ಬೆಂಗಳೂರು: ಕರ್ನಾಟಕ ತೆಲುಗು ಅಕಾಡೆಮಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ‘ಎನ್.ಟಿ.ಆರ್. ರಾಷ್ಟ್ರೀಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ರಂಗ ಸಾಧಕರ ವಿಭಾಗದಲ್ಲಿ ಪ್ರಶಸ್ತಿ ಸ್ವೀಕರಿಸಬೇಕಿದ್ದ ಅರುಂಧತಿ ನಾಗ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿಲ್ಲ.
ಹಂಸಲೇಖ, ‘ಕನ್ನಡ ಹಾಗೂ ತೆಲುಗು ಭಾಷೆಯ ಸಂಬಂಧ ಹೀಗೆಯೇ ಮುಂದುವರಿಯಲಿ. ನಟ ರಾಜ್ಕುಮಾರ್ ಅವರ ಹೆಸರಿನಲ್ಲಿಯೂ ಪ್ರಶಸ್ತಿ ಕೊಡುವ ಯೋಜನೆ ಈ ಸಂಸ್ಥೆಗೆ ಇದೆ. ಇದು ಎರಡೂ ಭಾಷೆಯ ನಂಟನ್ನು ಇನ್ನಷ್ಟು ಹೆಚ್ಚಿಸಲಿದೆ’ ಎಂದರು.
ಪಿಇಎಸ್ ವಿಶ್ವವಿದ್ಯಾಲಯ ಸಂಸ್ಥಾಪಕ ಎಂ.ಆರ್.ದೊರೆಸ್ವಾಮಿ, ‘ಕನ್ನಡ ಸಿನಿಮಾ ರಂಗಕ್ಕೆ ರಾಜ್ಕುಮಾರ್ ಕಣ್ಣು ಇದ್ದಂತೆ. ಕನ್ನಡ ಹಾಗೂ ತೆಲುಗು ಭಾಷೆ ಹಾಲು–ಸಕ್ಕರೆಯಂತೆ ಬೆರೆತಿವೆ. ಕೃಷ್ಣದೇವರಾಯರ ಕಾಲದಿಂದ ಇಲ್ಲಿಯವರೆಗೂ ಈ ಭಾಷಿಕರ ನಡುವೆ ಯಾವುದೇ ಜಗಳ ಇಲ್ಲ. ಇದು ಹೀಗೆ ಮುಂದುವರಿಯಬೇಕು’ ಎಂದರು.