ಉದಯ್ಪುರ: ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೊ ರಾಜಸ್ತಾನದಲ್ಲಿ ಕೋಮುಗಲಭೆಯ ಆತಂಕ ಸೃಷ್ಟಿಸಿದೆ. ಮುನ್ನೆಚ್ಚೆರಿಕೆ ವಹಿಸಿರುವ ಪೊಲೀಸರು ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಿ ಆದೇಶ ಹೊರಡಿಸಿದೆ.
ಕೊಲೆ ಪ್ರಕರಣಕ್ಕೆ ‘ಲವ್ ಜಿಹಾದ್’ ಕಾರಣ ಎನ್ನಲಾಗಿರುವುದರಿಂದ ಕೋಮುಗಲಭೆಯ ಭೀತಿ ಮೂಡಿದ್ದು, ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ನಿರ್ಬಂಧಿಸಲಾಗಿದೆ. ಕೋಮುಭಾವನೆ ಕೆರಳಿಸುವಂತಹ ಸಂದೇಶಗಳನ್ನು ಹರಿಬಿಡುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ವಿಡಿಯೊ ಹಂಚಿಕೆಯಾಗುವುದನ್ನು ತಪ್ಪಿಸಲು ಉದಯ್ಪುರ ಜಿಲ್ಲೆ ವ್ಯಾಪ್ತಿಯಲ್ಲಿ ಅಂತರ್ಜಾಲ ಸೇವೆಯನ್ನು ನಿರ್ಬಂಧಿಸಲಾಗಿದೆ. ಬುಧವಾರ ರಾತ್ರಿ 8 ಗಂಟೆಯಿಂದ ಗುರುವಾರ ರಾತ್ರಿ 8ರ ವರೆಗೆ (24 ಗಂಟೆ ಕಾಲ) ಅಂತರ್ಜಾಲ ಸೇವೆ ಸ್ಥಗಿತಗೊಂಡಿರಲಿದೆ ಎಂದು ವಿಭಾಗೀಯ ಆಯುಕ್ತ ಭವಾನಿ ಸಿಂಗ್ ದೆಥಾ ಹೇಳಿದ್ದಾರೆ.
ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೊ ಸ್ಥಳೀಯರಿಗೆ ತಲುಪದಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ, ಶಂಭುನಾಥ್ ರಾಯ್ಘರ್ ಎಂಬಾತ ಮೊಹಮ್ಮದ್ ಅಫ್ರಾಜುಲ್ ಎಂಬುವವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ ಸೀಮೆಎಣ್ಣೆ ಸುರಿದು ಜೀವಂತವಾಗಿ ಸುಟ್ಟು ಹಾಕಿರುವುದು ಸೆರೆಯಾಗಿದೆ.