ಸಮಕಾಲೀನ ಸಂದರ್ಭದಲ್ಲಿ ಕನ್ನಡಕ್ಕೆ ಅಗತ್ಯವಿರುವ ತಾಂತ್ರಿಕತೆಯ ಅರಿವು, ಪರಿಣತಿ ಇಲ್ಲದ ಸಂಸ್ಥೆಯೊಂದು ಅಭಿವೃದ್ಧಿಪಡಿಸಿದ ತಂತ್ರಾಂಶವನ್ನು ಬಳಸದೆಯೇ ‘ಬಳಕೆಗೆ ಯೋಗ್ಯ’ ಎಂದು ಶಿಫಾರಸು ಮಾಡಿದರೆ ಆಗುವುದಿನ್ನೇನು? ಅಂಧರಿಗಿದ್ದ ಅನುಕೂಲಗಳನ್ನೆಲ್ಲ ಸ್ಥಗಿತಗೊಳಿಸುವ ವಿಕೃತ ಬ್ರೈಲ್ ತಂತ್ರಾಂಶ; ಆಂಡ್ರಾಯ್ಡ್ ಗೊತ್ತಿರುವ ಪ್ರಾಥಮಿಕ ಹಂತದವರೂ ಕೆಲ ತಾಸುಗಳಲ್ಲಿ ರೂಪಿಸಬಹುದಾದ ಮೊಬೈಲ್ ಕೀಲಿಮಣೆ; ಒಮ್ಮೆ ವಕ್ಕರಿಸಿದರೆ ಎಂದೆಂದೂ ಬೇರೆ ಫಾಂಟ್ಗಳನ್ನು ಬಳಸಲು ಬಿಡದ ಕೀಲಿಮಣೆ ಎಂಜಿನ್ ಮತ್ತು ಪ್ರಸ್ತುತತೆ ಕಳೆದುಕೊಂಡಿರುವ ಯೂನಿಕೋಡ್ ಪರಿವರ್ತಕ!
ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯ ‘ಮಾರ್ಗದರ್ಶನ’ದ ಗೈರು: ಹಿರಿಯ ಸಾಹಿತಿಗಳಿರುವ ಈ ಸಮಿತಿಯಲ್ಲಿ ಕೆಲವು ತಜ್ಞರೂ ಇದ್ದಾರೆ. ತಂತ್ರಾಂಶಗಳು ಹೇಗಿರಬೇಕು ಎಂಬುದರಿಂದ ಹಿಡಿದು ತಂತ್ರಾಂಶ ತಯಾರಕರ ತಾಂತ್ರಿಕ ಅರ್ಹತೆಯನ್ನು ಗಮನಿಸುವವರೆಗೆ, ಅವರು ತಂತ್ರಾಂಶ ರೂಪಿಸುವ ವಿವಿಧ ಹಂತಗಳಲ್ಲಿ ಸಲಹೆ ನೀಡುವುದಕ್ಕೆ, ಆಮೇಲೆ ತಂತ್ರಾಂಶಗಳನ್ನು ದೃಢೀಕರಿಸುವುದಕ್ಕೆ, - ಹೀಗೆ ಎಲ್ಲ ಹಂತಗಳಲ್ಲೂ ಇದೊಂದೇ ಸಮಿತಿಯ ಅದೇ ತಜ್ಞರ ತಂಡ ಕೆಲಸ ಮಾಡಿದ್ದು ಸರಿಯೇ? ಈ ತಂತ್ರಾಂಶಗಳನ್ನು ಪರಿಶೀಲಿಸುವ ತಜ್ಞ, ಬಾಹ್ಯ ತಂಡವೇ ಈ ಪ್ರಕ್ರಿಯೆಯಲ್ಲಿ ಇರಲಿಲ್ಲ. ಇದು ಸಂಪೂರ್ಣ ಅವೈಜ್ಞಾನಿಕ ಮತ್ತು ಏಕಪಕ್ಷೀಯ ನಡೆ. ನಿಷ್ಪ್ರಯೋಜಕ, ಅಂಧವಿರೋಧಿ ಬ್ರೈಲ್ ತಂತ್ರಾಂಶ, ಮೈಸೂರಿನ ವಾಕ್ ಶ್ರವಣ ಸಂಸ್ಥೆ, ಅಧಿಕೃತವಾಗಿ ದೃಢೀಕರಿಸುವ ಮುನ್ನವೇ ಬಿಡುಗಡೆ ಆಗಿಹೋಗಿದೆ!
