ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋನಿ ಕ್ರಾಂತಿ!

Last Updated 20 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಶೇಡ್‌ಗಾರ್ ಗುಡ್ಡೆಕೊಪ್ಪದ 42 ವರ್ಷದ  ಶ್ರೀನಿವಾಸ ಮೂರ್ತಿಯವರು ಇದ್ದಕ್ಕಿದ್ದ ಹಾಗೆ ಕಾಯಿಲೆಯೊಂದಕ್ಕೆ ತುತ್ತಾದರು. ಅದು ಆಮವಾತದಂತಹ ವಿಚಿತ್ರ ಕಾಯಿಲೆ. ಅದಕ್ಕೆ ಕಂಡ ಕಂಡಲ್ಲಿ ಚಿಕಿತ್ಸೆ ಕೊಡಿಸಿದರೂ, ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿದರೂ ಶ್ರೀನಿವಾಸ ಮೂರ್ತಿಯವರು ಹಾಸಿಗೆಯಿಂದ ಮೇಲೇಳಲಾಗಲೇ ಇಲ್ಲ.  ನೋವುನಿವಾರಕ ಔಷಧಿಗಳನ್ನು ಉಪಯೋಗಿಸಿದರೂ ಕಾಯಿಲೆ ಮಾತ್ರ ಸಂಪೂರ್ಣ ಗುಣಮುಖವಾಗಲೇ ಇಲ್ಲ. ವೈದ್ಯಕೀಯ ಭಾಷೆಯಲ್ಲಿ ಸ್ಲಿಪ್‌ಡಿಸ್ಕ್ ಎಂದಷ್ಟೇ ಶ್ರೀನಿವಾಸಮೂರ್ತಿಯವರ ಗಮನಕ್ಕೆ ತರಲಾಗಿತ್ತು. ಪ್ರಸಿದ್ಧರೆನಿಸಿರುವ ಎಲ್ಲ ವೈದ್ಯರನ್ನು ಸಂಪರ್ಕಿಸಿದ್ದಾಯಿತು.  

ತಮ್ಮ ಕಥೆ ಇಷ್ಟೇ ಎಂದು ನೊಂದುಕೊಂಡು ಕೊರಗುತ್ತಿದ್ದ ಶ್ರೀನಿವಾಸ ಅವರಿಗೆ ಯಾರೋ ಒಬ್ಬರು ನೋನಿ ಹಣ್ಣಿನ ಔಷಧಿಯನ್ನು ತಂದಿಟ್ಟರು.  ಎಷ್ಟೊಂದು ಔಷಧ, ಎಷ್ಟೆಲ್ಲಾ ಚಿಕಿತ್ಸೆ ಪಡೆದಾಗಿದೆ. ಇದೂ ಒಂದು ನೋಡಿಯೇ ಬಿಡುವ ಎಂದುಕೊಂಡು ಅದರ ಸೇವನೆ ಮಾಡಿದ್ದೇ ತಡ... ಪವಾಡ ಎಂಬಂತೆ ಶ್ರೀನಿವಾಸಮೂರ್ತಿ ಗುಣಮುಖರಾಗತೊಡಗಿದರು. ಅಲ್ಲಿಂದ ಆರಂಭವಾಯಿತು ಶ್ರೀನಿವಾಸ ಮೂರ್ತಿ ದಂಪತಿಯ ನೋನಿ ಕುತೂಹಲ. ಈ ಕುತೂಹಲದ ಫಲವಾಗಿ ಇಂದು ಶಿವಮೊಗ್ಗ ತಾಲ್ಲೂಕಿನ ಹೊಸಹಳ್ಳಿ ಅಂಚೆಯ ರಾಮಿನಕೊಪ್ಪದಲ್ಲಿ ಇರುವ ಶ್ರೀನಿವಾಸ ಅವರ ಜಮೀನಿನಲ್ಲಿ ಅದ್ಭುತವಾದ ನೋನಿ ಪ್ರಪಂಚ ಕಾಣಸಿಗುತ್ತದೆ.

ಇದರ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿದ ನಂತರ ತಾವೂ ಇದನ್ನು ಬೆಳೆಯತೊಡಗಿದ್ದಾರೆ. ಆರಂಭದಲ್ಲಿ ಇದನ್ನು ಬೆಳೆದು ಬೇರೆ ಬೇರೆ ರಾಜ್ಯಗಳಲ್ಲಿರುವ ಔಷಧಿ ಕಂಪೆನಿಗಳಿಗೆ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದ ಶ್ರೀನಿವಾಸಮೂರ್ತಿ ಮತ್ತು ಅಂಬುಜಾಕ್ಷಿ ದಂಪತಿ ಈಗ ತಮ್ಮದೇ ಆದ ಒಂದು ಸಣ್ಣ ಔಷಧ ಕಾರ್ಖಾನೆಯನ್ನು ಆರಂಭಿಸಿದ್ದಾರೆ. ವ್ಯಾಲ್ಯೂ ಪ್ರಾಡಕ್ಟ್ಸ್ ಹೆಸರಿನಲ್ಲಿ ಅಮೃತ್ ನೋನಿಯನ್ನು ಅತೀ ಕಡಿಮೆ ಬೆಲೆಯಲ್ಲಿ ಅನಿವಾರ್ಯ ಇರುವವರಿಗೆ ನೀಡುತ್ತಿದ್ದಾರೆ. ನೋನಿಯನ್ನು ಸೇವಿಸುತ್ತಿರು ವವರು ಗುಣಮುಖರಾಗುತ್ತಲೂ ಇದ್ದಾರೆ.

ಏನಿದು ನೋನಿ?
ನೋನಿ ಮೂಲತಃ ಭಾರತದ್ದೇ ಔಷಧೀಯ ಹಣ್ಣು. ಈ ನೋನಿಯನ್ನು ಇಂಡಿಯನ್ ಮಲ್ಬೆರಿ ಎಂದೇ ಕರೆಯಲಾಗುತ್ತದೆ. ಸಂಸ್ಕೃತದಲ್ಲಿ ಆಯುಷ್ಕ ಎಂಬ ಹೆಸರಿದೆ. ಆಯುಷ್ಕ ಎಂದರೆ ಆಯಸ್ಸನ್ನು ವೃದ್ಧಿಸುವುದು ಎಂದರ್ಥ. ಭಾರತದ ಸಮುದ್ರ ತೀರಗಳಲ್ಲಿ ತನ್ನ ಪಾಡಿಗೆ ತಾನು ಬೆಳೆದುಕೊಳ್ಳುವ ನೋನಿ ಇದೀಗ ಮಲೆನಾಡಿನಂತಹ ದಟ್ಟ ಅರಣ್ಯದ ಸುತ್ತಮುತ್ತಲೂ ಬೆಳೆಯಲಾಗುತ್ತಿದೆ. ನರ್ಸರಿ ಸಸ್ಯವಾಗಿಯೂ ಜನಪ್ರಿಯವಾಗುತ್ತಿದೆ. ಒಂದು ಗಿಡದಲ್ಲಿ ಸುಮಾರು 20 ಕೆ.ಜಿಯಷ್ಟು ನೋನಿ ಹಣ್ಣು ಬೆಳೆಯುತ್ತದೆ. ವರ್ಷವೊಂದರಲ್ಲಿ ಸುಮಾರು 8 ಬೆಳೆಯನ್ನು ತೆಗೆಯಬಹುದು.

ವಿಶ್ವದ ಸುಮಾರು 40 ವಿಶ್ವವಿದ್ಯಾನಿಲಯಗಳಲ್ಲಿ ನೋನಿಯ ಬಗ್ಗೆ ಸಂಶೋಧನೆಗಳು ನಡೆದಿವೆ. ನಿರಂತರವಾಗಿ ನಡೆಯುತ್ತಲೂ ಇವೆ. ನೋನಿಯ ಅದ್ಭುತ ಗುಣದ ಬಗ್ಗೆ ರಾಷ್ಟ್ರಪತಿಯಾಗಿದ್ದ ಡಾ.ಎಪಿಜೆ ಅಬ್ದುಲ್ ಕಲಾಂ ಮಾತನಾಡಿದ್ದಾರೆ. ಸ್ವತಃ ಅಬ್ದುಲ್ ಕಲಾಂರವರ ಕೋರಿಕೆಯ ಮೇರೆಗೆ ರಾಷ್ಟ್ರಪತಿ ಭವನದಲ್ಲಿರುವ ಔಷಧೀಯ ವನಕ್ಕೆ ಶ್ರೀನಿವಾಸಮೂರ್ತಿಯವರು ಸುಮಾರು 300ನೋನಿ ಗಿಡಗಳನ್ನು ಕಳುಹಿಸಿ ಕೊಟ್ಟಿದ್ದರು. ಆ ಗಿಡಗಳು ಈಗಲೂ ರಾಷ್ಟ್ರಪತಿ ಭವನದಲ್ಲಿ ಬೆಳೆಯುತ್ತಿವೆ. ಸ್ವತಃ ಅಬ್ದುಲ್ ಕಲಾಂರವರೇ ಶ್ರೀನಿವಾಸಮೂರ್ತಿಯವರ ಕಥೆಯನ್ನು ಕೇಳಿ, ನೋನಿ ಹಣ್ಣಿನ ಗಿಡ ಬೆಳೆಯುತ್ತಿರುವ ಬಗ್ಗೆ ಬೆನ್ನು ತಟ್ಟಿದ್ದಾರೆ.

ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು, ಮನಸ್ಸಿನ ಶಾಂತತೆ ಕಾಯ್ದುಕೊಳ್ಳಲು, ಚೆನ್ನಾಗಿ ನಿದ್ರಿಸಲು, ಹೊಸ ಹುರುಪಿನಿಂದ ಇರಲು, ದೇಹವನ್ನು ಟಾಕ್ಸಿನ್‌ಗಳಿಂದ ಮುಕ್ತಗೊಳಿಸಲು ಇರುವ ರಹಸ್ಯಮಯ ಹಣ್ಣೆಂದರೆ ನೋನಿ ಎನ್ನುತ್ತಾರೆ ಶ್ರೀನಿವಾಸಮೂರ್ತಿ. ನಮ್ಮ ದೇಹದಲ್ಲಿರುವ ಜೀವಕೋಶಗಳಿಗೆ ಅತ್ಯುತ್ತಮ ಆಹಾರದ ಅವಶ್ಯಕತೆಯಿರುತ್ತದೆ. ಆ ಕೊರತೆಯನ್ನು ಇದು ನೀಗಿಸಬಲ್ಲದು. ನಾನಾ ದೇಶದ ಜನ ನೋನಿಯನ್ನು ಆಹಾರಕ್ಕೆ ಪೂರಕ ಆರೋಗ್ಯ ಪೇಯವಾಗಿ ಉಪಯೋಗಿಸುತ್ತಿದ್ದಾರೆ ಎನ್ನುತ್ತಾರೆ ಅವರು. 

ಈಗಾಗಲೇ ಶ್ರೀನಿವಾಸಮೂರ್ತಿ ದಂಪತಿ ತಯಾರಿಸುತ್ತಿರುವ ಅಮೃತ್ ನೋನಿಯನ್ನು ಕರ್ನಾಟಕದಲ್ಲಿ ಮಾತ್ರವಲ್ಲ, ಹೊರ ರಾಜ್ಯದ ಜನ ಕೂಡ ಉಪಯೋಗಿಸುತ್ತಿದ್ದಾರೆ. ಬಹಳಷ್ಟು ಆಸ್ಪತ್ರೆಗಳಲ್ಲಿ ಸ್ವತಃ ವೈದ್ಯರೇ ಅಮೃತ್ ನೋನಿಯನ್ನು ತಮ್ಮ ಬಳಿ ಬರುವ ರೋಗಿಗಳಿಗೆ ಸೂಚಿಸಿ ಸಲಹೆ ನೀಡುತ್ತಿದ್ದಾರೆ. ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆಗಳಲ್ಲಿಯೂ ವೈದ್ಯರು ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಅಮೃತ್ ನೋನಿ ಪೇಯವನ್ನು ಉಪಯೋಗಿಸಲು ಚೀಟಿ ಬರೆಯುತ್ತಿದ್ದಾರೆ.

150ಕ್ಕಿಂತ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ ನೋನಿ ಗಂಟುನೋವು, ಅಲರ್ಜಿ, ಅಸ್ತಮಾ, ರಕ್ತದೊತ್ತಡ, ಕ್ಯಾನ್ಸರ್, ಶೀತ, ಕ್ಷಯ, ಆಮವಾತ, ಅಜೀರ್ಣ, ಕೂದಲು ಉದುರುವಿಕೆ, ತಲೆನೋವು, ಹೃದಯದ ಕಾಯಿಲೆ, ಮೂತ್ರಜನಕಾಂಗದ ಕಾಯಿಲೆ, ರೋಗನಿರೋಧಕ ಶಕ್ತಿ ಇಲ್ಲದಿರುವಿಕೆ, ಮುಟ್ಟಿನ ಸಂಬಂಧದ ಸಮಸ್ಯೆ, ನರಗಳ ಶಕ್ತಿ ಕುಂದುವಿಕೆ, ಬೊಜ್ಜು, ಪಾರ್ಶ್ವವಾಯು, ಚರ್ಮದ ಸಮಸ್ಯೆ, ಹೊಟ್ಟೆನೋವು, ಹುಣ್ಣು, ಮಾನಸಿಕ ಒತ್ತಡ ಸೇರಿದಂತೆ ನೂರೆಂಟು ಕಾಯಿಲೆಗಳಿಗೆ ನೋನಿ ರಾಮಬಾಣ.

ನೋನಿ ಸೇವಿಸುವವರು ಪಥ್ಯ ಮಾಡಬೇಕಾದ ಅವಶ್ಯಕತೆಯಿರುವುದಿಲ್ಲ.  ಇದು ರೋಗಿಗಳ ಸೇವನೆಗೆ ಮಾತ್ರವಲ್ಲದೇ ಅನೇಕ ಸಮಸ್ಯೆ ಬಾರದಂತೆ ಆರೋಗ್ಯ ಕಾಪಾಡಿಕೊಳ್ಳಲು ಆರೋಗ್ಯವಂತರಿಗೂ ಉಪಕಾರಿ. ಬೆಳಿಗ್ಗೆ ಉಪಾಹಾರಕ್ಕೆ ಮುನ್ನ ಒಂದು ಟೀ ಸ್ಪೂನ್‌ನಷ್ಟು ನೋನಿಯನ್ನು ಅರ್ಧಲೋಟ ನೀರಿನಲ್ಲಿ ಬೆರೆಸಿ ಕುಡಿದರೆ ಮತ್ತೆ ಸಂಜೆ ಊಟಕ್ಕೆ ಮುನ್ನ ಮತ್ತೊಂದು ಸ್ಪೂನ್‌ನಷ್ಟು ನೋನಿ ಪೇಯ ಉಪಯೋಗಿಸಿದರೆ ಸಾಕು. ಅಲ್ಲಿಯೇ ಫಲಿತಾಂಶ ತಿಳಿಯುತ್ತದೆ. ಸಂಪರ್ಕಕ್ಕೆ ೯೬೬೩೩೬೭೧೨೯.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT