ಮುನಿರಾಬಾದ್: ಕರ್ನಾಟಕ ಮತ್ತು ಆಂಧ್ರಪ್ರದೇಶದ ಜಂಟಿ ನೀರಾವರಿ ಯೋಜನೆಯಾದ ತುಂಗಭದ್ರಾ ಜಲಾಶಯದಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣ ಪಾಲಿನ ನೀರನ್ನು ತುಂಗಭದ್ರಾ ನದಿ ಮೂಲಕ ಹರಿಸಲಾಗುತ್ತಿದೆ. ಆಂಧ್ರಕ್ಕೆ 5.5 ಮತ್ತು ತೆಲಂಗಾಣ ರಾಜ್ಯಕ್ಕೆ 3.5 ಟಿಎಂಸಿಯಂತೆ ಹಂಚಿಕೆಯಾದ ನೀರಿನ ಪೈಕಿ ಒಟ್ಟು 9 ಟಿಎಂಸಿ ನೀರನ್ನು ನದಿ ಮೂಲಕ ಹರಿಸಲಾಗುತ್ತಿದೆ. ಇದರ ಬಗ್ಗೆ ಕೆಲ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆಯಿದ್ದು, ಮಳೆ ಕೊರತೆಯಿಂದ ಜಲಾಶಯ ಭರ್ತಿಯಾಗಿಲ್ಲ. ಅಚ್ಚುಕಟ್ಟು ರೈತರು ಬೆಳೆ ಬೆಳೆಯಲಾಗದೇ ಗೊಂದಲದಲ್ಲಿದ್ದಾರೆ. ಕಳೆದ ವರ್ಷ ಮುಂಗಾರಿಗೆ ನೀರು ಬಿಡುವಲ್ಲಿ ವಿಳಂಬವಾದ ಕಾರಣ ಹಲವು ರೈತರು ನಷ್ಟಕ್ಕೆ ಒಳಗಾದರು. ಇದೇ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲೆಯ ಪಾವಗಡಕ್ಕೆ 2.5ಟಿಎಂಸಿಯಷ್ಟು ತುಂಗಭದ್ರಾ ನೀರು ಒದಗಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ.
ಈ ನಿರ್ಧಾರ ಅಚ್ಚುಕಟ್ಟು ಪ್ರದೇಶದ ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಯ ರೈತರನ್ನು ನಿದ್ದೆಗೆಡಿಸಿದೆ. ರೈತಪರ ಸಂಘಟನೆಗಳು ಈಗಾಗಲೇ ಜಾಗೃತಿ ಸಭೆಗಳನ್ನು ನಡೆಸಿದ್ದು, ಇದೇ ಜ.18ರಂದು ಇಲ್ಲಿನ ನೀರಾವರಿ ಕೇಂದ್ರ ವಲಯ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲು ರೈತಶಕ್ತಿ ತೀರ್ಮಾನ ತೆಗೆದುಕೊಂಡಿದೆ.
‘ಜಲಾಶಯದ ಹಿನ್ನೀರು ಪ್ರದೇಶದ ಕೂಡ್ಲಿಗಿಯ ಮೂಲಕ ನೀರು ತೆಗೆದುಕೊಂಡು ಹೋಗುವ ಸಂಭವವಿದೆ.
ಅನುಮೋದನೆಗೊಂಡ ಪ್ರಸ್ತಾವನೆ ಮಾತ್ರ ನಿಗಮಕ್ಕೆ ಬಂದಿದೆ. ಆದರೆ ಅನುಷ್ಠಾನಗೊಳಿಸಬೇಕಾದ ಇಲಾಖೆ ಯೋಜನೆಯ ಜಾರಿ ಬಗ್ಗೆ ಇನ್ನೂ ನಿಗಮಕ್ಕೆ ಮಾಹಿತಿ ಇನ್ನೂ ಬಂದಿಲ್ಲ’ ಎಂದು ನೀರಾವರಿ ನಿಗಮದ ಸಹಾಯಕ ಎಂಜಿನಿಯರ್ ಬಸಪ್ಪ ಜಾನಕರ್ ತಿಳಿಸಿದ್ದಾರೆ.