ನರೇಂದ್ರ ಮೋದಿಗೂ ಚೀನಾದ ಅಧ್ಯಕ್ಷ ಶಿ ಜಿನ್ ಪಿಂಗ್ ಅವರಿಗೂ ಏನೋ ಹೋಲಿಕೆ ಇದೆ ಅನ್ನಿಸುತ್ತದೆ. ಇಲ್ಲಿ ಸರ್ದಾರ್ ಪಟೇಲ್ಗೆ ‘ನಮೋ ನಮೋ’ ಎನ್ನುತ್ತಿದ್ದಾರೆ ಮೋದಿ. ಚೀನಾದಲ್ಲಿ ಮಾವೊ ಝೆಡಾಂಗ್ಗೆ ‘ನಮೋ ನಮಃ’ ಎನ್ನುತ್ತಿದ್ದಾರೆ ಶಿ ಜಿನ್ ಪಿಂಗ್. ಮೊನ್ನೆ ಡಿಸೆಂಬರ್ 26 ರಂದು ಮಾವೊನ 120ನೇ ಹುಟ್ಟಿದ ಹಬ್ಬ ಆಚರಣೆ ಮಾಡಿದ ಚೀನಾದಲ್ಲಿ ಮಾವೊ ಅವರ ರತ್ನಖಚಿತವಾದ ಚಿನ್ನದ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗಿದೆ. ಗುಜರಾತಿನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರಿಗೆ ಕಂಚಿನ ಪ್ರತಿಮೆ. ಸರ್ದಾರ್ ಪ್ರತಿಮೆ ನಿಂತ ಭಂಗಿಯಲ್ಲಿ ಇದ್ದು ವಿಶ್ವದಲ್ಲೇ ಅತೀ ಎತ್ತರದ ಪ್ರತಿಮೆ ಎನ್ನಿಸಿಕೊಳ್ಳಲಿದೆ. ಮಾವೊನ ಪುತ್ಥಳಿ ಇಪ್ಪತ್ತು ಶಿಲ್ಪಿಗಳ ಎಂಟು ತಿಂಗಳ ಶ್ರಮ.
ಮಾವೊ ಪ್ರತಿಮೆ ಕುಳಿತುಕೊಂಡು ಇರುವ ಭಂಗಿಯಲ್ಲಿ ಇದ್ದು, ದೃಢ ಕಾಯದ ಮಾವೊ ಸಣಕಲಾಗಿ ಕಾಣಿಸುತ್ತಾರಂತೆ. ಎಷ್ಟಾದರೂ ಅಪ್ಪಟ ಚಿನ್ನದ ಪ್ರತಿಮೆಯಲ್ಲವೇ? ದೊಡ್ಡದಾದಷ್ಟೂ ಖರ್ಚು ಜಾಸ್ತಿ. ಅಂತಹ ಲೆಕ್ಕಾಚಾರವೂ ಇರಬೇಕು ಶಿ ಅವರ ಮನದಲ್ಲಿ! ಚೀನಿಯರಲ್ಲಿ ವ್ಯಾಪಾರೀ ಮನೋಭಾವ ಜಾಸ್ತಿಯಾಗುತ್ತಿದ್ದು, ಈಗಾಗಲೇ ಮಾವೊನ ಹುಟ್ಟೂರಿಗೆ ಬರುವ ಪ್ರವಾಸಿಗಳಿಂದ ವರ್ಷಕ್ಕೆ ಸುಮಾರು 40 ಲಕ್ಷ ಡಾಲರ್ (ಸುಮಾರು ₨ 25 ಕೋಟಿ) ವರಮಾನ ಇದೆಯಂತೆ.