ಕನ್ನಡ ಸಮೂಹದ ಅರಿವಿನ ನಿರ್ಲಕ್ಷ್ಯ: ಕನ್ನಡ ತಂತ್ರಾಂಶದ ಕೆಲಸವನ್ನು ಸಮಿತಿಯೊಳಗಿರುವ ತಂತ್ರಜ್ಞರೇ ಮಾಡಬೇಕೆಂದು ಎಲ್ಲೂ ಯಾರೂ ಹೇಳಿರಲಿಲ್ಲ. ಆದರೆ ಸಮಿತಿಯಾಗಲೀ, ಸರ್ಕಾರವಾಗಲೀ ಯುವ ( ಉದಾ: ಲಿನಕ್ಸ್ ಗುಂಪು) ಮತ್ತು ಅನುಭವಿ ಕನ್ನಡ ತಂತ್ರಜ್ಞರ (ಉದಾ: ಕೆ.ಪಿ.ರಾವ್) ಸಮೂಹದ ನೆರವನ್ನು ಪಡೆಯಲು ಮುಂದಾಗಲೇ ಇಲ್ಲ. ಕ್ಷಣಕ್ಷಣಕ್ಕೂ ಬದಲಾಗುವ ತಂತ್ರಜ್ಞಾನವನ್ನು ಒಳಗೊಳ್ಳಲೆಂದೇ ಈಗ ಬಳಕೆಯಲ್ಲಿರುವ ‘ಕ್ರೌಡ್ಸೋರ್ಸಿಂಗ್’ ವಿಧಾನವನ್ನು ಎಲ್ಲರೂ ಜಾಣತನದಿಂದ ಮರೆತರು. ಸರ್ಕಾರಕ್ಕೆ ಇರುವ ತಾಂತ್ರಿಕ ತಜ್ಞತೆಯ ಕೊರತೆಯನ್ನು ಸಮಿತಿಯು ಸಮೂಹದ ಸಕ್ರಿಯ ಭಾಗಿತ್ವದಿಂದ ನೀಗಬಹುದಾಗಿತ್ತು. ಅದಾಗಲಿಲ್ಲ.
ಬಳಕೆಯ ಬೇಡಿಕೆ ಕಡೆಗಣನೆ: ಈಗ ಎಂತೆಂಥ ಹಳೆಯ ಫಾಂಟ್ಗಳಲ್ಲಿ ಇರುವ ಏನೆಲ್ಲ ದಾಖಲೆಗಳನ್ನು ಯೂನಿಕೋಡ್ಗೆ ಪರಿವರ್ತಿಸಬೇಕಾದ ಅಗತ್ಯವಿದೆ ಎಂಬ ಬೇಡಿಕೆಯ ಪ್ರಮಾಣವನ್ನು ಸಮಿತಿಯಾಗಲೀ ಸರ್ಕಾರವಾಗಲೀ ಅಂದಾಜಿಸಲು ಹೋಗಿಲ್ಲ. ಹೊಸ ಫಾಂಟ್ಗಳಿಗೆ ಹಲವು ಕನ್ನಡ ತಂತ್ರಾಂಶಗಳಿಂದ ಪರಿವರ್ತಕಗಳು ಸಿಗುತ್ತಿವೆ. ಈಗ ಬಿಡುಗಡೆಯಾದ ಕೀಲಿಮಣೆಗಿಂತ ಸುಧಾರಿತ ಕನ್ನಡ ಎಂಜಿನ್ಗಳೇ ಇವೆ. ಹೀಗಿರುವಾಗ ಈ ಸಾಧನಗಳನ್ನು ಮತ್ತೆ ರೂಪಿಸುವ ಅಗತ್ಯವೇ ಇರಲಿಲ್ಲ.
