‘ಬಾಹುಬಲಿ’ ಸಿನಿಮಾದ ಬಳಿ ನಟ ಪ್ರಭಾಸ್ ಮದುವೆ ಬಗ್ಗೆ ಎಲ್ಲರೂ ಚಿಂತೆ ಮಾಡುವವರೇ. ಬಾಹುಬಲಿ ಸಿನಿಮಾದ ಬಳಿಕ ಸುಮಾರು ಆರು ಸಾವಿರ ಪ್ರಪೋಸಲ್ಗಳು ಪ್ರಭಾಸ್ಗೆ ಬಂದಿದ್ದವು ಎಂಬ ಸುದ್ದಿಗಳೂ ಹರಡಿದ್ದವು. ಈಗಿನ ಹೊಸ ವಿಷಯ ಅಂದರೆ ದೇಶದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದೇ ಗುರುತಿಸಿಕೊಂಡಿರುವ ನಟ ಪ್ರಭಾಸ್ ಹಿಂದೆ ಮ್ಯಾಟ್ರಿಮೋನಿಯಲ್ ಸೈಟ್ಗಳು ಬಿದ್ದಿವೆ. ಆದರೆ ಮದುವೆ ಸಂಬಂಧಕ್ಕಲ್ಲ. ತಮ್ಮ ಕಂಪೆನಿಗಳಿಗೆ ರಾಯಭಾರಿಯಾಗಿಸಿಕೊಳ್ಳಲು.
ಮ್ಯಾಟ್ರಿಮೊನಿಯಲ್ ಸೈಟ್ಗಳ (ಮದುವೆ ಸಂಬಂಧದ ವೆಬ್ಸೈಟ್ಗಳು) ಬ್ರಾಂಡ್ ರಾಯಭಾರಿಯಾಗುವಂತೆ ವೆಬ್ಸೈಟ್ಗಳು ಕೇಳಿಕೊಂಡಿವೆ. ಪ್ರಭಾಸ್ ಕೇಳಿದಷ್ಟು ಮೊತ್ತ ನೀಡಲು ಒಪ್ಪಿಕೊಂಡಿವೆ. ಪ್ರಭಾಸ್ ಈ ವೆಬ್ಸೈಟ್ಗಳಿಗೆ ಯಾವುದೇ ಒಪ್ಪಿಗೆ ನೀಡಿಲ್ಲ. ಆದರೆ ಸದ್ಯದಲ್ಲಿ ಪ್ರಭಾಸ್ ಒಪ್ಪಿಕೊಳ್ಳಬಹುದು ಎಂಬ ಮಾತುಗಳು ಕೇಳಿಬರುತ್ತವೆ.
ಸದ್ಯ ಪ್ರಭಾಸ್ ಬಹು ನಿರೀಕ್ಷಿತ ‘ಸಾಹೋ’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರ ಮುಂದಿನ ವರ್ಷ ನವೆಂಬರ್ನಲ್ಲಿ ಬಿಡುಗಡೆಯಾಗಲಿದೆ. ಇದರ ನಡುವೆ ‘ಕಟ್ಟಪ್ಪ ಬಾಹುಬಲಿನ ಕೊಂದಿದ್ದು ಯಾಕೆ?’ ಎಂಬ ಪ್ರಶ್ನೆಯಂತೆಯೇ ಈಗ ‘ಪ್ರಭಾಸ್ ಮದುವೆ ಯಾವಾಗ’ ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದಾರೆ.
ಇದಕ್ಕೆ ಉತ್ತರ ಕೊಡಲು ಪ್ರಭಾಸ್ ಅವರ ಚಿಕ್ಕಪ್ಪ ಕೃಷ್ಣಂರಾಜು ಕಷ್ಟಪಡುತ್ತಿದ್ದಾರೆ. ಅವರು ಪ್ರಭಾಸ್ಗೆ ಸರಿಜೋಡಿ ಎಂದೆನಿಸುವ ಕೆಲ ಹುಡುಗಿಯರ ಜಾತಕಗಳನ್ನು ತರಿಸಿಕೊಂಡು ಸಣ್ಣ ಪಟ್ಟಿ ಮಾಡಿಟ್ಟಿದ್ದಾರೆ. ಆದರೆ ‘ಸಾಹೋ’ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಪ್ರಭಾಸ್ ಮದುವೆ ವಿಷಯದ ಬಗ್ಗೆ ಯಾವುದೇ ಆಸಕ್ತಿ ವಹಿಸುತ್ತಿಲ್ಲ.
‘ಒಂದು ವೇಳೆ ಆತ ಮನೆಯವರಿಗೆ ಹಸಿರುನಿಶಾನೆ ತೋರಿಸಿದ್ದಲ್ಲಿ ಮನೆಯವರು ಈ ವಿಷಯದಲ್ಲಿ ಮುಂದುವರಿಯುತ್ತಾರೆ. ಆತನ ಒಪ್ಪಿಗೆಯೊಂದೇ ಬಾಕಿ’ ಎಂದು ಚಿಕ್ಕಪ್ಪ ಕೃಷ್ಣಂರಾಜು ಹೇಳಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅವರ ಸಹೋದರ ನಾಗೇಂದ್ರ ಬಾಬು ಅವರ ಪುತ್ರಿ ನಿಹಾರಿಕಾ ಕೊನಿಡನ್ ಅವರನ್ನು ಪ್ರಭಾಸ್ ವರಿಸಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಅನುಷ್ಕಾ ಶೆಟ್ಟಿ ಅಭಿನಯದ ‘ಭಾಗಮತಿ’ ಚಿತ್ರದ ಟೀಸರ್ಗೆ ಶುಭ ಹಾರೈಸಿರುವ ಪ್ರಭಾಸ್ ಅವರು ಅನುಷ್ಕಾಗೆ ‘ಸ್ವೀಟಿ’ ಎಂದು ಸಂಬೋಧಿಸಿರುವುದು ಅಭಿಮಾನಿಗಳಿಗೆ ಖುಷಿಕೊಟ್ಟಿದೆ. ಈ ಜೋಡಿ ಹಸೆಮಣೆ ಏರಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.