ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ– ಲಿಂಗಾಯತ ಪ್ರತ್ಯೇಕ ಧರ್ಮಗಳಲ್ಲ

ಚರ್ಚೆ
ಅಕ್ಷರ ಗಾತ್ರ

ಡಾ. ಎಂ. ಎಂ. ಕಲ್ಬುರ್ಗಿಯವರು ಎಂದಿನಂತೆ ಆಧಾರ ರಹಿತ, ವಿಚಿತ್ರ ವಾದ­ಗಳನ್ನು ಮಂಡಿಸುತ್ತ ‘ಲಿಂಗಾಯತ: ವಲಸೆ ಧರ್ಮ­ವಲ್ಲ, ಕನ್ನಡಿಗರು ಸೃಷ್ಟಿಸಿದ ಮೊದಲ ಧರ್ಮ’ ಎಂಬ ಲೇಖನ­ದಲ್ಲಿ (ಪ್ರ.ವಾ. 2.5.14) ಹಲವು ಭ್ರಮಾಮೂಲ ಕಲ್ಪನೆಗಳನ್ನು ಎತ್ತಿ ಹಿಡಿದು ವಸ್ತುನಿಷ್ಠ ಸಂಶೋಧನೆ, ಸತ್ಯಕ್ಕೆ ಅಪಚಾರ ಮಾಡಿದ್ದಾರೆ.

ಉತ್ತರ ಭಾರತದಿಂದ ‘ವಲಸೆ ಬಂದ’ ಬೌದ್ಧ, ಜೈನ, ವೈದಿಕ (ಕಾಶ್ಮೀರ) ಶೈವಧರ್ಮಗಳು ಕರ್ನಾಟಕದಲ್ಲಿ ನಡೆಸಿದ ಪರಸ್ಪರ ಹೋರಾಟದಲ್ಲಿ ‘ಮೊದಲು ನಾಶ­ವಾದುದು ಬೌದ್ಧ ಧರ್ಮ’ ಎಂಬ ಹೇಳಿಕೆ ಗಮನಿಸಿ. ಕರ್ನಾಟಕದಲ್ಲಿದ್ದ ಬೌದ್ಧರ ಸಂಖ್ಯೆ ತೀರ ಕಡಮೆ– ಆ ಧರ್ಮ ‘ಹೋರಾಟದಲ್ಲಿ’ ಸಾಯ­ಲಿಲ್ಲ. ಜೈನಧರ್ಮ ಮೊದಲಿನಿಂದ ಅಹಿಂಸಾ ಪರವಾದ ಧರ್ಮ. ಅದು ಎಂದೂ ಇನ್ನೊಂದು ಧರ್ಮದ ಮೇಲೆ ಆಕ್ರಮಣ ನಡೆ­ಯಿಸಿಲ್ಲ. ಬೌದ್ಧಧರ್ಮಕ್ಕೆ ಜನರ ಬೆಂಬಲ ಎಂದೂ ಸಿಗಲಿಲ್ಲ ಅದು ಕ್ರಮೇಣ ತನಗೆ ತಾನೇ ಕಣ್ಮರೆಯಾಯಿತು. ವೈದಿಕ ಧರ್ಮವು ಬಸದಿಗಳನ್ನು ‘ಬ್ರಹ್ಮ ಜಿನಾಲಯ’ವನ್ನಾಗಿ, ಕಾಳಾ­ಮುಖ ಶೈವವು ಬಸದಿಗಳನ್ನು ‘ಎಕ್ಕೋಟಿ ಜಿನಾಲಯ’ಗಳನ್ನಾಗಿ ಪರಿವರ್ತಿಸಿದವು ಎಂಬ ಹೇಳಿಕೆ­­­ಯಂತೂ ಸಂಪೂರ್ಣ ವ್ಯರ್ಥ. ಬ್ರಾಹ್ಮ­ಣರು ಬಸದಿ­ಯೊಂ­ದನ್ನು ಕಟ್ಟಿಸಿ ‘ಬ್ರಹ್ಮ ಜಿನಾ­ಲಯ’ವೆಂದು ಹೆಸರಿಟ್ಟಿದ್ದಕ್ಕೆ ಸ್ಪಷ್ಟ ಸಾಕ್ಷ್ಯಾ­ಧಾರವಿದೆ. ‘ಎಕ್ಕೋಟಿ’ ಎಂಬುದು ಏಳುಕೋಟಿ ತಪಸ್ವಿ­­ಗಳ ಒಂದು ಪರಿಕಲ್ಪನೆ, ‘ಎಕ್ಕೋಟಿ ಜಿನಾ­ಲಯ’ವೆಂಬ ಹೆಸ­ರಿನ ಜಿನಾಲಯ ಅಥವಾ ಬಸದಿಯನ್ನು ಜೈನರೇ ನಿರ್ಮಿಸಿದ್ದಕ್ಕೆ ಸ್ಪಷ್ಟ ಸಾಕ್ಷ್ಯಾಧಾರವಿದೆ.

‘ಜೈನರನ್ನು ಹತ್ತಿಕ್ಕಿದ ಧರ್ಮಗಳಲ್ಲಿ ವೇದಪರ­ವಾದ ವೈದಿಕ ಬ್ರಾಹ್ಮಣವು ಆಗಮಪರವಾದ ಆಗಮಿಕ ಶೈವದ ಮೇಲೆ ತನ್ನ ಪ್ರಭಾವ ಬೀರಿ ಅದನ್ನು ಆಗಮಿಕ ಶೈವ ಬ್ರಾಹ್ಮಣವನ್ನಾಗಿಸಿತು’ ಎಂಬ ಮಾತು ಸಂಪೂರ್ಣ ನಿರಾಧಾರ. ಕರ್ನಾ­ಟಕದ ಇತಿಹಾಸವನ್ನು ಗಮನಿಸಿದರೆ 8, 9, 10, 11ನೇ ಶತಮಾನ­ಗಳಲ್ಲಿ ಕರ್ನಾಟಕದಲ್ಲಿ ಪ್ರಬಲವಾಗಿದ್ದ ಧರ್ಮಗಳು ಎರಡು–ಒಂದು ಜೈನಧರ್ಮ, ಇನ್ನೊಂದು ಲಾಕುಳ (ಪಾಶುಪತ) ಶೈವಧರ್ಮ, ಈ ಎರಡು ಧರ್ಮಗಳ ಮಧ್ಯೆ ತಿಕ್ಕಾಟಗಳಾದುದು ಇಲ್ಲವೇ ಇಲ್ಲವೆನ್ನಬಹುದು. ಹನ್ನೆರಡನೆಯ ಶತಮಾನಗಳ ಬಳಿಕ ಆ ಧರ್ಮ­ಗಳು ಕ್ಷೀಣವಾಗಲು ಸ್ಪಷ್ಟ ಕಾರಣ ವೀರ­ಶೈವ (ಲಿಂಗಾಯತ) ಧರ್ಮ, ಅದರ ಪ್ರಭಾವ. ಲಾಕುಳಶೈವವು ಎಲ್ಲ ಜಾತಿಗಳೂ ಸಮಾನ ಎಂಬುದನ್ನು ಒಪ್ಪಿಕೊಂಡಿದ್ದಿತು. ಅವರ ಪೂಜ್ಯ ಗ್ರಂಥ ‘ಪಾಶುಪತ ಸೂತ್ರ’ದ ಈ ಮಾತನ್ನು ಗಮನಿಸಿ:‘ಪಂಚಾಕ್ಷರೀ ಅಥವಾ ಅಷ್ಟಾಕ್ಷರೀ ಮಂತ್ರ­ವನ್ನು ಜಪಿಸಿ ಶಿವ ಅಥವಾ ವಿಷ್ಣುವನ್ನು ಅರ್ಚಿಸುವ ಶೂದ್ರನು ಶ್ರೇಷ್ಠ ಬ್ರಾಹ್ಮಣ­ನಿಗೆ ಸಮಾನ’. ಲಕುಲೀಶ–ಪಾಶುಪತ ಶೈವರು ಸ್ತ್ರೀ­ಯನ್ನು ಅನಾದರದಿಂದ ಕಂಡಿರಲಿಲ್ಲ. ಜೈನರೂ ಅಷ್ಟೇ. ಅತ್ತಿ­ಮಬ್ಬೆ, ಶಾಂತಲೆ­ಯ­ರಂ­ತಹ ಶ್ರೇಷ್ಠ ಮಹಿಳೆಯರನ್ನು ಆ ಜೈನ­ಧರ್ಮವು ಕರ್ನಾ­ಟಕಕ್ಕೆ ನೀಡಿವೆ; ಕಂತಿಯಂತಹ ಕವಯಿತ್ರಿಯೂ ಉಲ್ಲೇಖಾರ್ಹ.

