ಬೆಂಗಳೂರು: ‘20 ವರ್ಷಗಳಿಂದ ಜಾಗತಿಕ ತಾಪಮಾನದಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡಿದೆ. ಇದು ಜನಜೀವನದ ಮೇಲೆ ಕೆಟ್ಟ ಪ್ರಭಾವ ಬೀರುತ್ತಿದೆ’ ಎಂದು ಹಿರಿಯ ವಿಜ್ಞಾನಿ ಡಾ.ಎಚ್.ಎಸ್.ಎಂ ಪ್ರಕಾಶ್ ಹೇಳಿದರು.
‘ಸಂವಾದ ಟ್ರಸ್ಟ್’ ಜಯರಾಮ ಸೇವಾ ಮಂಡಳಿಯಲ್ಲಿ ಭಾನುವಾರ ಆಯೋಜಿಸಿದ್ದ ‘ಹವಾಮಾನ ಬದಲಾವಣೆ ಏನು ಮತ್ತು ಏಕೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ರಸ್ತೆಗೆ ಇಳಿಯುತ್ತಿರುವ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಕೈಗಾರಿಕೆಗಳು ಉಗುಳುವ ಹೊಗೆಯಿಂದಾಗಿ ಮಾಲಿನ್ಯದ ಪ್ರಮಾಣ ಮಿತಿಮೀರಿದೆ. ಚೀನಾ, ಭಾರತದಂತಹ ದೇಶಗಳಿಗೆ ಹೋಲಿಸಿದರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಮಾಲಿನ್ಯ ಹೆಚ್ಚುತ್ತಿರು ವುದು ಆತಂಕಕಾರಿ. ಭೂಮಿಯನ್ನು ಇದು ಕಲುಷಿತಗೊಳಿಸುತ್ತಿದೆ’ ಎಂದರು.
‘ಮುಂಗಾರು ಹಾಗೂ ಹಿಂಗಾರು ಮಳೆ ಸಕಾಲಕ್ಕೆ ಆಗುತ್ತಿಲ್ಲ. ಇದರಿಂದಾಗಿ ವಾತಾವರಣದಲ್ಲಿ ಬದಲಾವಣೆ ಆಗುತ್ತಿದೆ. ಭೂಮಿಯೊಳಗಿನ ಉಷ್ಣತೆ ಮೇಲೆ ಬರುತ್ತಿದೆ. ಮಣ್ಣು ಫಲವತ್ತತೆ ಕಳೆದುಕೊಳ್ಳುತ್ತಿದೆ. ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತಿಲ್ಲ. ಜೊತೆಗೆ ದೇಶದ ಆರ್ಥಿಕತೆಗೂ ಹೊಡೆತ ಬೀಳುತ್ತಿದೆ ’ ಎಂದರು.
‘ಮಾಲಿನ್ಯ ಪ್ರಮಾಣ ಕಡಿಮೆಯಾಗ ಬೇಕಾದರೆ ಸೌರವಿದ್ಯುತ್ ಹಾಗೂ ಪವನದಿಂದ ವಿದ್ಯುತ್ ಪಡೆಯುವುದು ಉತ್ತಮ ವಿಧಾನ. ಆದರೆ, ಇದಕ್ಕೆ ಬೇಕಾಗುವ ಸಲಕರಣೆಗಳಿಗಾಗಿ ನಾವು ಅಮೆರಿಕ, ಜಪಾನ್, ಜರ್ಮನಿಯಂತಹ ರಾಷ್ಟ್ರಗಳನ್ನು ಅವಲಂಬಿಸಿದ್ದೇವೆ. ಇದು ಶೋಚನೀಯ ಸ್ಥಿತಿ’ ಎಂದು ವಿವರಿಸಿದರು.