ಇನ್ನು ಮಾವೊನ ರತ್ನಖಚಿತ ಚಿನ್ನದ ಪ್ರತಿಮೆ ನೋಡಲು ಬರುವವರೆಷ್ಟೋ? ಬೀಜಿಂಗ್ನ ಮಾವೊ ಮುಸ್ಸೋಲಿಯಂನಲ್ಲಿ ಮಾವೊನ ದೇಹ ಚಿರನಿದ್ರೆಯಲ್ಲಿದೆ. ಅಲ್ಲಿಗೆ ವಿದೇಶದ ಪ್ರವಾಸಿಗಳಲ್ಲದೆ ಚೀನಿ ಪ್ರವಾಸಿಗಳ ದಂಡೇ ಹರಿದುಬರುತ್ತದೆ. ಅದೇಕೋ ಏನೋ ಕಮ್ಯುನಿಸ್ಟ್ ದೇಶಗಳಿಗೆ ತಮ್ಮ ನಾಯಕರ ಅಂತ್ಯಕ್ರಿಯೆ ಮಾಡದೆ ಪ್ರದರ್ಶನಕ್ಕೆ ಇಡುವುದೇ ಇಷ್ಟ. ಮಾವೊ, ಲೆನಿನ್, ಹೋ ಚಿ ಮಿನ್ಹ್ ಅವರ ಉತ್ತರ ಕ್ರಿಯೆಗಳು ನಡೆಯುವುದಿಲ್ಲ. ಪಾಪದ ಕ್ಯಾಸ್ಟ್ರೋ ಅವರಿಗೆ ಏನು ಕಾದಿದೆಯೋ!
ಚೀನಾ-, ಭಾರತದ ನಡುವೆ ಹೋಲಿಕೆ ಬೇಡ ಅಂದರೂ ಏನೇನೋ ಹೋಲಿಕೆಗಳು ಜ್ಞಾಪಕಕ್ಕೆ ಬರುತ್ತವೆ. ಮೋದಿ, ಸರ್ದಾರ್ ಪಟೇಲರ ಪ್ರತಿಮೆ ಸ್ಥಾಪಿಸಲು ಒಂದಿಷ್ಟು ಕಬ್ಬಿಣ ಕೊಡಿ ಎಂಬ ಬೇಡಿಕೆಯನ್ನು ದೇಶದ ಜನರ ಮುಂದೆ ಇಟ್ಟಿದ್ದಾರೆ. ಇಂತಹ ಕಬ್ಬಿಣ ಚಂದಾ ಬೇಡುವ ಒಂದು ಕರೆಯನ್ನು ಚೀನಾದ ನಾಯಕರೂ ಒಮ್ಮೆ ಕೊಟ್ಟಿದ್ದರು. ಉಪಯೋಗಕ್ಕೆ ಬಾರದ ಹಳೆಯ ಕಬ್ಬಿಣದ ಹಂಡೆಗಳು, ಅಡುಗೆ ಪಾತ್ರೆಗಳು ಬೆಂಕಿಗೆ ಆಹುತಿಯಾದವು. ಹಳ್ಳಿ ಹಳ್ಳಿಗೂ ಸಂಪರ್ಕ ಕಲ್ಪಿಸಲು ಈ ಕರಗಿಸಿದ ಕಬ್ಬಿಣದಿಂದ ರೈಲು ರಸ್ತೆ ಮಾಡಲು ಶ್ರಮಿಸಿದ ದೇಶಪ್ರೇಮಿಗಳು ಚೀನಾದ ಕಮ್ಯುನಿಸ್ಟರು.
ಕ್ರಾಂತಿಕಾರಿ ಘೋಷಣೆಗಳಿಂದ ಪ್ರೇರಿತಗೊಂಡ ಮಾವೊನ ರೆಡ್ ಗಾರ್ಡ್ಸ್ ಎಂಬ ‘ಯುವ ಶಕ್ತಿ’ ಬೌದ್ಧಾಲಯಗಳನ್ನು ಒಡೆದುಹಾಕಿ ಅಲ್ಲಿದ್ದ ‘ಉಪಯೋಗಕ್ಕೆ ಬಾರದ’ ಬುದ್ಧನ ಪ್ರತಿಮೆಗಳನ್ನು ಕರಗಿಸಿ ರೈಲು ಹಳಿಗಳನ್ನು ಮಾಡಲೆಂದು ಕಬ್ಬಿಣ ಒದಗಿಸಿದ್ದು ಈಗ ಇತಿಹಾಸ. ಕೃಷಿ ಕೆಲಸಕ್ಕೆ ಬೇಕಾದ ಪರಿಕರಗಳನ್ನು ತಮ್ಮ ಹಿತ್ತಲಿನಲ್ಲಿಯೇ ಮಾಡಿಕೊಳ್ಳಬೇಕು ಎಂಬ ಕನಸು ಕಮ್ಯುನಿಸ್ಟ್ ದೇಶಭಕ್ತರಿಗೆ. ಇದಕ್ಕೆ ಬಲಿಯಾದ ಪ್ರಾಚೀನ ಕಾಲದ ಸಾಮಾನುಗಳು ಎಷ್ಟೋ! ಇವುಗಳ ಜೊತೆ ಕಳೆದುಹೋದ ಇತಿಹಾಸ ಎಷ್ಟೋ! ಇವಕ್ಕೆ ಬೆಲೆ ಕಟ್ಟುವ ಮನಸ್ಸಂತೂ ಯಾರಿಗೂ ಇರಲಿಲ್ಲ ಎಂಬುದು ಮಾತ್ರ ನಿಜ. ವಿಷಾದದ ಸಂಗತಿ ಎಂದರೆ ದೇಶ ಕಟ್ಟುವ ಹುಮ್ಮಸ್ಸು ಮಾವೊನನ್ನು ಎಲ್ಲೆಲ್ಲೋ ಕೊಂಡುಹೋಗಿ, ಲಿಯೋ ಶಾವೋ ಚಿ, ಮಾರ್ಷಲ್ ಝು ಡೆರಂತಹ ದೇಶಭಕ್ತರ ವಿರೋಧ ಕಟ್ಟಿಕೊಂಡು, ವಿರೋಧಿಗಳನ್ನು ಸದೆಬಡಿಯಲು ಹೆಂಡತಿಯ ಗುಲಾಮನಾಗಿ ಆದ ಅನಾಹುತಗಳು ಇನ್ನೆಷ್ಟೋ.
1966 ರಿಂದ 76ರ ತನಕ ಹದಿ ಹರೆಯದವರನ್ನು ಹುರಿದುಂಬಿಸಿ ದೇಶಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಹೋಗಿ ಆದ ಅತಿರೇಕಗಳನ್ನು ನಿಯಂತ್ರಣ ಮಾಡಲು ಆಗದೆ ತನ್ನ ಹೆಂಡತಿ ಜ್ಯಾಂಗ್ ಚಿಂಗ್ ಮತ್ತು ಸಹಚರರಿಗೆ ‘ಆ’ ಕೆಲಸ ವಹಿಸಿ ನುಣುಚಿಕೊಂಡ ಮಾವೊ ನೆನಪಾಗುತ್ತಾರೆ.
ತಂದೆ ತಾಯಿ, ಬಂಧು, ಬಳಗ ಎಲ್ಲವೂ ಕಮ್ಯುನಿಸ್ಟ್ ಪಕ್ಷವೇ ಎಂದು ನಂಬಿಸಿ, ಸ್ವಂತ ತಂದೆ ತಾಯಿಗಳ ಮೇಲೆಯೇ ಸುಳ್ಳು ದೂರುಗಳು ಕೊಡುವಂತೆ ಈ ಹದಿಹರೆಯದವರಿಗೆ ಪ್ರೋತ್ಸಾಹ ಕೊಟ್ಟು ಪೋಷಕರನ್ನು ಚಿತ್ರಹಿಂಸೆಗೆ ಗುರಿಮಾಡಿದ ಮಕ್ಕಳು ಎಷ್ಟೋ? ಆ ಸಾಂಸ್ಕೃತಿಕ ಕ್ರಾಂತಿ ಎಂಬ ಹುಚ್ಚು ಮುಗಿದ ಮೇಲೆ ತಾವು ಮಾಡಿದ ಕೆಲಸಗಳನ್ನು ಅರಗಿಸಿಕೊಳ್ಳಲಾಗದೆ ಮತಿಭ್ರಮಣೆ ಗೊಂಡವರನ್ನು ಚೀನಾದ ಈಶಾನ್ಯ ಪ್ರಾಂತದ ಜೀಲಿನ್ ನಗರದ ಮನೋರೋಗಿಗಳ ಆಸ್ಪತ್ರೆಯಲ್ಲಿ ಕಂಡಿದ್ದೇನೆ. ರಾಜಧಾನಿ ಬೀಜಿಂಗ್ನಿಂದ ಬಹುದೂರ ಇರುವ ಹಾಗೂ ಭೀಕರ ಚಳಿಯಿಂದ ಕೊರೆಯುವ, ಕಲ್ಲಿದ್ದಲ ದೂಳಿನಿಂದ ತುಂಬಿದ ಈಶಾನ್ಯ ರಾಜ್ಯಗಳಿಗೆ ಪಕ್ಷದ ನೀತಿಯನ್ನು ವಿರೋಧಿಸಿದ ಬುದ್ಧಿಜೀವಿಗಳನ್ನು ರೈತರ ಹೊಲಗಳಲ್ಲಿ ಕೆಲಸಮಾಡಿ ಎಂದು ಕಳಿಸುತಿದ್ದರಂತೆ. ನನಗೆ ಪರಿಚಯವಿದ್ದ ಒಬ್ಬ ಪ್ರೊಫೆಸರ್ಗೆ ಅದು ಹೇಗೋ ಅಗಾಥ ಕ್ರಿಸ್ಟಿಯ ಒಂದು ಪುಸ್ತಕವನ್ನು ಬಚ್ಚಿಟ್ಟುಕೊಳ್ಳಲು ಸಾಧ್ಯವಾಗಿತ್ತಂತೆ.
ಓದಲು ಬರೆಯಲು ಏನೂ ಸಿಗದಿದ್ದ ಅವರು ‘ಈ ಪುಸ್ತಕವನ್ನು ಕದ್ದು ಮುಚ್ಚಿ ಚೀನಿ ಭಾಷೆಗೆ ತರ್ಜುಮೆ ಮಾಡಿದೆ’ ಎಂದು ಹೇಳುತ್ತಿದ್ದರು. ನನಗೆ ಚೀನಿ ಭಾಷೆ ಕಲಿಸುವ ಮೂಲಕ ಆತ್ಮೀಯರಾಗಿದ್ದ ಒಬ್ಬ ಟೀಚರ್ ಹೀಗೆಯೇ ಜೀಲಿನ್ಗೆ ಬರಿಗಾಲಿನ ವೈದ್ಯೆಯಾಗಿ ಬಂದೆ ಎಂದು ಹೇಳುತ್ತಿದ್ದರು. ಲಾವೋ ಷ ನಂತಹ ಬರಹಗಾರ ಮಾವೊನ ರೆಡ್ ಗಾರ್ಡ್ ಉಪಟಳ ತಾಳಲಾರದೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಅದೇ ಕಮ್ಯುನಿಸ್ಟ್ ಪಕ್ಷ ಅವರ ಮನೆಯನ್ನು ವಸ್ತು ಸಂಗ್ರಹಾಲಯವಾಗಿ ಇಟ್ಟಿದೆ. ಆದ್ದರಿಂದ ಯಾವ ದೇಶವೇ ಆಗಲಿ, ಪಕ್ಷವೇ ಆಗಲಿ ಹದಿಹರೆಯದವರ ಭಾವನೆಗಳನ್ನು ಕೆರಳಿಸಿ ಅವರನ್ನು ಬಳಸಿಕೊಂಡು ದೇಶ ಕಟ್ಟುತ್ತೇವೆ ಎಂದರೆ ಅನಾಹುತಗಳು ಕಾದಿಟ್ಟ ಬುತ್ತಿ ಎಂದು ನಮ್ಮ ಚರಿತ್ರೆ ಸಾರಿ ಹೇಳುತ್ತದೆ.
ಇದನ್ನೇ ಕಾಂಬೋಡಿಯದ ಮಾವೊವಾದಿ ಪೋಲ್ ಪಾಟ್ ಮಾಡಿದ್ದು. 'ಹಿಟ್ಲರ್ ಯೂತ್’ ಮಾಡಿದ್ದು. ಕ್ರಾಂತಿಕಾರಿಗಳಿಗೆ ಅದೇಕೋ ಅನುಭವ ಇರುವವರಲ್ಲಿ ಅಪನಂಬಿಕೆ, ಹದಿಹರೆಯದವರನ್ನು ಅವರ ಉದ್ದೇಶಕ್ಕೆ ಬಳಸಿಕೊಳ್ಳುವ ಬಯಕೆ. ಹದಿಹರೆಯದವರಿಗೋ ವಯಸ್ಕರನ್ನು ಕಂಡರೆ ಈ ಮುದಿ ಗೂಬೆಗಳಿಂದಲೇ ವ್ಯವಸ್ಥೆ ಹೀಗಿದೆ ಎನ್ನುವ ತಾತ್ಸಾರದ ಮನೋಭಾವ. ನರೇಂದ್ರ ಮೋದಿ ಅವರನ್ನು ಬೆಂಬಲಿಸುವ ಯುವ ಜನತೆಯನ್ನು ನೋಡಿದರೆ ನಮ್ಮ ದೇಶಕ್ಕೆ ಏನು ಕಾದಿದೆಯೋ ಅನ್ನಿಸುತ್ತದೆ.
ಕಳೆದ ಡಿಸೆಂಬರ್ 26 ರಂದು ಮಾವೊನ 120ನೇ ಹುಟ್ಟಿದ ಹಬ್ಬವನ್ನು ಚೀನಾದ ಕಮ್ಯುನಿಸ್ಟ್ ಪಕ್ಷ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿ ಕೆಲವು ತಿಂಗಳುಗಳಿಂದಲೇ ತಯಾರಿ ನಡೆಸಿತ್ತು. ದೇಶದಾದ್ಯಂತ 1949ರ ಕ್ರಾಂತಿ ಗೀತೆಗಳನ್ನು ಹಾಡುವುದು, ಪುಸ್ತಕಗಳ ಪ್ರಕಟಣೆ, ಅಂಚೆ ಚೀಟಿ ಪ್ರಕಟಣೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಕೆಲ ಉದ್ಯಮಿಗಳು ವಯಸ್ಕರಿಗೆ ಊಟ ಹಂಚುವುದರ ಮೂಲಕ ಹಾಗೂ ಲಾಂಗ್ ಲೈಫ್ ನೂಡಲ್ಸ್ ತಿನ್ನುವ ಮೂಲಕವೂ ಇದನ್ನು ಆಚರಿಸಿದ್ದರು.
ನೂಡಲ್ಸ್ ಎಂದರೆ ಜ್ಞ್ನಾಪಕವಾಗುವ ವಿಷಯ. ಚೀನಾದಲ್ಲಿ ಕ್ರಾಂತಿಕಾರಿ ಸರ್ಕಾರ 1949ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಮಾಡಿದ ಒಂದು ಒಳ್ಳೆಯ ಕೆಲಸ ಅಂದರೆ ಪಾಕಶಾಸ್ತ್ರದ ಪುಸ್ತಕವನ್ನು ಅಚ್ಚುಹಾಕಿಸಿದ್ದು. ಕೆಲವೊಂದು ಅಡುಗೆಗಳು ಅಲ್ಲಿಯ ಅರಸರಿಗೆ ಸೀಮಿತವಾಗಿದ್ದು ಸಾಮಾನ್ಯ ಜನರು ಅಂತಹ ಅಡುಗೆಗಳನ್ನು ಮಾಡುವುದಕ್ಕೆ ನಿಷೇಧವಿತ್ತು. ಹೊಸ ಸರ್ಕಾರ ಅರಮನೆಯಲ್ಲಿ ಅಡುಗೆ ಮಾಡುತ್ತಿದ್ದ ಬಾಣಸಿಗರನ್ನು ಕರೆಸಿ ಪಾಕಗಳನ್ನು ಸಂಗ್ರಹಿಸಿ ಅಡುಗೆ ಪುಸ್ತಕ ಅಚ್ಚು ಹಾಕಿಸಿತ್ತು. ಅಂದರೆ ಕ್ರಾಂತಿಯ ಮೊದಲ ದಿನಗಳಲ್ಲಿ ಸಾಮಾನ್ಯ ಜನರ ಸುಖವೇ ಕಮ್ಯುನಿಸ್ಟ್ ಪಕ್ಷದ ಆಶಯವಾಗಿತ್ತು.
