ಧಾರವಾಡ: ಸಮಾನತೆ, ಶಾಂತಿ, ಪ್ರೀತಿ, ವಿಶ್ವಬಂಧುತ್ವವನ್ನು ಬೋಧಿಸುವ ಸರ್ವಶ್ರೇಷ್ಠ ಸಿದ್ಧಾಂತ. ವರ್ಗ, ವರ್ಣ, ಲಿಂಗಭೇದ ಸಾಂಸ್ಥೀಕರಣ ಹೊರತುಪಡಿಸಿದ ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ ಜಂಗಮ ಎಂಬ ಸೂತ್ರದೊಂದಿಗೆ ಕಾಯಕ ದಾಸೋಹ ಸಿದ್ಧಾಂತವನ್ನು ಜಗತ್ತಿಗೆ ನೀಡಿದ್ದು ಲಿಂಗಾಯತ ಧರ್ಮ ಎಂದು ಸಾಹಿತಿ ರಂಜಾನ್ ದರ್ಗಾ ಅಭಿಪ್ರಾಯಪಟ್ಟರು.
ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜಗನ್ಮಾತಾ ಅಕ್ಕಮಹಾದೇವಿ ಅನುಭಾವ ಪೀಠದ ವತಿಯಿಂದ ನಡೆದ ಶರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1831 ರಿಂದ 1941ರ ವರೆಗಿನ ಎಲ್ಲಾ ರಾಷ್ಟ್ರೀಯ ಜನಗಣತಿಯಲ್ಲಿ ಲಿಂಗಾಯತ ಒಂದು ಸ್ವತಂತ್ರ ಧರ್ಮವೆಂದು ದಾಖಲಾಗಿದೆ. ಲಿಂಗಾಯತ ಧರ್ಮಕ್ಕೆ ಶಾಸನಬದ್ಧ, ಕಾನೂನಾತ್ಮಕ ಸಾಕ್ಷಿಗಳು, ಆಕರಗಳು, ದಾಖಲೆಗಳಿದ್ದು, ಅದು ಒಂದು ಪರಿಪೂರ್ಣ ಧರ್ಮವಾಗಿದೆ ಎಂದರು.
ಶರಣ ಸಿದ್ಧಾಂತವು ಸರ್ವಕಾಲಿಕ ಸಮಾನತೆ ಶಾಂತಿ, ಪ್ರೀತಿ, ವಿಶ್ವಬಂಧುತ್ವವನ್ನು ಬೋಧಿಸುವ ಸರ್ವಶ್ರೇಷ್ಠ ಸಿದ್ಧಾಂತವಾಗಿದೆ. ಲಿಂಗಾಯತ ಚಳವಳಿಯು ದಲಿತರ, ಶೋಷಿತರ, ಧಮನಿತರ, ಮೂಲ ನಿವಾಸಿಗಳ, ಮಹಿಳೆಯರ, ಶ್ರಮಿಕರ, ಕಾರ್ಮಿಕರ ಧ್ವನಿಯಾಗಿ ಉದಯಿಸಿದ ಧರ್ಮವಾಗಿದೆ ಎಂದು ಹೇಳಿದರು.
ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ವಿಠ್ಠಲ ಬೆಣಗಿ ಮಾತನಾಡಿ, ಸಮಾನತೆ ಸಾರಿದ, ವೈದಿಕ ಸಂಪ್ರದಾಯ, ಮೂಢನಂಬಿಕೆ, ಕಂದಾಚಾರವನ್ನು ಕಿತ್ತೆಸೆದ ಬಸವಣ್ಣ ಒಬ್ಬ ಶ್ರೇಷ್ಠ ತಜ್ಞರಾಗಿದ್ದರು ಎಂದರು.
ಬಸವಧರ್ಮ ಪೀಠಾಧ್ಯಕ್ಷೆ ಡಾ. ಮಾತೆ ಮಹಾದೇವಿ ಸಾನ್ನಿಧ್ಯ ವಹಿಸಿದ್ದರು. ನೇಗಿನಹಾಳದ ಬಸವ ಸಿದ್ಧಲಿಂಗ ಸ್ವಾಮೀಜಿ ಧ್ವಜಾರೋಹಣ ಮಾಡಿದರು. ಚನ್ನಬಸವಾನಂದ ಸ್ವಾಮೀಜಿ ಪ್ರಾಸ್ತಾವಿಕ ಮಾತನಾಡಿದರು.