ಶಕ್ತಿನಗರ: ಚಿಕ್ಕಸೂಗೂರು ಜಿಲ್ಲಾ ಪಂಚಾಯಿತ ಕ್ಷೇತ್ರದ ಶಾಖವಾದಿ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಜಲ್ಲಿಕಲ್ಲು ಮೇಲೆದ್ದಿದ್ದು ವಾಹನಗಳ ಸುಗಮ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಏಗನೂರು ಮಾರ್ಗವಾಗಿ ಶಾಖವಾದಿ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಆಳ ತೆಗ್ಗುದಿನ್ನೆಗಳು ಬಿದ್ದಿರುವುದರಿಂದ ವಾಹನ ಸವಾರರಿಗೆ ಸಂಚರಿಸಲು ಮತ್ತು ಪಾದಚಾರಿಗಳಿಗೆ ಓಡಾಡಲು ಪ್ರಯಾಸ ಪಡಬೇಕಿದೆ.
ಪುಟಾಣಿ ಮಕ್ಕಳು ದಿನನಿತ್ಯ ಶಾಲೆಗೆ ಇದೇ ರಸ್ತೆಯ ಮೂಲಕ ನಡೆದು ಹೋಗಬೇಕು. ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದ ಮಕ್ಕಳು ಸುರಕ್ಷಿತವಾಗಿ ಮನೆ ಮರಳುವರೇ ಎಂಬ ಆತಂಕ ಕಾಡುತ್ತದೆ’ ಎಂದು ತಾಯಂದಿರು ತಿಳಿಸಿದರು.
ಚಿಕ್ಕಸೂಗೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯ ಸಗಮಕುಂಟ, ಏಗನೂರು, ಕೂಡ್ಲೂರು, ಶಾಖವಾದಿ ಗ್ರಾಮಗಳಿಗೆ ಹೋಗಲು ಇದು ಏಕೈಕ ರಸ್ತೆ. ಮಳೆಗಾಲ ಬಂತೆಂದರೆ ರಸ್ತೆಯಲ್ಲಿ ಕೆಸರು ತುಂಬಿಕೊಂಡು ಓಡಾಡಲು ಕೂಡ ಸಾಧ್ಯ ಆಗುವುದಿಲ್ಲ’ ಎಂದು ಗ್ರಾಮಸ್ಥರು ತಿಳಿಸಿದರು.
‘ಗ್ರಾಮಸ್ಥರು. ವೃದ್ಧರು, ಗರ್ಭಿಣಿ ಸ್ತ್ರೀಯರನ್ನು ಚಿಕಿತ್ಸೆಗಾಗಿ ರಾಯಚೂರು ನಗರದ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಗ್ರಾಮಕ್ಕೆ ತುರ್ತು ಸಂದರ್ಭದಲ್ಲಿ ಕೂಡ ವಾಹನದವರು ಬರಲು ಒಪ್ಪುವುದಿಲ್ಲ' ಎಂದು ಸ್ಥಳೀಯ ನಿವಾಸಿ ನಾಗರಾಜ ತಿಳಿಸಿದರು.
ಈ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು. ಸಮಸ್ಯೆ ಇದೇ ರೀತಿ ಮುಂದುವರೆದರೆ ಏನು ಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.
* *
ಶಾಸಕರ ಅನುದಾನದಲ್ಲಿ ರಸ್ತೆಗಳ ದುರಸ್ತಿಗೆ ಟೆಂಡರ್ ಕರೆಯಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಕೈಗೊಳ್ಳಲಾಗುವುದು</p> ಪಿ.ಶಿವಜ್ಯೋತಿ ಶ್ರೀನಿವಾಸರೆಡ್ಡಿ
ಸದಸ್ಯೆ, ಜಿಲ್ಲಾ ಪಂಚಾಯಿತಿ, ಚಿಕ್ಕಸೂಗೂರು