ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲ್ಲ ಎಂದು ಕಾಂಗ್ರೆಸ್ ಹೇಳಲಿ: ಪಿಎಂ ಮೋದಿ ಸವಾಲು

Published 1 ಮೇ 2024, 14:26 IST
Last Updated 1 ಮೇ 2024, 14:26 IST
ಅಕ್ಷರ ಗಾತ್ರ

ಬನಸ್ಕಾಂತಾ (ಗುಜರಾತ್): ‘ಕಾಂಗ್ರೆಸ್ ಪಕ್ಷವು ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲು ಬಯಸಿದ್ದು, ಇದು ಸುಳ್ಳಾದರೆ ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟಗಳ ನಾಯಕರು ಲಿಖಿತ ರೂಪದಲ್ಲಿ ಹೇಳಿಕೆ ನೀಡಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ಸವಾಲೆಸೆದಿದ್ದಾರೆ.

ಬನಸ್ಕಾಂತಾ ಜಿಲ್ಲೆಯ ದೀಸಾ ಪಟ್ಟಣದಲ್ಲಿ ಬುಧವಾರ ನಡೆದ ಬಿಜೆಪಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭಾರತೀಯ ಜನತಾ ಪಾರ್ಟಿ ಅಧಿಕಾರದಲ್ಲಿ ಇರುವವರೆಗೂ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ನೀಡಲಾಗುತ್ತಿರುವ ಮೀಸಲಾತಿ ಸುರಕ್ಷಿತವಾಗಿರಲಿದೆ’ ಎಂದು ಭರವಸೆ ನೀಡಿದ್ದಾರೆ.

‘ಧರ್ಮದ ಆಧಾರದಲ್ಲಿ ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ ಎಂಬುದನ್ನು ‘ರಾಜಕುಮಾರ’ (ರಾಹುಲ್ ಗಾಂಧಿ) ಹಾಗೂ ಅವರ ಪಕ್ಷದ ಮುಖಂಡರು ಘೋಷಣೆ ಮಾಡಬೇಕು. ಸಂವಿಧಾನದೊಂದಿಗೆ ಆಟವಾಡುವುದಿಲ್ಲ ಮತ್ತು ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲಿ’ ಎಂದಿದ್ದಾರೆ.

‘ನಾನು ಎಲ್ಲಿಯವರೆಗೆ ಅಧಿಕಾರದಲ್ಲಿರುತ್ತೇನೋ ಅಲ್ಲಿಯವರೆಗೂ ಮೀಸಲಾತಿಯಲ್ಲಿ ಆಟವಾಡಲು ಯಾರಿಗೂ ಬಿಡುವುದಿಲ್ಲ. ಕಾಂಗ್ರೆಸ್ ಮತ್ತು ಅವರ ಜನರು ಕೇಳಿಸಿಕೊಳ್ಳಬೇಕು, ‘ಇದು ಮೋದಿ’. ಸಂವಿಧಾನದ ಹೆಸರಿನಲ್ಲಿ ಮೀಸಲಾತಿಯಲ್ಲಿ ಕೈ ಆಡಿಸಲು ಎಂದಿಗೂ ಬಿಡುವುದಿಲ್ಲ’ ಎಂದು ಪ್ರಧಾನಿ ಗುಡುಗಿದ್ದಾರೆ.

ನರೇಂದ್ರ ಮೋದಿ ಅವರ ತವರು ನೆಲವಾದ ಗುಜರಾತ್‌ನಲ್ಲಿ ಲೋಕಸಭಾ ಚುನಾವಣೆಯ 3ನೇ ಹಂತದ ಮತದಾನ ಮೇ 7ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT