ಮುಂಬೈ: ಲೋವರ್ ಪರೇಲ್ನ ಕಮಲಾ ಮಿಲ್ ಆವರಣದ ‘ವನ್ ಅಬವ್’ ಬಾರ್ ಮತ್ತು ರೆಸ್ಟೋರೆಂಟ್ನಲ್ಲಿ ಶುಕ್ರವಾರ ಸಂಭವಿಸಿದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ನಾಲ್ಕರಿಂದ ಐದು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಶಾರ್ಟ್ ಸರ್ಕಿಟ್, ಹುಕ್ಕಾ ಬಳಕೆ, ಸಿಗರೇಟ್ ತುಂಡುಗಳು, ಬಾರ್ ಸಿಬ್ಬಂದಿ ಬೆಂಕಿಯಲ್ಲಿ ನಡೆಸಿದ ಕಸರತ್ತು ಅಥವಾ ಬಾರ್ನ ಅಡುಗೆ ಕೋಣೆಯ ಬೆಂಕಿಯಿಂದ ದುರ್ಘಟನೆ ಸಂಭವಿಸಿರಬಹುದೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
‘ತುರ್ತು ಸಂದರ್ಭದಲ್ಲಿ ಬೆಂಕಿ ನಂದಿಸುವ ವ್ಯವಸ್ಥೆ ಮತ್ತು ಸರಿಯಾದ ತುರ್ತು ನಿರ್ಗಮನ ದ್ವಾರಗಳು ಅಲ್ಲಿರಲಿಲ್ಲ’ ಎಂದು ಮುಂಬೈ ಪೊಲೀಸ್ ವಕ್ತಾರ, ಡಿಸಿಪಿ ದೀಪಕ್ ದಿಯೋರಾಜ್ ಹೇಳಿದ್ದಾರೆ. ‘ಬೆಂಕಿ ಆಕಸ್ಮಿಕಕ್ಕೆ ಏನು ಕಾರಣ ಎಂಬುದು ಇನ್ನೂ ಪತ್ತೆಯಾಗಿಲ್ಲ. ತನಿಖೆ ಮುಂದುವರಿದಿದೆ’ ಎಂದು ಮುಂಬೈ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಹೇಳಿದ್ದಾರೆ.
**
ಮಾಲೀಕರಿಗೆ ಲುಕ್ಔಟ್ ನೋಟಿಸ್
14 ಜೀವಗಳನ್ನು ಬಲಿ ತೆಗೆದುಕೊಂಡಿರುವ ಈ ಪ್ರಕರಣದಲ್ಲಿ ಪಬ್ ಮಾಲೀಕರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ನಿರ್ಲಕ್ಷ್ಯ, ಕೊಲೆ ಉದ್ದೇಶವಿಲ್ಲದೆ ಜನರ ಸಾವಿಗೆ ಕಾರಣವಾಗಿರುವ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ.
ಇಬ್ಬರು ಸಹ ಮಾಲೀಕರಾದ ಹಿತೇಶ್ ಸಾಂಘ್ವಿ ಮತ್ತು ಜಿಗಾರ್ ಸಾಂಘ್ವಿ ವಿರುದ್ಧ ಲುಕ್ಔಟ್ ನೋಟಿಸ್ ಹೊರಡಿಸಲಾಗಿದೆ. ಈ ಮಧ್ಯೆ, ಅಕ್ರಮವಾಗಿ ನಿರ್ಮಿಸಿರುವ ಬಾರ್ ಮತ್ತು ರೆಸ್ಟೋರೆಂಟ್ಗಳ ಮೇಲೆ ಬೃಹನ್ ಮುಂಬೈ ಮಹಾನಗರ ಪಾಲಿಕೆಯು (ಬಿಎಂಸಿ) ಕ್ರಮ ಕೈಗೊಳ್ಳಲು ಆರಂಭಿಸಿದೆ.