ಲಭ್ಯ ತಂತ್ರಜ್ಞಾನದ ಬಗ್ಗೆ ಗೊತ್ತಿದ್ದೂ ನಿರ್ಲಕ್ಷ್ಯ: ಮುದ್ರಿತ ಕನ್ನಡ ಪುಸ್ತಕಗಳನ್ನೇ ಯೂನಿಕೋಡ್ನಲ್ಲಿ ಓದುವ ತಂತ್ರಜ್ಞಾನವೇ (ಸಾಫ್ಟ್ ಓಸಿಆರ್) ಹೆಚ್ಚೂಕಡಿಮೆ ಬಂದಿರುವಾಗ ಫಾಂಟ್ ಆಧಾರಿತ ಪರಿವರ್ತಕದ ಅಗತ್ಯ ಏನಿತ್ತು? ಯೂನಿಕೋಡ್ ಅಕ್ಷರಗಳನ್ನೇ ಬ್ರೈಲ್ಗೆ ಪರಿವರ್ತಿಸುವ ಸಾಧನ ಇದ್ದಾಗ, ೭೦ರ ದಶಕದ ಪ್ರೆಸ್ಗೆ ಅಗತ್ಯವಾದ ಕೀಲಿಮಣೆ ಏಕೆ ಬೇಕಿತ್ತು? ಖಾಸಗಿ ತಂತ್ರಾಂಶ ತಯಾರಕರೇ ತಮ್ಮೆಲ್ಲ ಸಾಧನಗಳನ್ನು, ಫಾಂಟ್ಗಳನ್ನು ಸರ್ಕಾರದ ಮೂಲಕ ಕನ್ನಡಿಗರಿಗೆ ಉಚಿತವಾಗಿ ಕೊಡಲು ಮುಂದೆ ಬಂದರೂ ಸರ್ಕಾರ ಏಕೆ ಪರಿಗಣಿಸಲಿಲ್ಲ?
ಸಮಷ್ಟಿ ಪ್ರಜ್ಞೆಯ ಕೊರತೆ: ಈ ತಂತ್ರಾಂಶಗಳನ್ನೆಲ್ಲ ವಿಂಡೋಸ್ ೭ರಲ್ಲಿ ಮಾತ್ರ ಬಳಸಲೆಂದೇ ರೂಪಿಸಲಾಗಿದೆ. ಸರ್ಕಾರದ ಹೆಚ್ಚಿನಂಶ ಕಂಪ್ಯೂಟರ್ಗಳು ಹಳೆಯ ವಿಂಡೋಸ್ ಎಕ್ಸ್ಪಿಯಲ್ಲೇ ಕಾರ್ಯಾಚರಿಸುತ್ತಿವೆ. ಅಲ್ಲದೆ ಮುಕ್ತ ಆಪರೇಟಿಂಗ್ ಸೋರ್ಸ್ಗಳನ್ನು ಲೆಕ್ಕಕ್ಕೇ ಹಿಡಿದಿಲ್ಲ. ಇದು ಕಾರ್ಪೊರೇಟ್ ಪ್ರಭಾವದಿಂದ ಸಮಿತಿ ಮತ್ತು ಸರ್ಕಾರಗಳು ಹೊರತಾಗಿರಲಿಲ್ಲ ಎಂಬುದನ್ನು ಸೂಚಿಸುತ್ತದೆ.
