ಬೆಂಗಳೂರು: ‘ಕನ್ನಡ ಭಾಷೆಯ ರಕ್ಷಣೆಗಾಗಿ ರಾಜ್ಯ ಸರ್ಕಾರ ಭಾಷಾ ಮಾಧ್ಯಮ ಉಸ್ತುವಾರಿ ಸಮಿತಿಯನ್ನು ರಚಿಸಬೇಕು’ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಸಲಹೆ ನೀಡಿದರು.
ಬೆಂಗಳೂರು ಪ್ರೆಸ್ ಕ್ಲಬ್ ಆಶ್ರ ಯದಲ್ಲಿ ಪ್ರೆಸ್ ಕ್ಲಬ್ನಲ್ಲಿ ಶುಕ್ರವಾರ ನಡೆದ ‘ಕನ್ನಡ ಭಾಷಾ ಮಾಧ್ಯಮ– ರಾಜಕಾರಣ ಮತ್ತು ಕಾನೂನು ಸವಾಲುಗಳು’ ಕುರಿತ ವಿಚಾರಸಂಕಿ ರಣದಲ್ಲಿ ಅವರು ಮಾತನಾಡಿದರು.
‘ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರು ಹಾಗೂ ಅಡ್ವೊಕೇಟ್ ಜನರಲ್ ಈ ಸಮಿತಿಯ ನೇತೃತ್ವ ವಹಿಸ ಬೇಕು. ಈ ಸಮಿತಿಯಲ್ಲಿ ಕಾನೂನು ಪಂಡಿತರು, ಶಿಕ್ಷಣ ತಜ್ಞರು, ಚಿಂತಕರು ಇರಬೇಕು. ಸರ್ಕಾರಿ ಪ್ರಾಥಮಿಕ ಶಾಲೆಗಳ ಗುಣಮಟ್ಟ ಹೆಚ್ಚಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸಮಿತಿ ಸಲಹೆ ನೀಡಬೇಕು’ ಎಂದರು.
ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ, ‘ರಾಜ್ಯ ಭಾಷೆಗಳೇ ಶಿಕ್ಷಣದ ಸಂವಹನ ಭಾಷೆಗಳಾಗಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ತೀರ್ಮಾನ ತೆಗೆದುಕೊಂಡಿದೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡುವಾಗ ಕೇಂದ್ರ ಸರ್ಕಾರವು ಸಾಹಿತ್ಯ ಅಕಾಡೆ ಮಿಯ ಸಲಹೆ ಪಡೆದಿತ್ತು. ಆದರೆ, ಭಾಷಾ ಮಾಧ್ಯಮದ ತೀರ್ಪು ನೀಡುವಾಗ ಸುಪ್ರೀಂ ಕೋರ್ಟ್ ಅಕಾ ಡೆಮಿಯ ಅಭಿಪ್ರಾಯವನ್ನೇ ಕೇಳಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಅಡ್ವೊಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್, ‘ಜಾಗತೀಕರಣ ಪ್ರವೇಶಿಸುವ ತನಕ ದೇಶದಲ್ಲಿ ಸಾಮೂಹಿಕ ಹಕ್ಕುಗಳಿಗೆ ಪ್ರಾಧಾನ್ಯತೆ ಸಿಕ್ಕಿತ್ತು. ಈಗ ಸಾಮೂಹಿಕ ಹಕ್ಕುಗಳ ಬದಲು ವೈಯಕ್ತಿಕ ಹಕ್ಕುಗಳಿಗೆ ಹೆಚ್ಚಿನ ಬೆಲೆ ಸಿಗುತ್ತಿದೆ. ಭಾಷಾ ಮಾಧ್ಯಮ ಕುರಿತ ತೀರ್ಪಿನಲ್ಲೂ ಇದೇ ರೀತಿ ಆಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯೆ ಪ್ರೊ. ಎಸ್.ಆರ್. ಲೀಲಾ, ಪ್ರೆಸ್ ಅಧ್ಯಕ್ಷ ಪಿ. ರಾಮಕೃಷ್ಣ ಉಪಾಧ್ಯ, ಉಪಾಧ್ಯಕ್ಷ ಗುಡಿಹಳ್ಳಿ ನಾಗರಾಜ್ ಇದ್ದರು.