‘ವೀರಶೈವ’, ‘ಲಿಂಗಾಯತ’ ಬೇರೆ ಬೇರೆ ಎಂಬ ಭ್ರಮೆಯಿಂದ ಡಾ. ಕಲಬುರ್ಗಿ ಇನ್ನೂ ದೂರ­ವಾಗಿಲ್ಲ. ಅವರ ಪ್ರಕಾರ ಬಸವಣ್ಣ  ‘ಲಿಂಗಾ­ಯತ’; ಅವನು ‘ವೀರಶೈವ’ ಅಲ್ಲ. ಆದರೆ ಅವರ ಹೆಸರಿನಲ್ಲಿ ಪ್ರಕಟವಾಗಿರುವ ಬಸವಣ್ಣನ ಈ ವಚನ ಗಮನಿಸಬೇಕು ‘ಎನ್ನ ಬಂದ ಭವಂ­ಗಳನು ಪರಿಹರಿಸಿ, ಎನಗೆ ಭಕ್ತಿ ಘನವನೆತ್ತಿ ತೋರಿ, ಎನ್ನ ಹೊಂದಿದ ಶೈವ­ಮಾರ್ಗಂಗಳನತಿ­ಗಳೆದು ವೀರ­ಶೈವಾಚಾರ­ವನರುಹಿ ತೋರಿ....’ ತನಗೆ ಪರಿಚಿತವಿದ್ದ ಸಾಂಪ್ರದಾಯಿಕ ವಿಧಿ ಆಚರಣೆ­ಗಳನ್ನು ಬಿಡಿಸಿ ‘ವೀರಶೈವಾ­ಚಾರ’­ವನ್ನು ಅರುಹಿ ತೋರಿದ ಚನ್ನಬಸವಣ್ಣನಿಗೆ ಕೃತಜ್ಞತೆ ಹೇಳುವ ಸಂದರ್ಭದಲ್ಲಿ ಬಸವಣ್ಣ ತನ್ನನ್ನು ವೀರ­ಶೈವ­ನೆಂದೇ ಪರೋಕ್ಷ­ವಾಗಿ ಕರೆದು­ಕೊಂಡಿದ್ದಾರೆ.

ಚನ್ನಬಸವಣ್ಣ ಅಂಗದ ಮೇಲೆ ಲಿಂಗ­ವನ್ನುಳ್ಳವರೇ ನಿಜವಾದ ವೀರಶೈವರು ಎಂದಿ­ದ್ದಾನೆ. ‘ಚತುರ್ವರ್ಣಿಯಾದಡೇನು ಚತುರ್ವ­ರ್ಣಾತೀತನೆ ವೀರಶೈವ’ ಎಂಬ ಸಿದ್ಧ­ರಾಮನ ಮಾತು ವೀರಶೈವದ ಉದಾತ್ತ ತತ್ವ­ವನ್ನು ಹೇಳುತ್ತದೆ. ಆದರೆ ವಚನಗಳಲ್ಲಿ ನೂರಾರು ಕಡೆ ‘ವೀರಶೈವ’ ಪದ ಕಾಣಿಸಿಕೊಳ್ಳು­ವಂತೆ ‘ಲಿಂಗಾಯತ’ ಪದ ಕಾಣಿಸಿಕೊಳ್ಳುವುದಿಲ್ಲ. ಒಂದೆರಡು ಕಡೆ ಬಂದರೂ ಅದರ ಅರ್ಥ ಗುರುವಿನಿಂದ ಶಿಷ್ಯನು ವಿಧ್ಯುಕ್ತವಾಗಿ ಇಷ್ಟಲಿಂಗ­ವನ್ನು ಪಡೆಯುವ ವಿಧಿ ಎಂದು ಮಾತ್ರ.

ಬಸವಣ್ಣನಿಗಿಂತ ಹಿಂದೆಯೇ ಇದ್ದ ಕೊಂಡಗುಳಿ ಕೇಶಿರಾಜನಲ್ಲಿ ‘ವೀರಶೈವ’ ಎಂಬ ಧಾರ್ಮಿಕ ಪಂಥದ ಹೆಸರು, ‘ಲಿಂಗಾಯತ’ ಎಂಬ ಹೆಸರಿನ ಧಾರ್ಮಿಕ ವಿಧಿಯ ಹೆಸರಿವೆ; ವಿವರಣೆಯನ್ನೂ ಅಲ್ಲಿ ಅವನು ನೀಡಿದ್ದಾನೆ, ಹದಿಮೂರು ಹದಿ­ನಾಲ್ಕನೇ ಶತಮಾನಗಳ ಬಳಿಕ ‘ಲಿಂಗಾಯತ’ವು ಆ ವಿಧಿಗೆ ಒಳಗಾದವನು, ಗುರುವಿನಿಂದ ಲಿಂಗ­ವನ್ನು ಪಡೆದವನು, ವೀರಶೈವ ಎಂಬ ಅರ್ಥ­ವನ್ನು ಪಡೆಯಿತು. ಈಗಲೂ ವೀರಶೈವಧರ್ಮ, ಲಿಂಗಾಯತಧರ್ಮ ಎಂಬ ಸಮಾನಾರ್ಥಕ ಪದ­ಗಳಿವೆ; ವೀರಶೈವರನ್ನು ಲಿಂಗಾಯತರೆಂದೇ ಕರೆ­ಯು­ತ್ತಾರೆ. ಬಸವಣ್ಣ ವೀರಶೈವನೂ ಹೌದು, ಲಿಂಗಾಯತನೂ ಹೌದು (ಮುಸ್ಲಿಂ, ಮಹಮ್ಮದೀಯ ಎರಡಕ್ಕೂ ಒಂದೇ ಅರ್ಥ). ವೀರಶೈವ ಪಂಥವು ಬಸವನಿಗಿಂತ ಹಿಂದಿನದು ಎಂದು ಹೇಳಲು ಹಲವು ಶಾಸನಾಧಾರಗಳಿವೆ; ವಚನಗಳಲ್ಲೂ ಅದಕ್ಕೆ ಪುಷ್ಟಿ ದೊರಕುತ್ತದೆ.

ಇಷ್ಟು ಸರಳ ಅರ್ಥವನ್ನು ಡಾ. ಕಲ್ಬುರ್ಗಿ ಗ್ರಹಿಸದಿದ್ದರೆ ಅದಕ್ಕೆ ಏನು ಹೇಳಬೇಕು? ಬಸವಣ್ಣ­ನಲ್ಲಿ ‘ಲಿಂಗಾಯತ’ ಪದ ಬಂದಿಲ್ಲ; ತಾನು ಶೈವ­ನಾಗಿ­ದ್ದವನು ‘ಲಿಂಗಾಯತ’ನಾದೆ ಎಂದು ಎಲ್ಲೂ ಹೇಳಿಕೊಂಡಿಲ್ಲ. ಅವನು ತಾನು ಶೈವನಾ­ಗಿದ್ದ­ವನು ವೀರಶೈವನಾದೆ ಎಂದು ಹೇಳಿಕೊಂಡಿ­ರು­ವಂತೆ, ಶೈವನಾಗಿದ್ದ ತಾನು ಲಿಂಗಾಯತನಾದೆ ಎಂದು ಎಲ್ಲಿ ಹೇಳಿಕೊಂಡಿದ್ದಾನೆ? ಇದಕ್ಕೆ ಡಾ. ಕಲ್ಬುರ್ಗಿಯವರು ನೇರವಾಗಿ ಉತ್ತರಿಸಬೇಕು. ‘ವೀರಶೈವ’ ಪದ ಬಳಸಿರುವ ಕ್ರಿ.ಶ. 1120ರ ಕೊಂಡಗುಳಿ ಕೇಶಿರಾಜನ (ಕ್ರಿ.ಶ. 1100) ಕೃತಿಗಳನ್ನು ಡಾ. ಕಲ್ಬುರ್ಗಿಯವರೇ ಸಂಪಾದಿಸಿದ್ದಾರೆ.

ಭಾರತಕ್ಕೆ ಪ್ರತ್ಯೇಕವಾದ ಸಂಸ್ಕೃತಿಯಿರುವಂತೆ ಕರ್ನಾಟಕಕ್ಕೂ ಒಂದು (ಉಪ) ಸಂಸ್ಕೃತಿ­ಯಿದ್ದರೂ ಅದು ಪ್ರತ್ಯೇಕವಾದುದಲ್ಲ. ಕರ್ನಾಟಕ ಸಂಸ್ಕೃ­ತಿಯು ಭಾರತೀಯ ಸಂಸ್ಕೃತಿಯ ಒಂದು ಅವಿ­ಭಾಜ್ಯ ಅಂಗ; ವೀರಶೈವ ಅಥವಾ ಲಿಂಗಾ­ಯತವೂ ಹಿಂದೂಧರ್ಮದ ಒಂದು ಅವಿಭಾಜ್ಯ ಅಂಗ. ಜೈನವು ಉತ್ತರ ಭಾರತದಿಂದ ಕರ್ನಾ­ಟಕಕ್ಕೆ ‘ವಲಸೆ ಬಂದಿತು’ ಎಂಬಂತಹ ಮಾತು­ಗಳು ಅರ್ಥಹೀನ; ‘ವ್ಯಾಪಿಸಿತು’ ಎಂದು ಬೇಕಾ­ದರೆ ಹೇಳಲಿ. ನಾನು ದೆಹಲಿಗೆ ಹೋಗಿ ವಾಸಿಸಿ­ದರೆ ಅದು ‘ವಲಸೆ’ ಹೋದಂತಲ್ಲ; ಆದರೆ ಇಂಗ್ಲೆಂಡಿಗೆ ಹೋಗಿ ಅಲ್ಲಿ ನೆಲಸಿದರೆ ವಲಸೆ ಹೋದಂತೆ. ವಲಸೆ ಪದವನ್ನು ಅವರಂತೆ ಬಳಸಿ­ದರೆ ಲಿಂಗಾಯತ ಧರ್ಮವು ಬಸವಕಲ್ಯಾಣ ಪ್ರದೇಶ­ದಿಂದ ಧಾರವಾಡ ಪ್ರದೇಶಕ್ಕೆ, ಬಳಿಕ ಬೆಂಗಳೂರು ಪ್ರದೇಶಕ್ಕೆ ವಲಸೆ ಬಂದಿತು ಎಂದು ಹೇಳಿದಂತೆ ಅರ್ಥಹೀನ. ಬೌದ್ಧ, ಜೈನ, ಶೈವ (ವೀರಶೈವ) ಮತಗಳು ಭಾರತೀಯ ಮತಗಳು. ವೀರಶೈವವು ಶೈವ ಹಿಂದೂ ಮತದ ಒಂದು ಉಪ ಧರ್ಮ(Religious Denomiation). ಗುರು­ಮಠ, ವಿರಕ್ತಮಠಗಳಿಗೆ ಕರ್ತವ್ಯ ಭೇದ­ಗಳು ತಾತ್ವಿಕವಾಗಿ ಇರಬಹುದೇ ಹೊರತು ಅವೆ­ರಡೂ ಸಮಾನ ಗೌರವಾರ್ಹವಾದುವು; ಇಂದು ಅವೆರಡೂ ಸಮಾಜಕ್ಕಾಗಿ ಶ್ರಮಿಸುತ್ತಿವೆ.

11–12ನೇ ಶತಮಾನಗಳ ಬಳಿಕ ಜೈನ ಧರ್ಮದವರ ಸಂಖ್ಯೆ ಕಡಮೆಯಾಗಲು ವೀರಶೈವದ ಸಮಾನತೆಯ ತತ್ವದಿಂದ ಜನ ಹೆಚ್ಚು ಆಕರ್ಷಿತವಾದುದು ಕಾರಣ, ಕ್ರಿಶ್ಚಿಯನ್‌ ಮಿಷನರಿಗಳಂತೆ ವೀರಶೈವರು ಆಮಿಷಗಳನ್ನೊಡ್ಡಿ ಜೈನರನ್ನು ಮತಾಂತರಿಸಲಿಲ್ಲ. ಇದನ್ನು ನಾವೆಲ್ಲ ಮನ­ಗಾಣವುದು ಅಗತ್ಯವಾಗಿದೆ. ಜೈನರಾಗಿದ್ದವರು ಲಿಂಗಾಯತರಾಗಿ ತಾವಾಗಿ ಮತಾಂತರಗೊಂಡವರೇ ಹೊರತು ಅನ್ಯರು ಮತಾಂತರ ಮಾಡಿದವರಲ್ಲ. ವೀರಶೈವದ ಭಕ್ತಿಯ ಪರಿಕಲ್ಪನೆ, ಸಾಮಾಜಿಕ ಸಮಾನತೆ ಇತ್ಯಾದಿ ಉದಾತ್ತ ಸಾಮಾಜಿಕ ಚಿಂತನೆಗಳಿಂದ ಅದು ಜನಪ್ರಿಯಗೊಂಡಿತು ಎಂಬುದು ಸ್ವಯಂವೇದ್ಯ.

ಕೆಲವು ವಚನಗಳಲ್ಲಿ ದೇವಾಲಯ ಪರಿಕಲ್ಪನೆಯನ್ನು ನಿರಾಕರಿಸಿದ್ದರೂ ವೀರಶೈವ­ಪಂಥ ಖಂಡಿತವಾಗಿ ದೇವಾಲಯ ವಿರೋಧಿ­ಯಲ್ಲ. ಶರಣರು ಧರಿಸುತ್ತಿದ್ದ, ಈಗಲೂ ಧರಿ­ಸುವ ಇಷ್ಟಲಿಂಗವು ವಾಸ್ತವವಾಗಿ ಕಂತೆ ಬಿಗಿದ ‘ಪುಟ್ಟ ಲಿಂಗ’ವೇ ಆಗಿದೆ– ಆ ಪುಟ್ಟಲಿಂಗ ದೇವಾ­ಲಯದ ಶಿವಲಿಂಗದ ಸಂಕ್ಷಿಪ್ತ ರೂಪ. ಅದಕ್ಕೆ ಗೋಳಕ, ಪಾಣಿಪೀಠ ಉಂಟು. ಇಷ್ಟಲಿಂಗವನ್ನು ಯಾರು ಬೇಕಾದರೂ ಧರಿಸಬಹುದು; ಎಲ್ಲಿ ಬೇಕಾದರೂ ಪೂಜಿಸಬಹುದು; ಅದರ ಪೂಜಾ ವಿಧಾನಕ್ಕೆ ಶಾಸ್ತ್ರ ಬೇಕಾಗಿಲ್ಲ; ಅರ್ಚಕರು ಬೇಕಾಗಿಲ್ಲ; ಅದನ್ನು ಇಡಲು ಕಟ್ಟಡ ಬೇಕಾಗಿಲ್ಲ. ದೇವಾಲಯದ ಶಿವಲಿಂಗದ ಸಾಮಾಜೀ­ಕ­ರಣವೇ ಇಷ್ಟಲಿಂಗ; ಜಾತಿಭೇದ ವಿನಾಶಕ್ಕೆ ವೀರಶೈವವು ಕಂಡುಕೊಂಡ ಒಂದು ಪ್ರಬಲ ಅಸ್ತ್ರ ಅದು. ಬಹುತೇಕ ಎಲ್ಲ ಪ್ರಮುಖ ವಚನಕಾರರ ಅಂಕಿತ­ಗಳು ದೇವಾಲಯಗಳ ಶಿವಲಿಂಗಗಳ ಹೆಸರುಗಳೇ ಆಗಿವೆ.

ಉದಾಹರಣೆಗೆ ರಾಮ­ನಾಥ, ಕೂಡಲ ಸಂಗಮದೇವ. ವಚನಕಾರ ಶಂಕರ ದಾಸಿಮಯ್ಯ ಇಳಕಲ್‌ ತಾಲ್ಲೂಕಿನ ಗ್ರಾಮ ಶಿವಾಲಯ ಜಡೆಯ ಶಂಕರಲಿಂಗ ದೇವರ ಭಕ್ತ. ಬಸವಣ್ಣ, ಅಲ್ಲಮ, ಅಕ್ಕಮಹಾ­ದೇವಿ­ಯರು ತಮ್ಮ ಕೊನೆಯ ದಿನಗಳನ್ನು ಕಳೆದದ್ದು ಸಂಗಮೇಶ್ವರ, ಮಲ್ಲಿಕಾರ್ಜುನ ದೇವಾಲಯಗಳಿದ್ದ ಕೂಡಲ ಸಂಗಮದಲ್ಲಿ, ಶ್ರೀಶೈಲದಲ್ಲಿ. ಜೈನರ ಬಸದಿಗಳನ್ನು ನಾಶ­ಮಾಡುವ ಆದೇಶ ಯಾವ ವಚನ­ದಲ್ಲಿಯೂ ಇಲ್ಲ. ಆದರೆ ಕೆಲವು ಲಿಂಗಾಯತರು ಆವೇಶ­ಭರಿತರಾಗಿ ಬಸದಿಗಳ ನಾಶಕ್ಕೆ ಯತ್ನಿಸಿರ­ಬಹುದು, ಉದಾಹರಣೆಗೆ, ಏಕಾಂತ­ರಾಮಯ್ಯನು ಅಬ್ಬಲೂರಿನ ಬಸದಿ ನಾಶ­ಮಾಡಿ­ದುದು, ಲಿಂಗಾ­ಯತರಿಗೂ ಜೈನರಿಗೂ ತಿಕ್ಕಾಟಗಳಾಗಿ ಕೋಪದ ಭರದಲ್ಲಿ ಬಸದಿಗಳು ನಾಶವಾಗಿರುವ ಸಾಧ್ಯತೆ ಇದೆ. ಆದರೆ ಸಾಮೂಹಿಕ ನಾಶ ಆಗಿಲ್ಲ. ಜೈನರ ಸಂಖ್ಯೆ ಕಡಮೆ­ಯಾದಂತೆ ಅವರ ಬಸದಿಗಳು ಕಳಾಹೀನ­ವಾದುವು, ಭಾರತೀಯ ಧರ್ಮ­ಗಳಾದ ಹಿಂದೂ, ಜೈನ, ಬೌದ್ಧ, ಸಿಖ್‌ ಧರ್ಮಗಳು ಹಿಂಸಾ ಪ್ರವೃತ್ತಿಯವಲ್ಲ (ಭಾರತೀಯೇತರ ಒಂದೆರಡು ಧರ್ಮಗಳು ಹಿಂಸಕ ಸ್ವಭಾವದವು). ‘ವೈದಿಕ ಬ್ರಾಹ್ಮಣ’, ‘ಹಿಂದೂ’ ಪದಗಳನ್ನು ಸಮಾನಾರ್ಥಕವಾಗಿ ಡಾ. ಕಲ್ಬುರ್ಗಿಯವರು ಬಳಸಿರುವಂತೆ ಸೂಚನೆ ಇದೆ. ಬ್ರಾಹ್ಮಣ ಎಂಬುದು ಒಂದು ಪಂಗಡ, ವೀರಶೈವದಂತೆ; ಅವೆ­ರಡೂ ಹಿಂದೂ ಧರ್ಮದ ಒಳ ಪಂಗಡ­ಗಳು, ಬ್ರಾಹ್ಮಣರಲ್ಲಿ ಲಿಂಗಾಯತರಲ್ಲಿ ಉದಾತ್ತ ತತ್ವಗಳಿದ್ದರೂ ಅವೆರಡರಲ್ಲೂ ಇಂದಿಗೂ ಮೇಲು ಕೀಳು, ಸ್ಪೃಶ್ಯ–ಅಸ್ಪೃಶ್ಯ ಭಾವನೆ ಮರೆ­ಯಾಗಿಲ್ಲ (ಈಗೀಗ ಕಡಿಮೆಯಾಗುತ್ತಿರುವುದು ಸಮಾಧಾನದ ಸಂಗತಿ).

ರಾಮಾಯಣ, ಮಹಾಭಾರತ, ಪಂಚತಂತ್ರ ಇವು ಭಾರ­ತೀಯ ಕಾವ್ಯಗಳು, ‘ಉತ್ತರ ಭಾರತೀಯ’ ಅಲ್ಲ. ಅವು ಇಡೀ ಭಾರ­ತೀಯ ಸಂಸ್ಕೃತಿಯನ್ನು ರೂಪಿಸಿದ ಶ್ರೇಷ್ಠ ಕೃತಿಗಳು, ರಾಮ, ಕೃಷ್ಣ, ಹನುಮಾನ್‌, ಸೀತಾ ಇವರು ಕೇವಲ ‘ಉತ್ತರ ಭಾರತ’­ದವರೆಂದು ಭಾವಿಸು­ವುದು ಖಂಡಿತ ವಿವೇಕ ಅಲ್ಲ. ವೀರ­ಶೈವರ ಆರಾಧ್ಯ­ದೈವ ಶಿವ, ಅವನ ಮೂರ್ತಿ ಇವು ಭಾರತಾ­ದ್ಯಂತ ಇವೆ; ನೇಪಾಳದಲ್ಲಿಯೂ ಇವೆ. ಉತ್ತರ ಭಾರತೀಯ, ದಕ್ಷಿಣ ಭಾರತೀಯ ಕನ್ನಡಿಗರು, ಕನ್ನಡೇತರರು ಎಂಬ ಭಾವನೆ­ಗಳು ಧಾರ್ಮಿಕ ಸಾಂಸ್ಕೃತಿಕ ಮಟ್ಟದಲ್ಲಿ ಸ್ಥಾನ ವಹಿ­ಸದೇ ಇರು­ವಂತೆ ನೋಡಿಕೊಳ್ಳಬೇಕು.

ಪಂಪ­ಭಾರತ, ಕುಮಾರವ್ಯಾಸ ಭಾರತ ಇವು ಉತ್ತರ ಭಾರತದಿಂದ ಬಂದ ಕನ್ನಡ ಅನುವಾದ ಸಾಹಿತ್ಯ ಎಂದು ಲಘುವಾಗಿ ಭಾವಿಸುವುದು ನಗೆ­­ಪಾಟ­ಲಿನ ಸಂಗತಿ. ಬಸವಣ್ಣನ ಚಳವಳಿ ಉತ್ತರ­ಭಾರತದ ವಿರುದ್ಧ, ಸಂಸ್ಕೃ­ತದ ವಿರುದ್ಧ ನಡೆದ ಚಳವಳಿ ಅಲ್ಲ. ಆ ಚಳವಳಿ ಹಿಂದೂ­ಧರ್ಮದ ಒಳಗೆ, ಅದರ ಕಾಲುಷ್ಯವನ್ನು ಹೋಗ­ಲಾಡಿಸಲು ನಡೆಸಿದ ಅಪೂರ್ವ ಚಳವಳಿ. ತಮ್ಮನ್ನು ತಾವು ‘ಸನಾತನಿ ಹಿಂದೂ’ ಎಂದು ಹೆಮ್ಮೆಯಿಂದ ಕರೆ­ದು­ಕೊಂಡ ಗಾಂಧೀಜಿ­­ಯ­ವರು ಅಸ್ಪೃಶ್ಯತೆ ವಿರುದ್ಧ ನಡೆಸಿದ ಹೋರಾಟ ಹಿಂದೂ­ಧರ್ಮದ ಸುಧಾ­ರಣೆಗಾಗಿ ನಡೆಸಿದ ಹೋರಾಟ; ‘ಸರ್ವೇ ಜನಾ ಸುಖಿನಃ ಸಂತು’ (ಎಲ್ಲ ಜನರೂ ಸುಖ­ವಾಗಿ­­ರಲಿ) ಎಂಬ ಭಾರ­­­ತೀಯ ಘೋಷಣೆಯನ್ನು ನಿಜ­ವಾಗಿಸಲು ನಡೆ­ಸಿದ ಹೋ­ರಾಟ. ಅಂತೆಯೇ ಹನ್ನೆರಡನೇ ಶತಮಾನದ ಶರಣ ಚಳವಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT