ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ ಲೇಖಕರ ಕೃತಿಗಳಿಗೆ ಕತ್ತರಿ

Last Updated 12 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಬೆಂಗಳೂರು: ಕರಾವಳಿ ಭಾಗದ ಲೇಖಕರಿಗೆ ನೀಡಿದ್ದ ಆದ್ಯತೆಗೆ ಕತ್ತರಿ; ಸಂಪಾದಿತ ಬರಹಗಳ ಬದಲಿಗೆ  ಲೇಖಕರ ಬರಹಗಳಿಗೆ ಮನ್ನಣೆ;  ರಾಜ್ಯದ ಎಲ್ಲ ಭಾಗಗಳ ಲೇಖಕರು ಹಾಗೂ ಕವಿಗಳಿಗೆ ಪ್ರಾತಿನಿಧ್ಯ...
 
1ರಿಂದ10ನೇ ತರಗತಿವರೆಗಿನ ಪಠ್ಯಪುಸ್ತಕಗಳ ಪರಿಷ್ಕರಣೆಯಲ್ಲಿ ಡಾ. ಬರಗೂರು ರಾಮಚಂದ್ರಪ್ಪ ನೇತೃತ್ವದ  ಸಮಿತಿ ಮಾಡಿರುವ ಪ್ರಮುಖ ಬದಲಾವಣೆಗಳಿವು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ,  ‘ಶೈಕ್ಷಣಿಕ ಮಟ್ಟ ಹೆಚ್ಚಿಸುವಂತಹ ಪಠ್ಯಕ್ರಮ ಇರಬೇಕೇ ವಿನಾ, ಲೇಖಕರಿಗೆ ಪ್ರಾದೇಶಿಕ ಪ್ರಾತಿನಿಧ್ಯ ಕೊಡುವ ಮೂಲಕ  ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡಬಾರದು’ ಎಂದು ಟೀಕಿಸಿದೆ.
 
ಕರಾವಳಿಗರ ಪ್ರಾತಿನಿಧ್ಯ ಇಳಿಕೆ: ಪಳಕಳ ಸೀತಾರಾಮ ಭಟ್ಟರ ಪದ್ಯ ಮತ್ತು ಪಾಠಗಳು ಎರಡು, ನಾಲ್ಕು ಮತ್ತು ಐದನೇ ತರಗತಿಯಲ್ಲಿದ್ದವು. ನಾಲ್ಕನೇ ತರಗತಿಯ ಪಾಠ ಮಾತ್ರ ಉಳಿಸಿಕೊಂಡು ಉಳಿದವುಗಳನ್ನು ತೆಗೆದುಹಾಕಲಾಗಿದೆ. 
 
ಕರಾವಳಿ ಕರ್ನಾಟಕಕ್ಕೆ ಪ್ರಾತಿನಿಧ್ಯ ಹೆಚ್ಚಾಗಿರುವ ಕಾರಣಕ್ಕೆ, ಮುಂಡಾಜೆ ರಾಮಚಂದ್ರ ಭಟ್ಟರ ‘ತಟ್ಟನೆ ಹೇಳಿರಿ’ ಎಂಬ ಮೂರನೇ ತರಗತಿ ಪದ್ಯ ಹಾಗೂ  ಪ್ರದೀಪ ಕುಮಾರ್ ಹೆಬ್ರಿ ಅವರ ‘ಸಂಜೆಯ ಸೊಬಗು’ ಎನ್ನುವ 4ನೇ ತರಗತಿ ಪದ್ಯ, ನರೇಂದ್ರ ರೈ ದೇರ್ಲ ಅವರ 7ನೇ ತರಗತಿಯ ‘ಹಳ್ಳಿ ಮನೆ ಆಶ್ರಯವಾಗಲಿ’  ಗದ್ಯ, 8ನೇ ತರಗತಿಯ ಬಿ.ಎಂ. ಮಹಾಬಲೇಶ್ವರ ಹೆಗ್ಡೆ ಅವರ ‘ನಮ್ಮ ಹೃದಯ ನಮ್ಮ ಕೈಯಲ್ಲಿ’  (ಅನುವಾದ ಮಹಾಬಲೇಶ್ವರ ರಾವ್) ಮತ್ತು ಇದೇ ತರಗತಿಯ ಪಾರಂಪಳ್ಳಿ ನರಸಿಂಹ ಐತಾಳ ಅವರ ‘ಭೂ ಕೈಲಾಸ’ ನಾಟಕಗಳನ್ನು ಬದಲು ಮಾಡಲಾಗಿದೆ.
 
ಇದಲ್ಲದೆ, 9ನೇ ತರಗತಿ ಪಠ್ಯದಿಂದ ಬಿ.ಎ. ಸನದಿ ಅವರ ‘ಪ್ರಜ್ಞಾಪತಿ’,  ಸಬೀಹಾ ಭೂಮಿಗೌಡ ಅವರ ‘ಮಹಿಳೆ ಮತ್ತು ಶಿಕ್ಷಣ’ ಪಾಠಗಳನ್ನೂ ತೆಗೆದು  ಪ್ರದೇಶವಾರು ಲೇಖಕರ ಗದ್ಯಗಳಿಗೆ ಆದ್ಯತೆ ನೀಡಲಾಗಿದೆ.
 
