ವೇಶ್ಯಾವಾಟಿಕೆಯ ಬಗ್ಗೆ ನಮ್ಮ ಈಗಿನ ಇರುಸುಮುರುಸು–ಇತ್ತೀಚಿನ ಕೆಲವು ಶತಮಾನಗಳಲ್ಲಿ ಇಸ್ಲಾಂ ಮತ್ತು ಕ್ರೈಸ್ತ ಮತಗಳ ಉಗ್ರ ನೈತಿಕ ನಿಲುವಿನ ಪ್ರಭಾವದ ಬಳುವಳಿ. ಹಿಂದೆ ವಾರಾಂಗನೆಯರು ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿದ್ದು ಅವರಿಗೆ ಘನತೆ ಗೌರವ ಇತ್ತು. ನೃತ್ಯ, ಸಂಗೀತ ಮುಂತಾದ ವಿದ್ಯೆಗಳಲ್ಲಿ ವಿಶೇಷ ಪರಿಣತಿ ಹೊಂದಿದವರಾಗಿರುತ್ತಿದ್ದರು. ಅನೇಕರು ಸಮಾಜಮುಖಿಗಳೂ ಆಗಿದ್ದರು. ಕರ್ನಾಟಕದಲ್ಲಿ ಅಧಿಕ ಸಂಖ್ಯೆಯ ಕೆರೆಕಟ್ಟೆಗಳನ್ನು ಕಟ್ಟಿಸಿದವರು ವೇಶ್ಯೆಯರೇ ಆಗಿದ್ದರು. ಕರ್ನಾಟಕದ ದಾವಣಗೆರೆ ಜಿಲ್ಲೆಯಲ್ಲಿರುವ ಅತಿದೊಡ್ಡ ಕೆರೆಯ ಹೆಸರು ಸೂಳೆಕೆರೆ. ಸೂಳೆಕೆರೆ, ಸೂಳೆಬಾವಿ ಹೆಸರಿನ ಊರುಗಳು ನಮ್ಮಲ್ಲಿವೆ.
ಮನುಷ್ಯರ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ಲೈಂಗಿಕ ಸುಖವನ್ನು ಆರೋಗ್ಯಕರ ರೀತಿಯಲ್ಲಿ ಅವಶ್ಯಕತೆ ಇರುವ ಎಲ್ಲರಿಗೂ ಕೊಡಮಾಡುವುದು ನಾಗರಿಕ ಸಮಾಜದ ಆದ್ಯಕರ್ತವ್ಯ. ವಿವಾಹ ಅಥವಾ ದೀರ್ಘಕಾಲ ಒಟ್ಟಿಗೆ ಬಾಳುವುದರ ಮೂಲಕ ಅಂತಹ ಸ್ವಾತಂತ್ರ್ಯ ಚಲಾವಣೆ ಅನೇಕರಿಗೆ ಸಾಧ್ಯವಿಲ್ಲದಿರಬಹುದು. ಸಂಸಾರ ಸಾಗಿಸಲು ಆರ್ಥಿಕವಾಗಿ ಸಬಲರಿಲ್ಲದವರು, ಯಾರೂ ಮದುವೆಯಾಗಲು ಮುಂದೆ ಬಾರದಂತಹ ಅಂಗವಿಕಲರು, ಅಂತಹ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದವರು, ಮುಂತಾದವರನ್ನು ವ್ಯವಸ್ಥೆ ಮೂಲಕವೇ ಲೈಂಗಿಕ ತೃಪ್ತಿ ಪಡೆಯಬೇಕೆಂದು ಒತ್ತಾಯಿಸುವ ಹಕ್ಕು ಯಾರಿಗಿದೆ?
ಲೈಂಗಿಕತೆಯ ಬಗೆಗೆ ವಿಕೃತ ಮನೋಭಾವದ ಅನೇಕ ಧಾರ್ಮಿಕ ಮುಖಂಡರು, ಬೂಟಾಟಿಕೆಯನ್ನೇ ಬಂಡವಾಳ ಮಾಡಿಕೊಂಡು ಸಮಾಜದ ಹುಸಿ ಗೌರವಕ್ಕೆ ಹಾತೊರೆಯುವ ರಾಜಕಾರಣಿಗಳು ಈ ಬಗ್ಗೆ ತಳೆಯುವ ನಿಲುವಿಗೆ ಸೊಪ್ಪು ಹಾಕದೇ ಪ್ರಜ್ಞಾವಂತರು ಈ ಸಂಬಂಧ ರಚನಾತ್ಮಕ ಒತ್ತಾಯ ತರಬೇಕು.