ಕನ್ನಡದಲ್ಲಿ ಬಹು ಹಿಂದೆಯೇ ಸಂತ ಕಬೀರ್ ಬದುಕನ್ನು ಜನರಿಗೆ ವಿವರಿಸುವ ಒಂದು ನಾಟಕವೂ ಇತ್ತು. ಇದನ್ನು 1921ರಲ್ಲಿ ಬೆಳ್ಳಾವೆ ನರಹರಿಶಾಸ್ತ್ರಿಗಳು ರಚಿಸಿದ್ದರು.ಇದನ್ನು ಗುಬ್ಬಿ ವೀರಣ್ಣ ಅವರ ಕಂಪೆನಿ ಪ್ರಯೋಗಕ್ಕೆ ತಂದು ಜನಪ್ರಿಯಗೊಳಿಸಿತ್ತು. ಜ್ಞಾನ, ಭಕ್ತಿ ಮತ್ತು ವೈರಾಗ್ಯಗಳು ಮೂರೂ ಮೇಳೈಸಿರುವ ಸಂತ ಕಬೀರನ ಬದುಕು ಒಂದರ್ಥದಲ್ಲಿ ಸಾಹಿತ್ಯ ಕೃತಿಯೊಂದು ಒಳಗೊಂಡಿರಬೇಕಾದ ಎಲ್ಲಾ ರಸಗಳಿಗೂ ಅವಕಾಶ ಒದಗಿಸಿಕೊಡುತ್ತದೆ.
ಬೆಳ್ಳಾವೆ ನರಹರಿಶಾಸ್ತ್ರಿಗಳು ಕಬೀರನ ಜನಪ್ರಿಯ ವ್ಯಕ್ತಿತ್ವದಿಂದ ಆಚೆಗೆ ಹೋಗಿ ಅವನನ್ನು ವಿವರಿಸಲು ಪ್ರಯತ್ನಿಸುವುದು ಈ ನಾಟಕದ ವಿಶೇಷ. ಗುಬ್ಬಿ ವೀರಣ್ಣನವರ ತಂಡ ಇದನ್ನು ಜನರ ಬಳಿಗೆ ಕೊಂಡೊಯ್ದು ಯಶಸ್ವಿಯಾದುದರ ಹಿಂದೆಯೂ ಈ ಹೊಸ ಬಗೆಯ ಅರ್ಥೈಸುವಿಕೆ ಹೆಚ್ಚು ಮುಖ್ಯ ಪಾತ್ರವಹಿಸಿದೆ ಎನಿಸುತ್ತದೆ.
ಕಬೀರನ ಕುರಿತಂತೆ ಇರುವ ಎಲ್ಲಾ ಜನಪ್ರಿಯ ಕಥೆಗಳನ್ನು ಇಟ್ಟುಕೊಂಡೇ ಅವನ ಜ್ಞಾನದ ಭಾಗಕ್ಕೆ ಹೆಚ್ಚಿನ ಒತ್ತು ನೀಡಿ ಈ ನಾಟಕವನ್ನು ರಚಿಸಲಾಗಿದೆ. ಸಹಜವಾಗಿಯೇ ರಂಗ ಪ್ರಯೋಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದಿರುವುದರಿಂದ ಇದರಲ್ಲಿ ಕೆಲ ಮಟ್ಟಿಗೆ ನಾಟಕೀಯ ಅಂಶಗಳಿವೆ. ಈ ಪುಸ್ತಕ 1933ರಲ್ಲಿ ಮರು ಮುದ್ರಣಗೊಂಡಿತ್ತು.ಅದರ ಎಲೆಕ್ಟ್ರಾನಿಕ್ ಪ್ರತಿಯೊಂದು ಈಗ ಆರ್ಕೈವ್ ತಾಣದಲ್ಲಿ ಲಭ್ಯವಿದೆ. ಆಸಕ್ತರು ಇಲ್ಲಿರುವ ಕೊಂಡಿ ಬಳಿ ಅದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು: http://bit.ly/kalidasa