ರಾಮದುರ್ಗ: ಮಲಪ್ರಭಾ ನದಿ ಜಲಾನಯನ ಪ್ರದೇಶ ಕಡಿಮೆ ಇರುವುದು ಮತ್ತು ಈ ಪ್ರದೇಶದಲ್ಲಿ ವಾಡಿಕೆಗಿಂತ ಮಳೆ ಕಡಿಮೆ ಮಳೆ ಬೀಳುತ್ತಿರುವುದರಿಂದ ಮಹ ದಾಯಿ ನದಿ ತಿರುವು ಯೋಜನೆ ಅನುಷ್ಠಾನಗೊಳಿಸುವುದು ಅಗತ್ಯವಿದೆ ಎಂದು ರೈತ ಹೋರಾಟಗಾರ ಬಿ.ಎಸ್. ಸೊಪ್ಪಿನ ಹೇಳಿದರು.
ಬಟಕುರ್ಕಿ ಗ್ರಾಮದಲ್ಲಿ ನಡೆದ 6ನೇ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಕೃಷಿಗೋಷ್ಠಿಯಲ್ಲಿ ‘ಮಹದಾಯಿ ನದಿ ಹೋರಾಟದ ಸವಾಲುಗಳು’ ಎಂಬ ವಿಷಯದ ಮೇಲೆ ಅವರು ಮಾತನಾಡಿದರು.
‘2002 ಏ.19 ರಂದು ಕೇಂದ್ರ ಜಲ ಆಯೋಗ ವರದಿ ನೀಡಿ ಮಹದಾಯಿ ನೀರನ್ನು ಕರ್ನಾಟಕ ಬಳಸಿಕೊಳ್ಳಬಹುದು ಎಂದರೂ ಗೋವಾ ಸರ್ಕಾರದ ಮೊಂಡತನ ದಿಂದಾಗಿ ಯೋಜನೆ ಜಾರಿಯಾಗುತ್ತಿಲ್ಲ’ ಎಂದು ತಿಳಿಸಿದರು.
‘ಕರ್ನಾಟಕ ಸರ್ಕಾರವು ಮಲಪ್ರಭಾ ನದಿ ನೀರನ್ನು ಬಳಸಿಕೊಳ್ಳುತ್ತಿಲ್ಲ ಎಂದು ಗೋವಾ ರಾಜ್ಯ ನ್ಯಾಯಾಲಯಕ್ಕೆ ವರದಿ ನೀಡಿದೆ. ಆದರೆ ಗೋವಾ ಸರ್ಕಾರ ಅಲ್ಲಿನ ಪೆಪ್ಸಿ ಮತ್ತು ಕೋಕಾಕೋಲಾ ಕಂಪನಿಗಳಿಗೆ ಮಹಾದಾಯಿ ನೀರನ್ನು ಕೊಟ್ಟು ನಮಗೆ ನೀರು ನೀಡುವುದಿಲ್ಲ ಎನ್ನುವುದು ಯಾವ ನ್ಯಾಯ’ ಎಂದು ಅವರು ಪ್ರಶ್ನಿಸಿದರು.
‘ರಾಜ್ಯದಲ್ಲಿನ ಎಲ್ಲ ರಾಜಕೀಯ ಪಕ್ಷಗಳು ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ಕುಡಿಯುವ ನೀರಿನ ಉದ್ದೇಶಕ್ಕಾಗಿ 7.56 ಟಿಎಂಸಿ ನೀರನ್ನು ಕೊಡಿಸಿ ಮಹದಾಯಿ ಯೋಜನೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು’ ಎಂದು ಹೇಳಿದರು.
ರೈತ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಸ್. ಪಾಟೀಲ ಮಾತನಾಡಿ, ಸರ್ಕಾರ ರೈತರ ಆತ್ಮಹತ್ಯೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ರೈತರ ನಿಜವಾದ ಸಮಸ್ಯೆ ಕುರಿತು ಸರ್ಕಾರ ಗಮನ ಹರಿಸುತ್ತಿಲ್ಲ. ರೈತರ ಕಲ್ಯಾಣಕ್ಕಾಗಿ ಯಾವ ರಾಜಕಾರಣಿಯೂ ಕಾಳಜಿ ವಹಿಸುತ್ತಿಲ್ಲ ಎಂದು ಆರೋಪಿಸಿದರು.
‘ರೈತರ ಈ ದೇಶದ ಬೆನ್ನೆಲುಬು ಎನ್ನುತ್ತಾರೆ. ಆದರೆ ಆತನ ಅಭ್ಯುದಯಕ್ಕೆ ಇಲ್ಲಿಯವರೆಗೆ ಪರಿಣಾಮಕಾರಿಯಾದ ಯಾವುದೇ ಯೋಜನೆಗಳನ್ನು ಹಮ್ಮಿಕೊಂಡಿಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಇಂದಿಗೂ ರೈತರ ಹಾಗೂ ಕೃಷಿ ಪರಿಹರಿಸಲಾರದ ವಸ್ತು ವಿಷಯವಾಗಿದೆ’ ಎಂದು ವಿಷಾದಿಸಿದರು.
**
‘ಫಲವತ್ತತೆ ಕಳೆದುಕೊಳ್ಳುತ್ತಿದೆ ಭೂಮಿ’
‘ರೈತರು ಹೆಚ್ಚು, ಹೆಚ್ಚು ಗೊಬ್ಬರ ಬಳಸುವುದರಿಂದ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತದೆ. ಹಾಗಾಗಿ ನೈಸರ್ಗಿಕ ಕೃಷಿ ಮೂಲಕ ಹೆಚ್ಚಿನ ಇಳುವರಿ ಪಡೆದುಕೊಳ್ಳಬಹುದು ಎಂದು ನೈಸರ್ಗಿಕ ಕೃಷಿಕ ಶಿವಪ್ಪ ನೀರಾಕಾರಿ’ ಎಂದು ನೈಸರ್ಗಿಕ ಕೃಷಿಕ ಶಿವಪ್ಪ ನೀರಾಕಾರಿ ತಿಳಿಸಿದರು.
ಮಣ್ಣಿನ ಪರೀಕ್ಷೆ ಮಾಡಿಸಿಕೊಂಡು ಸೂಕ್ತವಾದ ಬೆಳೆ ಬೆಳೆಯಲು ಸಾಧ್ಯವಿದೆ. ರೈತರು ಲಾಭದಾಯಕ ಕೃಷಿಗೆ ಮೊರೆ ಹೋಗಿ ಹೆಚ್ಚು ಲಾಭ ಪಡೆಯುವ ಉದ್ದೇಶದಿಂದ ಗೊಬ್ಬರದ ಬಳಕೆಯಿಂದ ಭೂಮಿ ಹಾಳು ಮಾಡಿಕೊಳ್ಳುತ್ತಿರುವುದು ದುರದುಷ್ಟಕರ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.