ರಾಷ್ಟ್ರಕವಿ ಕುವೆಂಪು 1930ರಲ್ಲಿ ರಚಿಸಿದ ‘ಜಯ ಭಾರತ ಜನನಿಯ ತನುಜಾತೆ’ ಕವನವು ಅವರ ಕೈಯಲ್ಲೇ ಮುಂದೆ ಸಣ್ಣಪುಟ್ಟ ಮಾರ್ಪಾಡುಗಳನ್ನು ಪಡೆಯಿತು. 2004ರ ಫೆ. 23ರಂದು ರಾಜ್ಯ ಸರ್ಕಾರ ಅದನ್ನು ‘ನಾಡಗೀತೆ’ಯಾಗಿ ಗೌರವಿಸಿ ಅದಕ್ಕೊಂದು ವಿಶೇಷ ಸ್ಥಾನ ನೀಡಿತು.
ಈ ಕವನವು ಕರ್ನಾಟಕದ ಬಗ್ಗೆ ಹೆಮ್ಮೆ ಮೂಡಿಸುವಂತಹ ವಿಷಯಗಳನ್ನು ಒಳಗೊಂಡಿದೆ. ಅದರ ಭೌಗೋಳಿಕ ಸೌಂದರ್ಯ, ರಾಮ, ಕೃಷ್ಣ, ಕಪಿಲ, ಪತಂಜಲ, ಗೌತಮರಂತಹ ಪೂಜ್ಯರನ್ನು, ಚಿಂತಕರನ್ನು ಪಡೆದಿರುವ ಭಾರತ ಮಾತೆಯ ಮಗಳಾದ ಕರ್ನಾಟಕ ಮಾತೆಯ ಶ್ರೇಷ್ಠತೆಯನ್ನು ಕೊಂಡಾಡಲಾಗಿದೆ. ಕರ್ನಾಟಕದ ಹೆಮ್ಮೆಯ ವಿದ್ಯಾರಣ್ಯ, ಬಸವಣ್ಣ, ಮಧ್ವರಂತಹ ಶ್ರೇಷ್ಠ ಸಾಧಕರಿಗೆ, ಚಿಂತಕರಿಗೆ ಪಂಪ, ರನ್ನ, ಪೊನ್ನ, ಜನ್ನ, ಲಕ್ಷ್ಮೀಶರಂತಹ ಶ್ರೇಷ್ಠ ಕವಿಗಳಿಗೆ ಕರ್ನಾಟಕ ಮಾತೆ ಜನ್ಮ ನೀಡಿದ್ದಾಳೆ.
ಅದು ಎಲ್ಲ ಧರ್ಮೀಯರೂ, (ಹಿಂದೂ, ಕ್ರೈಸ್ತ, ಮುಸಲ್ಮಾನ, ಪಾರಸಿಕ, ಜೈನ ಧರ್ಮೀಯರೂ) ಸಹಜೀವನವನ್ನು ನಡೆಸುತ್ತಿರುವ ಶಾಂತಿಯ ತೋಟ; ಜನಕನನ್ನು ಹೋಲುವ ಹಲವು ಚಕ್ರವರ್ತಿಗಳನ್ನು ಕಂಡಿದೆ. ರಾಷ್ಟ್ರ ಮಟ್ಟದ ವಿಶ್ವವಿಖ್ಯಾತ ಗಾಯಕ, ವೈಣಿಕರನ್ನು ಕಂಡಿದೆ. ಭಾರತಕ್ಕೆ ತನ್ನದೇ ಆದ ಭವ್ಯ ಇತಿಹಾಸವಿದೆ; ಹೆಮ್ಮೆಯ ಪರಂಪರೆಯಿದೆ. ಅದರಂತೆಯೇ ಭಾರತೀಯ ಸಂಸ್ಕೃತಿಯ ಭಾಗವಾಗಿರುವ ಕರ್ನಾಟಕ ಮತ್ತು ಅದರ ಸಂಸ್ಕೃತಿಗೂ ಅಷ್ಟೇ ಹೆಮ್ಮೆಯ ಪರಂಪರೆ ಇದೆ. ಭಾರತೀಯ ಸಂಸ್ಕೃತಿಯ ಸಂವರ್ಧನೆಗೆ ಕರ್ನಾಟಕದ್ದೇ ಕೊಡುಗೆ ಇದೆ. ಕುವೆಂಪು ಅವೆಲ್ಲವನ್ನೂ ತಮ್ಮ ಅಪೂರ್ವ ಕವನದಲ್ಲಿ ಹಿಡಿದಿಟ್ಟಿದ್ದಾರೆ.
ಈ ಕವನವನ್ನು ಓದಿದ ಯಾರಿಗೇ ಆಗಲಿ ಕನ್ನಡ ನುಡಿ, ಕರ್ನಾಟಕದ ಬಗೆಗಿನ ಹೆಮ್ಮೆ ವರ್ಧಿಸುತ್ತದೆ ಮಾತ್ರವಲ್ಲ, ಅದರ ತಿರುಳೂ ಮನಸ್ಸನ್ನು ಮುಟ್ಟುತ್ತದೆ. ಕುವೆಂಪು ಅವರಿಗೆ ಭಾರತದ ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ಇತಿಹಾಸಗಳ ಅರಿವು ಇತ್ತು; ಕರ್ನಾಟಕದ್ದಂತೂ ಇನ್ನೂ ಚೆನ್ನಾಗಿಯೇ ಇತ್ತು. ಕನ್ನಡ ಮಾತನಾಡುವವರು ಬೇರೆ ಬೇರೆ ರಾಜ್ಯಗಳಲ್ಲಿ ಹಂಚಿ ಹೋಗಿ ಕನ್ನಡವು ದೀನ ಸ್ಥಿತಿಯಲ್ಲಿದ್ದಾಗ, ಭಾರತವು ಬ್ರಿಟಿಷರ ದಾಸ್ಯಕ್ಕೆ ಸಿಕ್ಕಿ ನಲುಗಿ ಹೋಗುತ್ತಿದ್ದಾಗ ಕುವೆಂಪು ಈ ಕವನವನ್ನು ಬರೆದದ್ದು ಒಂದು ಅವಿಸ್ಮರಣೀಯ ಸಂಗತಿ; ನಮ್ಮೆಲ್ಲರ ಹೆಮ್ಮೆಯನ್ನು ಅದು ಉಕ್ಕಿಸುತ್ತದೆ.
ಭಾರತಕ್ಕೆ ಸ್ವಾತಂತ್ರ್ಯ ದೊರಕುವ ಮುನ್ನ ಬಂಕಿಂಚಂದ್ರರ ‘ವಂದೇ ಮಾತರಂ’ ಗೀತೆಯು ಜನಮಾನಸದಲ್ಲಿ ದೇಶಭಕ್ತಿಯನ್ನು ಉದ್ಘೋಷಿಸುತ್ತಿತ್ತು. ನಾವು ವಿದ್ಯಾರ್ಥಿಗಳಾಗಿದ್ದಾಗ (1945) ಬೀದಿಗಳಲ್ಲಿ ‘ವಂದೇ ಮಾತರಂ’ ಎಂಬ ಘೋಷಣೆ ಕೂಗಿದರೆ ಪೊಲೀಸರು ದೊಣ್ಣೆಯಿಂದ ಹೊಡೆಯುತ್ತಿದ್ದರು. 1947ಕ್ಕೆ ಮುಂಚೆ ‘ಇಂಡಿಯಾ’ದ ಸಾಮ್ರಾಜ್ಯ ಗೀತೆ ‘God save the king’ ಆಗಿತ್ತು. 1947ರಲ್ಲಿ ಭಾರತ ಸ್ವತಂತ್ರವಾದ ಮೇಲೆ ಸಂವಿಧಾನ ರೂಪುಗೊಂಡು ರವೀಂದ್ರನಾಥ ಟ್ಯಾಗೋರರ ‘ಜನಗಣಮನ ಅಧಿನಾಯಕ ಜಯಹೇ’ ಕವನವನ್ನು ರಾಷ್ಟ್ರಗೀತೆ (National Anthem) ಎಂದು, ಬಂಕಿಂಚಂದ್ರ ಚಟರ್ಜಿಯವರ ‘ವಂದೇ ಮಾತರಂ’ ಕವನವನ್ನು ರಾಷ್ಟ್ರಗಾಥೆ (National Song) ಎಂದು ಗೌರವಿಸಿ ಎರಡಕ್ಕೂ ಸಮಾನ ಸ್ಥಾನವನ್ನು ನೀಡಲಾಯಿತು. ಎರಡೂ ರಾಷ್ಟ್ರಗೀತೆಗಳೇ– ಎರಡನ್ನೂ ಸಭೆಗಳಲ್ಲಿ ಎಲ್ಲರೂ ಎದ್ದು ನಿಂತು ಹಾಡಬೇಕು; ಗೌರವಿಸಬೇಕು.
ಗಮನಿಸಬೇಕಾದ ಮುಖ್ಯ ಸಂಗತಿ ಇದು: ಟ್ಯಾಗೋರರ ಕವನದ ಐದು ಪದ್ಯ ಖಂಡಗಳಲ್ಲಿ ಪಲ್ಲವಿಯ ಜೊತೆ ಒಂದು ಪದ್ಯ ಖಂಡವನ್ನು, ಬಂಕಿಂಚಂದ್ರರ ಐದು ಪದ್ಯ ಖಂಡಗಳಲ್ಲಿ ಪಲ್ಲವಿಯ ಜೊತೆ ಒಂದು ಪದ್ಯ ಖಂಡವನ್ನು ಆರಿಸಲಾಗಿದೆ. ಅಂದರೆ ರಾಷ್ಟ್ರಗೀತೆಗಳಾಗಿ ಹಾಡಲು ಅನುಕೂಲವಾಗುವಂತೆ ಮೂಲ ಕವನಗಳನ್ನು ಸಂಕ್ಷಿಪ್ತಗೊಳಿಸಲಾಗಿದೆ. ಒಂದನ್ನು ಹಾಡಲು ಸುಮಾರು 58 ಸೆಕೆಂಡುಗಳು, ಇನ್ನೊಂದನ್ನು ಹಾಡಲು 45 ಸೆಕೆಂಡುಗಳು ಮಾತ್ರ ಬೇಕಾಗುತ್ತದೆ. ಇದರಿಂದಾಗಿ ರಾಷ್ಟ್ರಗೀತೆಗಳ ಪಾಠ ಎಲ್ಲರಿಗೂ ನೆನಪಿರುತ್ತದೆ. ಎಲ್ಲರೂ ಅದನ್ನು ಎದ್ದು ನಿಂತು ಏಕಕಂಠದಿಂದ ಹಾಡುತ್ತಾರೆ. ಅವುಗಳಿಗೆ ನಿರ್ದಿಷ್ಟ ರಾಗ ಸಂಯೋಜನೆ ಮಾಡಲಾಗಿದೆ.
1956ರಲ್ಲಿ ರಾಜ್ಯ ಏಕೀಕರಣಗೊಂಡರೂ ಕರ್ನಾಟಕ ಸರ್ಕಾರ ಕುವೆಂಪು ಅವರ ಜನ್ಮಶತಮಾನೋತ್ಸವದ ನೆನಪಿಗಾಗಿ 2003ರಲ್ಲಿ ಅವರ ಕವನ ‘ಜಯ ಭಾರತ ಜನನಿಯ ತನುಜಾತೆ’ಯನ್ನು ‘ನಾಡಗೀತೆ’ ಎಂದು ಘೋಷಿಸಿತು. ಆ ಕವನದ ಏಳು ಪದ್ಯ ಖಂಡಗಳಲ್ಲಿ ನಾಲ್ಕು ಪದ್ಯ ಖಂಡಗಳನ್ನು ಉಳಿಸಿಕೊಂಡಿತು. ‘ಜಯ ಹೇ ಕರ್ನಾಟಕ ಮಾತೆ...’, ‘ಜನನಿಯ ಜೋಗುಳ ವೇದದ ಘೋಷ...’, ‘ಸರ್ವ ಜನಾಂಗದ ಶಾಂತಿಯ ತೋಟ...’, ‘ಕನ್ನಡ ನುಡಿ ಕುಣಿದಾಡುವ ಗೇಹ...’ ಎಂದು ಆರಂಭವಾಗುತ್ತವೆ ಆ ಪದ್ಯ ಭಾಗಗಳು.
ಇಡೀ ಕವನವನ್ನು ನಾಡಗೀತೆಯಾಗಿ ಘೋಷಿಸಬೇಕು ಎಂದು ಕೆಲವರು ಒತ್ತಡ ಹಾಕಿದ್ದರಿಂದ 2004ರಲ್ಲಿ ಇಡೀ ಕವನವನ್ನು ‘ನಾಡಗೀತೆ’ಯಾಗಿ ಘೋಷಿಸಲಾಯಿತು. ನಾನೂ ಸೇರಿದಂತೆ ಹಲವರು ಅದನ್ನು ವಿರೋಧಿಸಿದೆವು. ಆ ವಿರೋಧಕ್ಕೆ ಕಾರಣ–
1. ಇಡೀ ಕವನವನ್ನು ಯಾರೂ ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲ. ಇಂದಿನ ರಾಷ್ಟ್ರಗೀತೆಗಳಾದ ‘ಜನಗಣಮನ ಅಧಿನಾಯಕ...’ ಮತ್ತು ‘ವಂದೇ ಮಾತರಂ’ಗಳ ಪೂರ್ಣ ಪಾಠ ಯಾರಿಗೂ ಗೊತ್ತಿಲ್ಲ. ಆದರೆ ಇಂದು ಪ್ರಚಲಿತವಿರುವ ಆ ಸಂಕ್ಷಿಪ್ತಗೊಂಡ ಗೀತೆಗಳನ್ನು ಎಲ್ಲರೂ ನೆನಪಿಟ್ಟುಕೊಂಡು ಹಾಡುತ್ತಾರೆ.
2. ಸಂಕ್ಷಿಪ್ತಗೊಂಡಿರುವ ರಾಷ್ಟ್ರಗೀತೆಗಳನ್ನು ಹಾಡಲು ಸೆಕೆಂಡುಗಳು ಸಾಕು. ಆದರೆ ‘ನಾಡಗೀತೆ’ಯ ಪೂರ್ಣ ಪಾಠವನ್ನು ಹಾಡಲು ಕನಿಷ್ಠ ನಾಲ್ಕು ನಿಮಿಷ ಬೇಕು. ಕೆಲವರು ರಾಗಾಲಾಪನೆ ಮಾಡಿ ಹಾಡಿದರೆ 6–7 ನಿಮಿಷ ಬೇಕು. ಅಷ್ಟು ಕಾಲ ವಯಸ್ಕರಿಗೆ, ದೈಹಿಕ ತೊಂದರೆ ಇರುವವರಿಗೆ ಎದ್ದು ನಿಲ್ಲುವುದು ಕಷ್ಟವಾಗುತ್ತದೆ. ಆರೋಗ್ಯವಂತರೂ ಯಾವಾಗ ಮುಗಿಯುತ್ತದೋ ಎಂದು ಚಡಪಡಿಸುತ್ತಾರೆ.
3. ಇಡೀ ‘ನಾಡಗೀತೆ’ಯನ್ನು ವೇದಿಕೆ ಮೇಲಿನಿಂದ ಯಾರೋ ಒಬ್ಬರು ಅಥವಾ ಇಬ್ಬರು ಪುಸ್ತಕ ನೋಡಿಕೊಂಡು ಹಾಡುತ್ತಾರೆ. ಕೇಳುಗರು ಅವರ ಜೊತೆ ದನಿಗೂಡಿಸುತ್ತಾರೆ. ಪುಸ್ತಕ ನೋಡಿಕೊಳ್ಳದೆ ಹೇಳುವವರು ಪದ್ಯಖಂಡಗಳ ಅನುಕ್ರಮಣಿಕೆ ಬದಲಾವಣೆ ಮಾಡಿರುವುದೂ ಉಂಟು. ಇದು ನೆನಪಿನ ದೋಷದ ಪರಿಣಾಮ.
4. ನಮ್ಮ ಹಿಂದಿನ ದೀರ್ಘ ಕಾವ್ಯಗಳನ್ನು ಪಠ್ಯವಾಗಿ ಬೋಧಿಸಲು ಸಂಕ್ಷಿಪ್ತಗೊಳಿಸಲಾಗಿದೆ. ಉದಾಹರಣೆಗೆ, ‘ಪಂಪ ಭಾರತ ಸಂಗ್ರಹ’, ‘ಗದಾಯುದ್ಧ ಸಂಗ್ರಹ’, ಕುಮಾರವ್ಯಾಸನ ‘ಸಭಾ ಪರ್ವ ಸಂಗ್ರಹ’ ಇತ್ಯಾದಿ. ಹಾಗೆ ಸಂಗ್ರಹಿಸಿದರೆ ಅದರಿಂದ ಕವಿಗಳಿಗೆ ಅಪಚಾರ ಮಾಡಿದಂತೆ ಆಗುವುದಿಲ್ಲ. ಕೆಲವು ಪದ್ಯಗಳನ್ನು ಬಿಡಬಹುದೇ ಹೊರತು ಗದ್ಯವಾಗಲಿ ಪದ್ಯವಾಗಲಿ ಕವಿ ಬರೆದಿರುವ ಮೂಲ ಪಾಠವನ್ನು ತಿದ್ದುವ ಹಕ್ಕು ಮಾತ್ರ ಯಾರಿಗೂ ಇಲ್ಲ; ಕುವೆಂಪು ಬರೆದಿರುವ ನಾಡಗೀತೆಯ ಪದ್ಯ ಭಾಗಗಳನ್ನು ಬಿಡಬಹುದು. ಆದರೆ ಪಾಠವನ್ನು ತಿದ್ದುವಂತಿಲ್ಲ.
ಈಗಾಗಲೇ ರಾಜ್ಯ ಸರ್ಕಾರ ಜಿ.ಎಸ್.ಶಿವರುದ್ರಪ್ಪ, ಚನ್ನವೀರ ಕಣವಿ ನೇತೃತ್ವದ ಸಮಿತಿಗಳನ್ನು ರಚಿಸಿ ವರದಿಗಳನ್ನು ಸಿದ್ಧಪಡಿಸಿದೆ. ಸ್ವತಃ ಶ್ರೇಷ್ಠ ಕವಿಗಳಾದ ಅವರೇ ನಾಡಗೀತೆಯನ್ನು ಸಂಕ್ಷಿಪ್ತಗೊಳಿಸಿ ವರದಿ ಕೊಟ್ಟಿದ್ದಾರೆ. ಈಚೆಗೆ ಗಾಯಕ ಮತ್ತು ನಿವೃತ್ತ ಹಿರಿಯ ಅಧಿಕಾರಿ ವೈ.ಕೆ.ಮುದ್ದುಕೃಷ್ಣ ನಾಡಗೀತೆಯ ಸಂಕ್ಷಿಪ್ತೀಕರಣವನ್ನು ಬೆಂಬಲಿಸಿದ್ದಾರೆ. ಆ ಕಾರಣ ಯಾವುದೇ ಒತ್ತಡಕ್ಕೂ ಮಣಿಯದೆ ಸರ್ಕಾರ ಜಿ.ಎಸ್.ಶಿವರುದ್ರಪ್ಪ ಅಥವಾ ಚನ್ನವೀರ ಕಣವಿಯವರ ಶಿಫಾರಸುಗಳಲ್ಲಿ ಒಂದನ್ನು ಒಪ್ಪಿ, ಆ ಸಂಕ್ಷಿಪ್ತಗೊಂಡ ನಾಡಗೀತೆಗೆ ಸೂಕ್ತವಾದ ರಾಗಾ-ಲಾಪನೆ ರೂಪಿಸಿ ಅದನ್ನು ಅಧಿಕೃತವಾಗಿ ಘೋಷಿಸಬೇಕು.
ಕುವೆಂಪು ಅವರ ಕವನವನ್ನು ಇಡಿಯಾಗಿ ಪಠ್ಯಪುಸ್ತಕಗಳಲ್ಲಿ ಸೇರಿಸಿದರೆ ಅದನ್ನು ವಿಸ್ತೃತವಾಗಿ ಅಧ್ಯಾಪಕರು ವಿವರಿಸಿ ಅದರ ಸಂಪೂರ್ಣ ಧ್ವನ್ಯರ್ಥವನ್ನು ತಿಳಿಸುತ್ತಾರೆ. ‘ನಾಡಗೀತೆ’ ಹಾಡುವಾಗ ಆ ಎಲ್ಲ ವಿವರಗಳು ತಿಳಿದಿರಲೇ ಬೇಕೆಂದಿಲ್ಲ. ‘ನಾಡಗೀತೆ’ ಕರ್ನಾಟಕದ ಅಸ್ಮಿತೆಯ ಸಂಕೇತ. ನಮ್ಮಲ್ಲಿ ನಾಡ ಪ್ರೇಮವನ್ನು ಉಕ್ಕಿಸುವುದು, ಉದ್ದೀಪನಗೊಳಿಸುವುದು ಅದರ ಪ್ರಮುಖ ಆಶಯ. ಈ ದಿಸೆಯಲ್ಲಿ ಸರ್ಕಾರ ‘ನಾಡಗೀತೆ’ಯನ್ನು ಸಂಕ್ಷಿಪ್ತಗೊಳಿಸಬೇಕು. ಇದೇ ಅತ್ಯಂತ ಉಚಿತವಾದುದು.
(ಲೇಖಕರು ಕನ್ನಡದ ಹಿರಿಯ ಸಂಶೋಧಕರು)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.