ಅಂಕೋಲಾ: ‘ಸಿದ್ದರಾಮಯ್ಯ ತಮ್ಮ ಕಾಲಿನ ಕೆಳಗೆ ಕೆಸರನ್ನಿಟ್ಟುಕೊಂಡು ಇನ್ನೊಬ್ಬರ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ’ ಎಂದು ಕೆಎಫ್ಡಿಸಿ ಅಧ್ಯಕ್ಷ ರಾಜೇಂದ್ರ ನಾಯ್ಕ ದೂರಿದರು.
ಭಾನುವಾರ ಅಪಾರ ಬೆಂಬಲಿಗರೊಂದಿಗೆ ಸಚಿವ ಅನಂತಕುಮಾರ ಹೆಗಡೆ ಸಮ್ಮುಖದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಯಾದ ಬಳಿಕ ಮಾತನಾಡಿ,
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಮೂರು ದಶಕಗಳಿಂದ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ. ಮೊದಲು ಕಾಂಗ್ರೆಸ್ನಲ್ಲಿ ನಿಷ್ಠಾವಂತರಿಗೆ ಟಿಕೆಟ್ ನೀಡುತ್ತಿದ್ದರು. ಈಗ ಕಳ್ಳರಿಗೆ , ದರೋಡೆ, ಅವ್ಯವಹಾರ ನಡೆಸುವವರಿಗೆ, ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುವವರಿಗೆ ಟಿಕೆಟ್ ನೀಡಲಾಗುತ್ತಿದೆ’ ಎಂದರು.
‘ಕಳೆದ ಮೂರು ದಶಕಗಳಿಂದ ಇಂದಿನವರೆಗೂ ಪಕ್ಷದಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದೇನೆ. ಮೀನುಗಾರಿಕಾ ನಿಗಮ ಹುದ್ದೆ ಬಿಟ್ಟರೆ ಯಾವ ಅಧಿಕಾರವು ನನಗೆ ಒದಗಿ ಬರಲಿಲ್ಲ. ಇಂದು ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತರಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಇದರಿಂದ ನಾನು ಮನನೊಂದು ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಅಲ್ಲಿಯೇ ಇದ್ದು ಬೆನ್ನಿಗೆ ಚೂರಿ ಹಾಕುವಂತಹ ಕೆಲಸ ಮಾಡಲು ನನ್ನಿಂದಾಗದೆ ನೇರವಾಗಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಲು ಬಂದಿದ್ದೇನೆ. ಕಾರವಾರ ಅಂಕೋಲಾದ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಬಡತನವನ್ನು ಅರಿತು ಬಂದವರು. ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸೋಣ. ಮುಂದಿನ ದಿನದಲ್ಲಿ ಕಾರವಾರ ಅಂಕೋಲಾ ಕ್ಷೇತ್ರದಿಂದ ಐದು ಸಾವಿರಕ್ಕೂ ಅಧಿಕ ಕಾರ್ಯಕರ್ತರನ್ನು ಸೇರ್ಪಡೆ ಮಾಡಲಿದ್ದೇನೆ’ ಎಂದು ಅವರು ಹೇಳಿದರು.
ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಮಾತನಾಡಿ ‘ಬಿಜೆಪಿ ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿಕೊಂಡು ಪಕ್ಷಕ್ಕೆ ಯಾರೆ ಬಂದರು ನಾವು ಆತ್ಮೀಯವಾಗಿ ಬರಮಾಡಿ ಕೋಳ್ಳುತ್ತೇವೆ’ ಎಂದು ಹೇಳಿದರು.
ಕಾರವಾರ ಅಂಕೋಲಾ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ರೂಪಾಲಿ ನಾಯ್ಕ. ಪ್ರಮುಖರಾದ ನಿತ್ಯಾನಂದ ಗಾಂವಕರ, ಗಣಪತಿ ಉಳ್ವೇಕರ, ಜಗದೀಶ್ ನಾಯಕ, ಭಾಸ್ಕರ ನಾರ್ವೇಕರ, ನಾಗರಾಜ ನಾಯಕ, ಅರುಣ ನಾಡಕರ್ಣಿ, ಸಂಜಯ ನಾಯ್ಕ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.