ಅವೈಜ್ಞಾನಿಕ ಮಾರ್ಗ: ಬಿಡುಗಡೆಯಾದ ಎಲ್ಲ ತಂತ್ರಾಂಶಗಳೂ ಈಗಾಗಲೇ ಬಳಕೆಯಲ್ಲಿರುವ ಅಂಥದ್ದೇ ತಂತ್ರಾಂಶಗಳಿಗಿಂತ ಕಳಪೆಯಾಗಿವೆ ಎಂದರೆ ಇಡೀ ಪ್ರಕ್ರಿಯೆಯೇ ದೋಷಪೂರಿತ. ಅಲ್ಲದೆ ಫಾಂಟ್ನ ಸೌಂದರ್ಯದ ಬಗ್ಗೆ ಯಾವುದೇ ಅಧ್ಯಯನ, ದಾಖಲೀಕರಣವನ್ನೂ ಈ ಪ್ರಕ್ರಿಯೆಯಲ್ಲಿ ಕಂಡಿಲ್ಲ. ಬೇರೆ ಭಾಷೆಗಳಿಗೆ ಮಾದರಿಯಾಗುವಂತೆ ತಂತ್ರಾಂಶ ರಚನಾ ಪ್ರಕ್ರಿಯೆಗಳನ್ನು, ಮಾನದಂಡಗಳನ್ನು ರೂಪಿಸಬೇಕಾದ ನಾವು ಯಾವುದೇ ಪ್ರಕ್ರಿಯೆಯನ್ನೂ ದಾಖಲಿಸದೆ, ಮೊದಲು ತಂತ್ರಾಂಶವನ್ನು ಅನುಮೋದಿಸಿ ಆಮೇಲೆ ವ್ಯಾಲಿಡೇಷನ್ ಪ್ರಕ್ರಿಯೆ ವರದಿಯನ್ನು ಸಲ್ಲಿಸಿದ್ದೇವೆ! ಬೀಟಾ ವರ್ಶನ್ ಎಂಬ ಹೆಸರು ಕೊಟ್ಟು ಅದಕ್ಕಿಂತ ಹಿಂದಿನ ಆವೃತ್ತಿಗಳ ಬಗ್ಗೆ ಉಸಿರೆತ್ತುವುದಿಲ್ಲ! ತಂತ್ರಾಂಶ ಕುರಿತ ದೂರುಗಳನ್ನು ಇ-ಮೇಲ್ ಮೂಲಕ ಪಡೆಯುವವರೂ ಇದೇ ಸಂಸ್ಥೆ, ತಜ್ಞರೇ ಹೊರತು ಸರ್ಕಾರವಲ್ಲ! ಇಂಥ ಏಕಪಕ್ಷೀಯ ಅನುಮೋದನಾ ವ್ಯವಸ್ಥೆಯನ್ನು ಧಿಕ್ಕರಿಸಲೇಬೇಕಿದೆ.
ಕನ್ನಡ ತಂತ್ರಾಂಶಗಳನ್ನು ರೂಪಿಸಿದ ಪ್ರಕ್ರಿಯೆಯು ನಾವೆಲ್ಲರೂ ಅವಮಾನದಿಂದ ನಾಚಿಕೆಪಟ್ಟುಕೊಳ್ಳುವಷ್ಟು ಅವೈಜ್ಞಾನಿಕವಾಗಿದೆ; ಸಾರ್ವಜನಿಕ ನಿಧಿಯ ಬೇಜವಾಬ್ದಾರಿ ದುರ್ಬಳಕೆಯಾಗಿದೆ. ಮುಖ್ಯವಾಗಿ ಕನ್ನಡಿಗರ ಸಮೂಹದಲ್ಲೇ ಲಭ್ಯವಿರುವ, ವಿಶ್ವಸ್ತರದ ತಿಳಿವಳಿಕೆಗೆ ಮಾಡಿದ ಘೋರ ಅವಮಾನವೂ ಆಗಿದೆ
(ರಿವರ್ಥಾಟ್ಸ್ ಮೀಡಿಯಾ ಸಂಸ್ಥೆಯನ್ನು ನಡೆಸುತ್ತಿರುವ ಲೇಖಕರು ಮುಕ್ತ ಮಾಹಿತಿ ಆಂದೋಲನದಲ್ಲಿ ಸಕ್ರಿಯರು ಮತ್ತು ಡೆಸ್ಕ್ ಟಾಪ್ ತಂತ್ರಾಂಶಗಳಲ್ಲಿ ಪರಿಣತರು.)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.