1949ರ ಕ್ರಾಂತಿಗೆ ಮೊದಲು ಅಲ್ಪಸಂಖ್ಯಾತ ಬುಡಕಟ್ಟಿನವರನ್ನು ತುಂಬಾ ಕೀಳಾಗಿ ನಡೆಸಿಕೊಳ್ಳಲಾಗುತ್ತಿತ್ತು. ಅವರ ಹೆಸರಿನ ಮುಂದೆ ಚೀನಿ ಭಾಷೆಯಲ್ಲಿ ಪ್ರಾಣಿಗಳ ಸಂಕೇತವಿರುತ್ತಿತ್ತು. ಪ್ರಾಣಿಗಳಿಗಿಂತ ಕಡೆ ಎಂಬುದನ್ನು ಗುರುತಿಸಲು ಸಹಕಾರಿಯಾಗಿದ್ದ ಈ ಸಂಕೇತವನ್ನು ತೆಗೆದು ಹಾಕಲಾಯಿತು. ಹೆಂಗಸರ ಪಾದಗಳನ್ನು ಕಟ್ಟಿ ಹಾಕಿ ಕೀಳಾಗಿ ನಡೆಸಿಕೊಳ್ಳುತ್ತಿದ್ದ ಅನಿಷ್ಟ ಪದ್ಧತಿಯನ್ನು ರದ್ದು ಮಾಡಲಾಯಿತು. ಯಾವ ಸರ್ಕಾರ ಎಲ್ಲಿಯೂ ಮಾಡಲಾಗದೆ ಇದ್ದಿದ್ದನ್ನು ಮಾಡಿ ತೋರಿಸಿದ್ದು ಮಾವೊ ಕಾಲದ ಚೀನಾದ ಸಾಧನೆ. ಚೀನಿಯರೇ ಹೇಳುವಂತೆ ಮಾವೊ ಮಾಡಿದ ತಪ್ಪುಗಳು ಶೇ 30, ಮಾಡಿದ ಸಾಧನೆ, ಒಳ್ಳೆಯ ಕೆಲಸಗಳು ಶೇ 70 ಎಂದು. ಮಾವೊನ ನೀತಿ ಹಾಗೂ ಸುಧಾರಣೆಗಳಿಂದ ಸುಮಾರು ಮೂರು ಕೋಟಿ ಜನ ಹಸಿವೆಯಿಂದ ಸಾವನ್ನಪ್ಪಿದ್ದು ಅದನ್ನು ಈಗ ಪಕ್ಷ ಒಪ್ಪಿಕೊಳ್ಳುತ್ತದೆ.
ಮಾವೊ ನಂತರ ಅಧಿಕಾರಕ್ಕೆ ಬಂದ ಡೆಂಗ್ ಶ್ಯಾವೋ ಪಿಂಗ್, ಮಾವೊನ ಸಿದ್ಧಾಂತವನ್ನು ಕಡೆಗಣಿಸಿ ಆರ್ಥಿಕ ಬದಲಾವಣೆಗೆ ಒತ್ತುಕೊಟ್ಟು ‘ಒಂದು ದೇಶ ಇಬ್ಬಗೆಯ ನೀತಿ’ ಎಂಬ ಸೂತ್ರವನ್ನು ಹುಟ್ಟು ಹಾಕಿದರು. ಈ ಇಬ್ಬಗೆಯ ನೀತಿಯ ಪ್ರಕಾರ ದೇಶದ ಕೆಲವೆಡೆಯಲ್ಲಿ ಕಮ್ಯುನಿಸ್ಟ್ ವ್ಯವಸ್ಥೆ, ಕೆಲವೆಡೆ ಬಂಡವಾಳಶಾಹಿ ವ್ಯವಸ್ಥೆ ಇರುವಂತಾಯಿತು. ಪಕ್ಷದ ಮೂಲ ಧ್ಯೇಯಗಳನ್ನು ಇಟ್ಟುಕೊಂಡು ಕಾಲ ಕ್ರಮೇಣ ಆರ್ಥಿಕ ವ್ಯವಸ್ಥೆಯನ್ನೇ ಬದಲಾಯಿಸಿದ ವಾಸ್ತವವಾದಿ ಡೆಂಗ್ ಯಾವ ಸಿದ್ಧಾಂತಕ್ಕೂ ಬದ್ಧರಾಗಿರದೆ ‘ಬೆಕ್ಕು ಕಪ್ಪಾದರೇನು, ಬಿಳಿಯಾದರೇನು, ಇಲಿ ಹಿಡಿದರೆ ಸಾಕು’ ಎಂದವರು. ಎಂಬತ್ತರ ದಶಕದಲ್ಲಿ ಮಾವೊ ಸಿದ್ಧಾಂತವನ್ನು ನಿರ್ಮೂಲನೆ ಹೇಗೆ ಮಾಡುವುದು ಎನ್ನುವುದೇ ಡೆಂಗ್ ಮುಂದೆ ಇದ್ದ ದೊಡ್ಡ ಸವಾಲು. ಚೀನಿ ಭಾಷೆಯಲ್ಲಿ ಮಾವೊ ಅಂದರೆ ಕೂದಲು ಎನ್ನುವ ಅರ್ಥವೂ ಇದೆ. ಹಾಗಾಗಿ ದ್ವಂದ್ವ ಅರ್ಥ ಕೊಡುವ ಹೇರ್ ರಿಮೂವರ್ ಕ್ರೀಮುಗಳ ಪೋಸ್ಟರುಗಳು ಕೂಡ ಕಾಣಿಸಿಕೊಳ್ಳುತ್ತಿದ್ದವಂತೆ.
ಮಾವೊನ ಅವಧಿಯಲ್ಲಿ ಆದ ಆಡಳಿತದ ದುರುಪಯೋಗ ಭಾರೀ ದುರಂತಗಳಿಗೆ ಎಡೆಮಾಡಿಕೊಟ್ಟಿತ್ತು. ಆದರೆ ಇಂದು ಕಮ್ಯುನಿಸ್ಟ್ ಪಕ್ಷ ಅದನ್ನು ಒಪ್ಪಿಕೊಂಡು ಇನ್ನು ಯಾವತ್ತೂ ಇಂತಹ ದುರಂತ ಸಾಧ್ಯವೇ ಇಲ್ಲ ಎಂದು ಹೇಳಿಕೊಳ್ಳುತ್ತದೆ. ಆದರೆ ಹೇಳಿದ್ದನ್ನು ಮಾಡಿ ತೋರಿಸಲಾಗುತ್ತಿಲ್ಲ. ಭ್ರಷ್ಟಾಚಾರದಲ್ಲಿ ಚೀನಾ ಭಾರತಕ್ಕಿಂತ ಏನೂ ಕಡಿಮೆಯಿಲ್ಲ. ಹಗರಣಗಳ ಬೀಡಾದ ನಮ್ಮ ದೇಶದಲ್ಲಿ ರಾಜಕಾರಣಿಗಳ, ಅಧಿಕಾರಿಗಳ ಭ್ರಷ್ಟಚಾರ ನೋಡಿದರೆ ಇವರನ್ನೂ ರೈತರ ಹೊಲಕ್ಕೆ ಕೆಲಸ ಮಾಡಲು ಕಳಿಸಿದರೆ ಚೆನ್ನಾಗಿರುತ್ತದೆ ಅನ್ನಿಸುತ್ತದೆ. ಆದರೆ ಅಂತಹ ವಿಪರೀತಕ್ಕೆ ಎಡೆಮಾಡಿಕೊಡುವ ಅನ್ನಿಸಿಕೆಗಳನ್ನು ನಮ್ಮಲ್ಲಿಯೇ ಅದುಮಿಡಬೇಕಾಗಿ ಬರುತ್ತದೆ.
ಕಾನೂನಿನ ಚೌಕಟ್ಟಿನಲ್ಲಿಯೇ ಕಾಲ ಕ್ರಮೇಣ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಈಗ ನಾವು ಲೋಕಪಾಲ ಮಸೂದೆಯನ್ನು ಜಾರಿಗೆ ತಂದಂತೆ. ಆದರೆ ಪ್ರಜಾಪ್ರಭುತ್ವ ಎಂದರೆ ಚೀನಿ ನಾಯಕರಿಗೆ ಏಕೋ ಅಲರ್ಜಿ. ಡೆಂಗ್ ಶ್ಯಾವೋ ಪಿಂಗ್ ಅವರ ಪ್ರಕಾರ ಇದರಿಂದ ಸಮಯ ವ್ಯರ್ಥ. ಮಾವೊನನ್ನು ಕಡೆಗಣಿಸಿದ್ದ ಕಮ್ಯುನಿಸ್ಟ್ ಪಕ್ಷ ಅದೇಕೆ ಈಗ ಮಾವೊನ ಜಯಂತಿಯನ್ನು ಅದ್ದೂರಿಯಿಂದ ಆಚರಣೆ ಮಾಡಿ ವ್ಯಕ್ತಿ ಪೂಜೆಗೆ ಅವಕಾಶ ಮಾಡಿಕೊಡುತ್ತಿದೆಯೋ ಅನ್ನುವುದೇ ಪ್ರಶ್ನೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.