***
‘ಪಠ್ಯದಲ್ಲಿಯೂ ರಾಜಕಾರಣ’
ಪಠ್ಯಪುಸ್ತಕಗಳ ವಿಷಯದ ಮೇಲೆ ಚರ್ಚೆ ಆಗಬೇಕಿತ್ತು. ಆದರೆ, ಲೇಖಕರು, ಕವಿಗಳನ್ನು ಪ್ರದೇಶವಾರು, ಲಿಂಗವಾರು ಎಂದು ವಿಂಗಡಿಸಿ ವಿಷಯವಸ್ತು ಆಯ್ಕೆ ಮಾಡಿಕೊಳ್ಳುವ ಮೂಲಕ ರಾಜಕಾರಣ ಮಾಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಆರೋಪಿಸಿದ್ದಾರೆ.
 
**
ಪಠ್ಯ ಪುಸ್ತಕದಲ್ಲಿ ಬದಲಾವಣೆಗಳೇನು?
* 6ನೇ ತರಗತಿಯಲ್ಲಿ ಪಿ.ಶೇಷಾದ್ರಿ ಅವರ ‘ಬೇರು’ ಗದ್ಯ ಬಿಟ್ಟು ದೊಡ್ಡ ಹುಲ್ಲೂರು ರುಕ್ಕೋಜಿ ಅವರ ‘ಡಾ.ರಾಜಕುಮಾರ್’ ಗದ್ಯ ಸೇರ್ಪಡೆ.

* ದೈಹಿಕ ಶಿಕ್ಷಣ ಪಠ್ಯದಲ್ಲಿ ‘ಯೋಗಾಸನ’ ಬದಲು ‘ಯೋಗ’ ಪದ ಮಾತ್ರ ಬಳಕೆ ಮಾಡಲಾಗಿದೆ. ಯೋಗಾಸನ ಕೇವಲ ಆಸನಗಳಿಗೆ ಸೀಮಿತ. ಆದರೆ, ಯೋಗದಲ್ಲಿ ಆಸನ, ಪ್ರಾಣಾಯಾಮ, ಕ್ರಿಯೆ, ಧ್ಯಾನ ಎಲ್ಲವೂ ಒಳಗೊಳ್ಳುತ್ತವೆ ಎಂದು ಪರಿಷ್ಕರಣಾ ಸಮಿತಿ ಪ್ರತಿಪಾದಿಸಿದೆ.

* ತೃತೀಯ ಭಾಷಾ ಕನ್ನಡ ಪಠ್ಯ 6ನೇ ತರಗತಿಯಲ್ಲಿ ‘ಕಡಲೆಕಾಯಿ ಪರಿಷೆ’ ಸಂಪಾದಿತ ಗದ್ಯವನ್ನು ಬದಿಗೊತ್ತಿ ಡಾ.ಎಂ. ಸುಮಿತ್ರ ಅವರ ‘ಕರಗ ಉತ್ಸವ’ ಸೇರಿಸಲಾಗಿದೆ.

* 7ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ‘ಬಹಮನಿ ಆದಿಲ್‌ಷಾಹಿಗಳು’ ಪಾಠದಲ್ಲಿ ಬರೀದ್‌ ಷಾಹಿ, ಕುತುಬ್‌ ಷಾಹಿ, ಇಮಾದ್‌ ಮನೆತನಗಳನ್ನು ಪರಿಚಯಿಸಲಾಗಿದೆ.

* ಸಂಸ್ಕೃತ ಭಾಷೆ 6ನೇ ತರಗತಿ ಪಠ್ಯದಲ್ಲಿ ವರ್ಣಮಾಲಾ–6ರಲ್ಲಿದ್ದ ‘ಕಮಲ’ ಚಿತ್ರ ಬದಲಿಸಿ ‘ಕದಳಿ’ ಚಿತ್ರ ಹಾಕಲಾಗಿದೆ.

* 5ನೇ ತರಗತಿ ಕನ್ನಡ ಪಠ್ಯದ ವಚನಗಳ ಭಾಗದಲ್ಲಿ ಆಧುನಿಕ ವಚನಕಾರ ಸಿದ್ದಯ್ಯ ಪುರಾಣಿಕ ಅವರ ವಚನಗಳನ್ನು ತೆಗೆದು  ಆಯ್ದಕ್ಕಿ ಲಕ್ಕಮ್ಮ , ಬಸವಣ್ಣ, ಅಂಬಿಗರ ಚೌಡಯ್ಯ, ಅಕ್ಕಮಹಾದೇವಿ ಅವರ ವಚನಗಳನ್ನು ಸೇರಿಸಲಾಗಿದೆ.

* 9ನೇ ತರಗತಿ ಕನ್ನಡ ಪಠ್ಯದಿಂದ ಕಾರ್ಕಡ ರಾಮಚಂದ್ರ ಉಡುಪ ಅವರ ‘ಭೂಮಿಗಿಳಿದ ಬೃಹಸ್ಪತಿ’ ಬಿಟ್ಟು ಕೆ.ನೀಲಾ ಅವರ ‘ರಂಜಾನ್‌ ಸುರಕುಂಬಾ’  ಪಠ್ಯ ಸೇರಿಸಲಾಗಿದೆ.

* ದ್ವಿತೀಯ ಭಾಷಾ ಕನ್ನಡ 9ನೇ ತರಗತಿ ಪಠ್ಯದಲ್ಲಿ ಡಾ.ಸಿದ್ದಲಿಂಗಯ್ಯ ಅವರ ‘ಮಹಾತ್ಮ ಗಾಂಧಿ ರಸ್ತೆಯ ಹಾಸ್ಟೆಲ್’ ಪಠ್ಯ ತೆಗೆದು ಡಾ.ದಸ್ತಗೀರ್‌ ಅಲ್ಲೀಬಾಯ್ ಅವರ ‘ಉರುಸ್‌ಗಳಲ್ಲಿ ಭಾವೈಕ್ಯತೆ’ ಸೇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT