮಾರಿ ಅವರೆ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ ಮನುಬಳಿಗಾರ್ ಅವರೆ, ಸಂಸದ-ಶಾಸಕ ಮಿತ್ರರೆ, ಕನ್ನಡ ಸಾರಸ್ವತ ಲೋಕದ ದಿಗ್ಗಜರೆ, ವೇದಿಕೆಯ ಮೇಲಿನ ಎಲ್ಲಾಗಣ್ಯರೆ, ಮಾಧ್ಯಮದ ಸ್ನೇಹಿತರೆ, ನುಡಿ ಹಬ್ಬಕ್ಕೆ ಸಾಕ್ಷಿಯಾಗಲು ಆಗಮಿಸಿರುವ ಕನ್ನಡದ ಎಲ್ಲಾ ಸೋದರ-ಸೋದರಿಯರೆ,

1. ಕರ್ನಾಟಕದ ಸಾಂಸ್ಕೃತಿಕ ನಗರ ಎಂದೇ ಪ್ರಸಿದ್ಧವಾಗಿರುವ ಮೈಸೂರು ನಗರದಲ್ಲಿ ಆಯೋಜಿಸಿರುವ ಎಂಭತ್ತ ಮೂರನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಅಭಿಮಾನದಿಂದ ಹಾಗೂ ಸಂತೋಷದಿಂದ ಉದ್ಘಾಟಿಸಿದ್ದೇನೆ.  ಇದು ನನ್ನ ಬದುಕಿನ ಸಾರ್ಥಕ ಕ್ಷಣಗಳಲ್ಲೊಂದು. ಇದಕ್ಕೆ ಹಲವಾರು ಕಾರಣಗಳಿವೆ.

2. ಮೊದಲನೆಯದಾಗಿ, ನನ್ನ ಹುಟ್ಟೂರು ಮೈಸೂರು. ನನಗೆ ಕನ್ನಡದ ದೀಕ್ಷೆಯನ್ನು ಕೊಟ್ಟ ನೆಲ ಮೈಸೂರು. ಇದೇ ಕನ್ನಡ ಕರ್ಮಭೂಮಿಯ ಗರಡಿಯಲ್ಲಿ ಕನ್ನಡ ಪ್ರಜ್ಞೆಯನ್ನು ಬೆಳೆಸಿಕೊಂಡವನು ನಾನು. ಕನ್ನಡ ನಾಡು-ನುಡಿಯ ಬಗ್ಗೆ ನನ್ನಲ್ಲಿರುವ ಬದ್ಧತೆಗೆ, ಮೈಸೂರಿನಹಿರಿಯ ಮತ್ತು ಕಿರಿಯ ಸಾಹಿತಿಗಳು, ಕನ್ನಡದಹೋರಾಟಗಾರರು ಮತ್ತು ಕನ್ನಡ ಪ್ರೇಮಿಗಳುಇಲ್ಲಿ ನಿರ್ಮಿಸಿರುವ ಕನ್ನಡದ ವಾತಾವರಣಕಾರಣ ಎಂದು ಹೇಳಲು ನನಗೆಹೆಮ್ಮೆಯಾಗುತ್ತಿದೆ.

3. ಎರಡನೆಯದಾಗಿ, ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯ ರೂವಾರಿ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಅವರು ಹುಟ್ಟಿದ ನೆಲವೂ ಮೈಸೂರು.ಒಡೆಯರ್ ಅವರು ಸಾಮಾಜಿಕ ನ್ಯಾಯದಹರಿಕಾರರು ಮಾತ್ರವಲ್ಲ, ಅಪ್ಪಟ ಕನ್ನಡ ಪ್ರೇಮಿಯೂ ಹೌದು. ನುಡಿ ಬೆಳೆಯಬೇಕಾದರೆ ನಾಡು ಅಭಿವೃದ್ಧಿಯಾಗಬೇಕು ಎಂಬ ಕನಸುಕಂಡವರು.

4. ಭಾರತದಲ್ಲಿ ಪ್ರಜಾಪ್ರಭುತ್ವವು ಚಿಗುರೊಡೆಯುವ ಮುನ್ನವೇ, ಮೈಸೂರು ಪ್ರಜಾಪ್ರತಿನಿಧಿ ಸಭೆಯ ಹೆಸರಿನಲ್ಲಿ ಪ್ರಪ್ರಥಮ ಬಾರಿಗೆಪ್ರಜಾಪ್ರಭುತ್ವದ ಮೇರು ಪರಿಕಲ್ಪನೆಯನ್ನು ಪರಿಚಯಿಸಿದ ಶ್ರೀ ಚಾಮರಾಜೇಂದ್ರ ಒಡೆಯರ್ ಅವರ ಸದಾಶಯಗಳನ್ನು ಮುಂದುವರೆಸಿ ಪ್ರಭುವಾಗಿದ್ದರೂ ಪ್ರಜಾಪ್ರಭುತ್ವದಮಾದರಿಯಲ್ಲಿಯೇ ಆಡಳಿತ ನಡೆಸಿದವರು  ಶ್ರೀಕೃಷ್ಣರಾಜ ಒಡೆಯರ್ ಅವರು.       

5.ಪ್ರಜೆಗಳ ಬಗ್ಗೆ ಅವರಿಗಿದ್ದ ಕಾಳಜಿ ಮತ್ತುದೂರದೃಷ್ಟಿ ರಾಜಕಾರಣಿಗಳಾಗಿರುವ ನಮಗೆಲ್ಲಾ ಮಾದರಿ. ಕನ್ನಂಬಾಡಿ ಜಲಾಶಯವನ್ನುನಿರ್ಮಿಸಲು ಅರಮನೆಯ ಆಭರಣಗಳನ್ನುಮಾತ್ರವಲ್ಲ, ಮಹಾರಾಣಿಯವರ ಮೈ ಮೇಲಿನಒಡವೆಗಳನ್ನೂ ಮಾರಾಟ ಮಾಡಿದ್ದ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರಿಗೆ ನಾವೆಲ್ಲರೂ ಸದಾಕಾಲ ಋಣಿಯಾಗಿರಬೇಕು. ಈ ಸಮ್ಮೇಳನವು ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಅವರಿಗೆನಾವು ಸಲ್ಲಿಸುವ ಗೌರವವೂ ಹೌದು.                                

6. ಮೂರನೆಯದಾಗಿ, ರಾಜ್ಯದಮುಖ್ಯಮಂತ್ರಿಯಾಗಿ ಹುಟ್ಟಿದ ಊರಿನಲ್ಲಿಯೇ ಸಮ್ಮೇಳನವನ್ನು ಉದ್ಘಾಟಿಸುವ ಭಾಗ್ಯ ನನ್ನದು.

7. ಈ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಪ್ರೊ.ಚಂದ್ರಶೇಖರ ಪಾಟೀಲ್ ಅವರನ್ನು ಆಯ್ಕೆಮಾಡಿರುವುದು ಹೆಮ್ಮೆ ಹಾಗೂ ಗೌರವದ ವಿಚಾರ. ಮೊದಲಿಗೆ ಅವರಿಗೆ ಅಭಿನಂದನೆಗಳು.

8. ಕರ್ನಾಟಕದ ಮತ್ತೊಂದು ಸಾಂಸ್ಕೃತಿಕ ನಗರವಾದ ಧಾರವಾಡದಲ್ಲಿ ತಮ್ಮ ವೃತ್ತಿಜೀವನವನ್ನು ನಡೆಸಿದರೂ ನಿಜವಾದ ನಾಡೋಜನಾಗಿ ಚಂಪಾ ಅವರು ಇಡೀರಾಜ್ಯದಲ್ಲಿ ಕನ್ನಡದ ಯುವ ಮನಸ್ಸುಗಳನ್ನುಬೆಳಸಿದವರು. ತಮ್ಮ ಸಂಕ್ರಮಣ ಪತ್ರಿಕೆಯಮೂಲಕ ಕನ್ನಡದ ಸಾಕ್ಷಿ ಪ್ರಜ್ಞೆಯಾಗಿದುಡಿದವರು. ‘ಕನ್ನಡ ಕನ್ನಡ ಬರ್ರಿ ನಮ್ಮಸಂಗಡ’ ಎಂದು ಇಡೀ ಕರ್ನಾಟಕದ ಮಹಾ ಮನಸ್ಸುಗಳನ್ನು ಕನ್ನಡದ ಸೇವೆಗೆ ಕಂಕಣಬದ್ಧರಾಗಿಸಿದವರು. ಚಂಪಾ ಅವರಿಗೆ ಮತ್ತೊಮ್ಮೆ ನನ್ನ ಅಭಿನಂದನೆಗಳು.

9. ಮೈಸೂರು ಅನೇಕ ಸಾಹಿತಿಗಳ ತವರು. ಬಿಎಂಶ್ರೀ, ತೀನಂಶ್ರೀ, ಕುವೆಂಪು, ಡಿ. ಎಲ್.ನರಸಿಂಹಾಚಾರ್ ಅವರಿಂದ ಮೊದಲ್ಗೊಂಡುದೇಜಗೌ, ಹಾ ಮಾ ನಾಯಕ್,  ಜಿ. ಎಸ್.ಶಿವರುದ್ರಪ್ಪ, ಡಾ ಪ್ರಭುಶಂಕರ, ಸು ಜ ನಾ,  ಡಾಟಿ. ವಿ. ವೆಂಕಟಾಚಲ ಶಾಸ್ತ್ರಿ, ಎಸ್. ಎಲ್.ಬೈರಪ್ಪ, ದೇವನೂರ ಮಹಾದೇವ, ಆಲನಹಳ್ಳಿಕೃಷ್ಣ, ಹೆಚ್. ಜೆ. ಲಕ್ಕಪ್ಪ ಗೌಡ, ಹಿ. ಚಿ.ರಾಮಚಂದ್ರಗೌಡ, ಸಿ. ಪಿ. ಕೃಷ್ಣ ಕುಮಾರ್,ಪ್ರಧಾನ್ ಗುರುದತ್, ಜಿ. ಹೆಚ್. ನಾಯಕ್, ಚ.ಸರ್ವಮಂಗಳ ಅವರವರೆಗೆ ಹಲವುವಿದ್ವಜ್ಜನರಿಂದ ಸಾಂಸ್ಕೃತಿಕವಾಗಿಶ್ರೀಮಂತಗೊಂಡ ನಗರ ಇದಾಗಿದೆ.

10. ಈ ಮಹನೀಯರೇ ನಮಗೆ ವೈಚಾರಿಕ ಸ್ಪಷ್ಟತೆಯನ್ನು, ಮುಂದಿನ ಗುರಿಯನ್ನು, ಸಾಗಬೇಕಾದ ದಾರಿಯನ್ನು ತೋರಿಸಿಕೊಟ್ಟವರು.ಇದನ್ನು ಹೇಳುವಾಗ ರಾಷ್ಟ್ರಕವಿ ಕುವೆಂಪು ಅವರುಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ರಾಜ್ಯ-ಕೇಂದ್ರಗಳ ಸಂಬಂಧದ ಬಗ್ಗೆ ಆಡಿರುವ ಮಾತುಗಳು ನನಗೆ ನೆನಪಾಗುತ್ತವೆ.

11. ಕುವೆಂಪು ಅವರು ಹೇಳುತ್ತಾರೆ : “ಭರತಖಂಡವು ಒಂದು ಜನಾಂಗವೂ ಅಲ್ಲ,ಅನೇಕ ಜನಾಂಗಗಳೂ ಅಲ್ಲ; ಅದು ಅನೇಕಜನಾಂಗಗಳ ಒಂದು ಜನಾಂಗ. ಆದ್ದರಿಂದಲೇಭರತ ಮಾತೆಯನ್ನು ಎಷ್ಟರಮಟ್ಟಿಗೆಆರಾಧಿಸುತ್ತಿದ್ದೇವೆಯೋ   ಅಷ್ಟರ ಮಟ್ಟಿಗೆಕರ್ನಾಟಕ ಮಾತೆಯನ್ನು ಪೂಜಿಸಲು ನಮಗೆ ಸಾಧ್ಯವಾಗಿದೆ.

12. ತನ್ನ ಸಂಸಾರವನ್ನು ಪ್ರೀತಿಸಿದ ಮಾತ್ರದಿಂದಲೇ ಯಾರೂ ಸಮಾಜಕ್ಕೆ ವೈರಿಯಾಗಲಾರನು, ಸಮಾಜವೆಂದರೇನು ?ಅಂತಹ ಅಸಂಖ್ಯ ಸಮಾಜದ ಸುಖ, ಎಲ್ಲಾಪ್ರಾಂತಗಳ ಅಂಗ ಸೌಂದರ್ಯದಿಂದ ತಾನೇಭರತ ಮಾತೆ ಸರ್ವಾಂಗ ಸುಂದರಿಯಾಗುತ್ತಾಳೆ.ಆದುದರಿಂದ ಪ್ರಾಂತ-ಪ್ರಾಂತಗಳ ಹಿತಾಸಕ್ತಿ ರಕ್ಷಣೆಯ ಸ್ವಾತಂತ್ರ್ಯವು  ಭರತ ಖಂಡದ ಪೂರ್ಣಸ್ವಾತಂತ್ರ್ಯದಷ್ಟೇ ಅವಶ್ಯವಾದುದು.                  

13. ಪ್ರತಿಯೊಂದು ಪ್ರಾಂತ್ಯಕ್ಕೂ ಅದರ ಬೆಳೆ,ಕೈಗಾರಿಕೆ, ಹಣಕಾಸಿನ ವ್ಯವಸ್ಥೆ, ಸಾಹಿತ್ಯ-ಸಂಸ್ಕೃತಿ ಮೊದಲಾದವುಗಳನ್ನು ಕಾಪಾಡಿಕೊಳ್ಳುವ ಹಕ್ಕುಅತ್ಯಾವಶ್ಯಕವಾಗಿ ಬೇಕಾಗುತ್ತದೆ. ಆ ಹಕ್ಕಿಗೆ ಭಂಗಬಂದರೆ ಭರತ ಖಂಡವು ಸಂಪೂರ್ಣಸ್ವರಾಜ್ಯವನ್ನು ಸಂಪಾದಿಸಿದರೂ ಆ ಸ್ವಾತಂತ್ರ್ಯವು ಭಗ್ನದರ್ಪಣವಾಗುತ್ತದೆ. ಹಾಗಾಗ ಬೇಕೆಂದು ಯಾವ ದೇಶಭಕ್ತರೂ ಹಾರೈಸುವುದಿಲ್ಲ.ಹಾಗಾಗದಂತೆ ನೋಡಿಕೊಳ್ಳುವುದು ನಮ್ಮ ಪರಮಪ್ರಾಣ ಕರ್ತವ್ಯ, ಇವು ಕುವೆಂಪು ಅವರುಹೇಳಿರುವ ಮಾತುಗಳು.

14. ಇದು ಕರ್ನಾಟಕಕ್ಕೆ ಮಾತ್ರ ಹೇಳಿರುವ ಮಾತುಗಳೆಂದು ಭಾವಿಸಬೇಕಾಗಿಲ್ಲ. ಒಕ್ಕೂಟ ವ್ಯವಸ್ಥೆಯೊಳಗೆ ಎಲ್ಲಾ ರಾಜ್ಯಗಳ ಸ್ವತಂತ್ರಅಸ್ಮಿತೆಯ ಬಗ್ಗೆ ಹೇಳಿರುವ ಮಾತುಗಳು. ಈ ಬಗೆಯ ನಡೆ-ನುಡಿಗಳು ಕರ್ತವ್ಯದ ಪ್ರಮುಖ ಭಾಗಗಳು. ನಮ್ಮ ಸರ್ಕಾರ ಈ ಕರ್ತವ್ಯ ಭಾಗವನ್ನು ಸದಾ ಎಚ್ಚರಗತಿಯಲ್ಲಿ ಪರಿಪಾಲಿಸಿಕೊಂಡು ಬರುತ್ತಿದೆ.

15. ಕನ್ನಡ ಎಂದರೆ ಕೇವಲ ವರ್ಣಮಾಲೆಯಲ್ಲ! ಅದು ಕನ್ನಡದ ಜನ, ನೆಲ, ಜಲ,  ಬದುಕು,ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ ಎಲ್ಲವನ್ನೂ ಒಳಗೊಂಡ ಕರ್ನಾಟಕ, ಅದುವೇ ಕನ್ನಡತನ. ಕರ್ನಾಟಕದ ನೆಲದಲ್ಲಿ ವಾಸಿಸುತ್ತಿರುವವರೆಲ್ಲರೂ ಕನ್ನಡಿಗರು ಎಂದು ನಾವು ತಿಳಿದು ಕೊಂಡಿದ್ದೇವೆ.

16. ಕನ್ನಡ ಎನ್ನುವುದು ನನಗೆ ರಾಜಕೀಯ ಅಲ್ಲ.ಅದು ನನ್ನ ಬದುಕು. ನಾನು ಹುಟ್ಟು ಕನ್ನಡಪ್ರೇಮಿ. ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿ ಸಾರ್ವತ್ರಿಕ ಜೀವನ ಪ್ರಾರಂಭಿಸಿದ್ದ ನಾನುಅಲ್ಲಿಂದ ಇಲ್ಲಿಯವರೆಗೆ ನೆಲ-ಜಲ-ನುಡಿಯ ಬಗ್ಗೆಎಂದೂ ರಾಜಿಮಾಡಿ ಕೊಂಡಿಲ್ಲ,  ಎಂದೂ ರಾಜಕೀಯವನ್ನೂ ಮಾಡಿಲ್ಲ.

17. ಕನ್ನಡ ನಾಡು, ನುಡಿ ಮತ್ತು ಜನ ಬೇರೆ ಬೇರೆ ಅಲ್ಲ ಎನ್ನುವ ಅಭಿಪ್ರಾಯ ನನ್ನದು.ಆದ್ದರಿಂದಲೇ ಕಳೆದ ನಾಲ್ಕೂವರೆ ವರ್ಷಗಳಲ್ಲಿ ರೂಪಿಸಿ ಬೆಳೆಸಿರುವ ‘ಕರ್ನಾಟಕ ಅಭಿವೃದ್ದಿ ಮಾದರಿ’ ಎನ್ನುವುದು ಈ ನೆಲದ ಭಾಷಾಅಸ್ಮಿತೆಯನ್ನು ಎತ್ತಿಹಿಡಿಯುವುದರ ಜೊತೆಗೆ ನಾಡಿನ ಸಮಗ್ರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಆಶಯವನ್ನೂ ಹೊಂದಿದೆ.

18. ಭಾಷೆ ಎನ್ನುವುದು ಕೇವಲ ಭಾವನಾತ್ಮಕ ವಿಷಯ ಅಲ್ಲ. ಭಾಷೆಯ ವಿಷಯ ಬಂದಾಗ ನಾವು ಭಾವುಕರಾಗುತ್ತೇವೆ, ಇದು ತಪ್ಪಲ್ಲ, ಆದರೆ,ಅದು ಅಷ್ಟಕ್ಕೆ ನಿಲ್ಲಬಾರದು. ಅದು ಬದುಕು ರೂಪಿಸುವ ಸಮರ್ಥ ಸಾಧನವೂ ಆಗಬೇಕು. ನಮ್ಮದು ಕೇವಲ ಮಾತನಾಡುವ ಸರ್ಕಾರ ಅಲ್ಲ,ಕೆಲಸ ಮಾಡುವ ಸರ್ಕಾರ. ಗುರಿ ಮತ್ತು ದಾರಿ ಎರಡರಲ್ಲಿಯೂ ನಮಗೆ ಸ್ಪಷ್ಟತೆ ಇದೆ.

19. ಭಾಷೆ ಅನ್ನದ ಭಾಷೆಯಾದರೆ ಅದು ಬೆಳೆಯುತ್ತದೆ, ಉಳಿಯುತ್ತದೆ ಎನ್ನುವ ಮಾತಿದೆ.ಆದ್ದರಿಂದ ಕೃಷಿ, ಉದ್ಯಮ, ಉದ್ಯೋಗ, ವಿಜ್ಞಾನ,ತಂತ್ರಜ್ಞಾನ ಹೀಗೆ ಒಟ್ಟು ರಾಜ್ಯದ ಅಭಿವೃದ್ದಿಯಲ್ಲಿಯೇ ಕನ್ನಡದ ಬೆಳವಣಿಗೆ ಕೂಡಾ ಇದೆ ಎಂದು ನಮ್ಮ ಸರ್ಕಾರ ನಂಬಿದೆ.

20. ನಾವು ರೂಪಿಸಿ ಅನುಷ್ಠಾನಗೊಳಿಸಿರುವ ಕರ್ನಾಟಕ ಅಭಿವೃದ್ಧಿ ಮಾದರಿಯ ಆಶಯ ಕೂಡಾ ಇದೇ ಆಗಿದೆ. ಇದು ಸಾಧ್ಯವಾಗಬೇಕೆಂದರೆ ಜ್ಞಾನ, ವಿಜ್ಞಾನಗಳ ಸೃಷ್ಟಿ ನಮ್ಮದೇ ಆದ ಭಾಷೆಯಲ್ಲಿ ಸಾಧ್ಯವಾಗಬೇಕು.ಭಾಷೆಯ ಮೂಲಕ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುವಂತಹ ವಾಣಿಜ್ಯಕ ಆರ್ಥಿಕವಿನ್ಯಾಸಗಳೂ ಕನ್ನಡಕ್ಕೆ ಲಭ್ಯವಾಗಬೇಕು.

21. ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಕನ್ನಡ ಮತ್ತು ಕನ್ನಡಿಗರಿಗಾಗಿ  ನಮ್ಮ ಸರ್ಕಾರಮಾಡಿದ ಕೆಲಸದ ಬಗ್ಗೆ ನಿಜಕ್ಕೂ ನನಗೆಹೆಮ್ಮೆಯಿದೆ. ಇದನ್ನು ರಾಜ್ಯದ ಸಾಹಿತಿಗಳು,ಚಿಂತಕರು, ಕನ್ನಡ ಪರ ಹೋರಾಟಗಾರರು ಮೆಚ್ಚಿಕೊಂಡಾಡಿದ್ದಾರೆ. ಅವರೆಲ್ಲರಿಗೂ ನಾನು ಈ ಸಂದರ್ಭದಲ್ಲಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಕರ್ನಾಟಕವನ್ನು ನಾವೆಲ್ಲಾ ಕೂಡಿ ಇನ್ನಷ್ಟುಬಲಿಷ್ಠವಾಗಿ ನಿರ್ಮಿಸಬೇಕಾಗಿದೆ. ನವ ಕರ್ನಾಟಕ ನಿರ್ಮಾಣಕ್ಕೆ ಸಿದ್ಧರಾಗಬೇಕಾಗಿದೆ.

22. ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಶೇಕಡಾ ಐದರಷ್ಟು ಮೀಸಲಾತಿ,ಖಾಸಗಿ ಕ್ಷೇತ್ರದ ಉದ್ಯಮಗಳಲ್ಲಿಯೂ ಸಿ ಮತ್ತು ಡಿ ವರ್ಗದ ನೌಕರರ ನೇಮಕಾತಿಯಲ್ಲಿ ಕನ್ನಡಿಗರಿಗೆ ನೂರಕ್ಕೆ ನೂರರಷ್ಟು ಉದ್ಯೋಗ ಮೀಸಲಾತಿ, ಸಿಬಿಎಸ್‍ಇ, ಐಸಿಎಸ್‍ಇ ಶಾಲೆಗಳೂ ಸೇರಿದಂತೆ  ಎಲ್ಲಾ ಇಂಗ್ಲೀಷ್ ಮಾಧ್ಯಮದ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಕನ್ನಡಭಾಷೆ ಕಲಿಕೆ ಕಡ್ಡಾಯಗೊಳಿಸುವ ಭಾಷಾ ನೀತಿಜಾರಿ, ಗ್ರಾಮೀಣ ಬ್ಯಾಂಕುಗಳ ನೇಮಕಾತಿ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ನಡೆಸಲು ಕ್ರಮ,ರಾಷ್ಟ್ರೀಕೃತ, ಗ್ರಾಮೀಣ ಮತ್ತು ಷೆಡ್ಯೂಲ್ಡ್ಬ್ಯಾಂಕ್‍ಗಳ ಸಿಬ್ಬಂದಿ ಕಡ್ಡಾಯವಾಗಿ ಕನ್ನಡ ಕಲಿಯುವಂತೆ ಸೂಚಿಸಿ ಸುತ್ತೋಲೆ, ಚಲನಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾ ಪ್ರದರ್ಶನ ಕಡ್ಡಾಯಗೊಳಿಸಿ ಆದೇಶ, ಗುಣಮಟ್ಟದ 125ಕನ್ನಡ ಸಿನಿಮಾಗಳಿಗೆ ಸಹಾಯಧನ,ಕನ್ನಡೇತರರಿಗೆ ಕನ್ನಡ ಕಲಿಸಲು ಬೆಂಗಳೂರು ನಗರದಲ್ಲಿ ಕನ್ನಡ ಕಲಿಕಾ ಕೇಂದ್ರಗಳ ಪ್ರಾರಂಭ –ಇವು ನಮ್ಮ ಸರ್ಕಾರ ಕೈಗೊಂಡಿರುವ ಪ್ರಮುಖ ಕನ್ನಡ ಪರ ನಿರ್ಧಾರಗಳು.

23. ಸಾಂಸ್ಕೃತಿಕ ಕರ್ನಾಟಕವನ್ನು ಇನ್ನಷ್ಟು ಬಲಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ.ಇದಕ್ಕಾಗಿ ಸಾಂಸ್ಕೃತಿಕ ನೀತಿಯನ್ನು ಅಂಗೀಕರಿಸಿಅನುಷ್ಠಾನಕ್ಕೆ ತರುತ್ತಿದ್ದೇವೆ. ಮೂಲ ಸೌಕರ್ಯಕಲ್ಪಿಸಲು ಈ ವರ್ಷ 23 ಕೋಟಿ ರೂಪಾಯಿನೀಡಲಾಗಿದೆ.

24. ನಮ್ಮ ಕನ್ನಡ ಪರಂಪರೆ ತಾನು ಬದುಕು ಮತ್ತು ಬೇರೆಯವರನ್ನು ಬದುಕಲು ಬಿಡು ತತ್ವಕ್ಕೆ ಆದ್ಯತೆ ನೀಡುವ ಪರಂಪರೆ. `ಮನುಷ್ಯಜಾತಿತಾನೊಂದೆ ವಲಂ' ಎಂದು  ಹತ್ತನೇ ಶತಮಾನದಲ್ಲಿಯೇ ನಮ್ಮ ಆದಿಕವಿ ಪಂಪಕನ್ನಡದ ಆದರ್ಶನವನ್ನು ಘೋಷಿಸಿದ್ದಾನೆ.ಹದಿನೈದನೇ ಶತಮಾನದ ಕನಕದಾಸರು `ಕುಲ,ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದನೆಲೆಯನೇನಾದರೂ ಬಲ್ಲಿರಾ ? ಬಲ್ಲಿರಾ ? 'ಎಂದಿದ್ದಾರೆ. ಇಪ್ಪತ್ತನೇ ಶತಮಾನದ ಕುವೆಂಪು`ವಿಶ್ವಮಾನವ ತತ್ವ ’ವನ್ನು ಎತ್ತಿಹಿಡಿದಿದ್ದಾರೆ.

25. ‘ಧರ್ಮ' ಎಂಬುದು ಸಂಕುಚಿತ ಅರ್ಥಕ್ಕೆಸೀಮೀತಗೊಳ್ಳದೆ, `ಧರ್ಮ-ಮಾನವಧರ್ಮ'ಎಂದು ನಂಬಿದ ಪರಂಪರೆ ನಮ್ಮದು. ದೇವರುಗುಡಿಯಲ್ಲಿ ಇಲ್ಲ, ಮನುಷ್ಯನ ಅಂತರಂಗದಲ್ಲಿದ್ದಾನೆ, `ದೇಹವೇ ದೇಗುಲ'ಎಂದು ವಚನಕಾರರು ಘೋಷಿಸಿದರು. ದೇಹವೇದೇವಾಲಯ ಎಂದಾಗ, ಎಲ್ಲಾ ಮನುಷ್ಯರುಅವರ ದೇಹವೂ ದೇವನಆವಾಸಸ್ಥಾನವಾಗುತ್ತದೆ. ಅಲ್ಲಿ ಒಬ್ಬರನ್ನುಮತ್ತೊಬ್ಬರು ಹಿಂಸಿಸಲು ಅವಕಾಶವಿಲ್ಲ.

26. ‘ದಯೆಯೇ ಧರ್ಮದ ಮೂಲವಯ್ಯ ! ದಯೆಇಲ್ಲದ ಧರ್ಮ ಯಾವುದಯ್ಯ ? ಎಂದು ಹೇಳಿದ ಬಸವಣ್ಣನವರು ಧರ್ಮದ ಹೆಸರಿನಲ್ಲಿ ಹಿಂಸಾಚಾರಕ್ಕೆ ಪ್ರಚೋದಿಸುವವರಿಗೆ ಉತ್ತರ ನೀಡಿದ್ದಾರೆ. ಧರ್ಮದ ಹೆಸರಿನಲ್ಲಿ ಹಿಂಸಾಚಾರಕ್ಕೆಪ್ರಚೋದಿಸುವವರು ಧರ್ಮದ್ರೋಹಿಗಳು, ಬಸವದ್ರೋಹಿಗಳು.

27. ಕೋಮು ಸೌಹಾರ್ದದಂತೆಯೇ, ಭಾಷಾ ಸೌಹಾರ್ದವೂ ಮುಖ್ಯ ಎಂದು ನಂಬಿದ್ದೇವೆ.ಕರ್ನಾಟಕವು `ಸರ್ವಜನಾಂಗದ ಶಾಂತಿಯತೋಟ' ಎಂದು ಕುವೆಂಪು ಘೋಷಿಸಿದ್ದಾರೆ. ಆದರೆ, ಇಲ್ಲಿ ಬಂದು ನೆಲೆಸುವ ಅನ್ಯ ಭಾಷಿಕರುಸ್ವತಂತ್ರವಾಗಿ ಇಲ್ಲಿ ತಮ್ಮ ಬದುಕನ್ನುರೂಪಿಸಿಕೊಳ್ಳಲು ಅವರಿಗೆಸ್ವತಂತ್ರವಿದೆಯಾದರೂ, ಇಲ್ಲಿನ ನೆಲದ ಭಾಷೆಕನ್ನಡವನ್ನು  ಅವರು ಕಲಿಯಲೇ ಬೇಕು ಎಂಬುದು ನಮ್ಮ ಸದಾಶಯ.

28. ನಾನು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಬಲವಾದ ನಂಬಿಕೆ ಹೊಂದಿದವನು. ಸಾಹಿತ್ಯ, ಸಂಗೀತ,ಚಿತ್ರಕಲೆ, ಮಾಧ್ಯಮ ಎಲ್ಲವೂ ಈ ಅಭಿವ್ಯಕ್ತಿಸ್ವಾತಂತ್ರ್ಯದ ವಿಭಿನ್ನ ಮುಖಗಳು. ಅಭಿಪ್ರಾಯಗಳು ರೂಪುಗೊಳ್ಳುವುದೇ ಮುಕ್ತವಾದ ಅಭಿವ್ಯಕ್ತಿ ಮೂಲಕ. ಇತ್ತೀಚೆಗೆ ಈ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದೇಶ ಭಕ್ತಿ, ಧರ್ಮಭಕ್ತಿ, ರಾಷ್ಟ್ರೀಯತೆ ಮೊದಲಾದವುಗಳ ಹೆಸರಲ್ಲಿ ದಮನ ಮಾಡುವ ಪ್ರಯತ್ನ ನಡೆಯುತ್ತಿರುವುದುಖಂಡನೀಯ. ಪ್ರಜಾಪ್ರಭುತ್ವ ಗಟ್ಟಿಗೊಳ್ಳುವುದೇ ಮುಕ್ತ ಅಭಿವ್ಯಕ್ತಿಯ ಮೂಲಕ ಎಂಬುದು ನನ್ನನಂಬಿಕೆ.

29. ಮಾತೃ ಭಾಷೆಯ ಶಿಕ್ಷಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಈ ಬಗೆಗೆ ಇರುವ ಕಾನೂನು ತೊಡಕನ್ನು ನಿವಾರಿಸಲು ಸಂವಿಧಾನಕ್ಕೆ ತಿದ್ದುಪಡಿತರ ಬೇಕಾಗಿದೆ. ಕೇಂದ್ರ ಸರ್ಕಾರಕ್ಕೆ ಈಸಂಬಂಧವಾಗಿ ಎರಡು ಪತ್ರಗಳನ್ನು ಬರೆದಿದ್ದೇವೆ.ಮುಂದಿನ ದಿನಗಳಲ್ಲಿ ಎಲ್ಲಾ ರಾಜ್ಯಗಳಮುಖ್ಯಮಂತ್ರಿಗಳ ಸಭೆಯಲ್ಲಿಯೂ ಪ್ರಸ್ತಾಪಿಸಿ ಸಂವಿಧಾನಕ್ಕೆ ತಿದ್ದುಪಡಿ ತರಲುಪ್ರಯತ್ನಿಸುತ್ತೇವೆ.

30. ಭಾರತದ ಒಕ್ಕೂಟ ತತ್ವವನ್ನು ಒಪ್ಪಿಕೊಂಡುಕನ್ನಡದ ಅನನ್ಯತೆಯನ್ನು ಎತ್ತಿ ಹಿಡಿಯುವುದು ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿ.ಆದುದರಿಂದಲೇ ನಮ್ಮ ನಾಡಿಗೆ ಒಂದುನಾಡಗೀತೆ ಇರುವಂತೆ, ನಾಡಧ್ವಜವೂ ಇರಬೇಕುಎಂದು ನಾವು ನಂಬುತ್ತೇವೆ. ನಾಡಗೀತೆ-ರಾಷ್ಟ್ರಗೀತೆ, ನಾಡಧ್ವಜ-ರಾಷ್ಟ್ರಧ್ವಜ ಇವೆರಡೂಪರಸ್ಪರ ಪೂರಕ, ಪರಸ್ವರ ವಿರೋಧಿ ಅಲ್ಲ. ನಮ್ಮರಾಷ್ಟ್ರಕವಿ ಕುವೆಂಪು ಅವರು `ಜಯಭಾರತಜನನಿಯ ತನುಜಾತೆ; ಜಯಹೇ ಕರ್ನಾಟಕಮಾತೆ' ಎಂದು ಹಾಡಿದ್ದಾರೆ. ಈ ಆದರ್ಶಕ್ಕೆ ನಾವು ಬದ್ಧರಾಗಿದ್ದೇವೆ. ಇದನ್ನು ವಿರೋಧಿಸುವುದು ನಾಡು-ನುಡಿಗೆ ತೋರುವ ಅಗೌರವವಾಗುತ್ತದೆ.

31. ನಾವು ನುಡಿದಂತೆ ನಡೆಯುವವರು. ಕನ್ನಡಮತ್ತು ಸಂಸ್ಕೃತಿ ಪರ ಚಟುವಟಿಕೆಗಳಿಗಾಗಿ ನೀಡುತ್ತಿರುವ ಅನುದಾನವನ್ನು 160 ಕೋಟಿ ರೂಗಳಿಂದ 424 ಕೋಟಿ ರೂ ಗಳಿಗೆ ಹೆಚ್ಚಿಸಿದ್ದೇವೆ. ಕನ್ನಡ ಸಾಹಿತ್ಯ ಪರಿಷತ್ ನಿರ್ಮಿಸಲಿರುವ ಶತಮಾನೋತ್ಸವ ಭವನ ನಿರ್ಮಾಣಕ್ಕಾಗಿ ಐದುಕೋಟಿ ರೂ ವಿಶೇಷ ಅನುದಾನ ನೀಡಿದ್ದೇವೆ.ಅಖಿಲ ಭಾರತ ಸಾಹಿತ್ಯ ಸಮ್ಮೇಳನವೂಸೇರಿದಂತೆ ಪರಿಷತ್‍ನ ಚಟುವಟಿಕೆಗಳಿಗೆ 12ಕೋಟಿ ರೂ ಅನುದಾನ ನೀಡುತ್ತಿದ್ದೇವೆ.

32. ಸಾಹಿತ್ಯ ಸಮ್ಮೇಳನಗಳು ಕೇವಲ ಸಾಹಿತ್ಯದವಿಷಯಗಳಿಗಷ್ಟೇ ಸೀಮಿತಗೊಳ್ಳದೆ ಕನ್ನಡಿಗರ ಬದುಕಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನುಚರ್ಚೆಗೆ ಎತ್ತಿಕೊಂಡಿರುವುದು ಸ್ವಾಗತಾರ್ಹವಾಗಿದೆ. ಈ ಚರ್ಚೆ-ಸಂವಾದದಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಸರ್ಕಾರ ಗಂಭೀರವಾಗಿ ಸ್ವೀಕರಿಸುತ್ತದೆ. ನಾವೆಲ್ಲಾಹುಟ್ಟಿನಿಂದ ಇಲ್ಲವೇ ವಾಸದ ಬಲದಿಂದ ಮಾತ್ರ ಕನ್ನಡಿಗರಾದರೆ ಸಾಲದು. ನಮ್ಮ ಆಚಾರ,ವಿಚಾರ, ನಡವಳಿಕೆಗಳಿಂದಲೂ ಕನ್ನಡಿಗರಾಗಬೇಕು. ಭಾಷೆ ಬಳಕೆಯ ಮೂಲಕವೇ ನಾವು ಬೆಳೆಯಲು ಸಾಧ್ಯ. ಕನ್ನಡಬಳಕೆ ಬಗ್ಗೆ ನಮಗೆ ಹೆಮ್ಮೆ ಇರಬೇಕು, ಕೀಳರಿಮೆಬೇಡ. ಕನ್ನಡ ಮಾತಾನಾಡುವುದು ಎಂದರೆ ಅದು ನಮ್ಮ ನಾಡಿನ ಸಂಸ್ಕೃತಿಯನ್ನು ಇನ್ನೊಂದು ಪೀಳಿಗೆಗೆ ದಾಟಿಸುವುದು ಎಂದರ್ಥ.

33. ನಾವು ಕನ್ನಡದಲ್ಲಿಯೇ ವ್ಯವಹರಿಸುತ್ತೇವೆ,ಕನ್ನಡ ಪತ್ರಿಕೆ ಹಾಗೂ ಪುಸ್ತಕಗಳನ್ನು ಕೊಂಡು ಓದುತ್ತೇವೆ ಮತ್ತು ಇಂತಹ ಕನ್ನಡತನದ ಸಂಸ್ಕೃತಿಯನ್ನು ನಮ್ಮ ಮಕ್ಕಳಲ್ಲಿಯೂ ಬೆಳೆಸುತ್ತೇವೆ ಎಂದು ಪ್ರತಿಯೊಬ್ಬ ಕನ್ನಡಿಗನೂ ಸಂಕಲ್ಪ ಮಾಡಬೇಕೆಂದು ತಮ್ಮೆಲ್ಲರನ್ನೂ ಕೋರುತ್ತೇನೆ. ತಮ್ಮೆಲ್ಲರಿಗೂ ಶುಭ ಕೋರಿ ನನ್ನಮಾತುಗಳನ್ನು ಮುಗಿಸುತ್ತೇನೆ.

-ನಮಸ್ಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT