ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇವು ಹಗರಣದ ಮೂರನೇ ಪ್ರಕರಣ: ಲಾಲು ಪ್ರಸಾದ್‌ ದೋಷಿ, 5 ವರ್ಷ ಸಜೆ

Last Updated 24 ಜನವರಿ 2018, 9:35 IST
ಅಕ್ಷರ ಗಾತ್ರ

ರಾಂಚಿ: ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲೂ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ತಪ್ಪಿತಸ್ಥ ಎಂದು ಬುಧವಾರ ಸಿಬಿಐ ವಿಶೇಷ ನ್ಯಾಯಾಲಯ ಘೋಷಿಸಿದೆ.

ಡಿ.23ರಂದು ಸಿಬಿಐ ನ್ಯಾಯಾಲಯ ಮೇವು ಹಗರಣದ ಎರಡನೇ ಪ್ರಕರಣದ ತೀರ್ಪು ಪ್ರಕಟಿಸಿತ್ತು. ಆ ಪ್ರಕರಣದಲ್ಲಿ ದೋಷಮುಕ್ತರಾಗಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ್‌ ಮಿಶ್ರಾ ಅವರನ್ನು ಮೂರನೇ ಪ್ರಕರಣದಲ್ಲಿ ನ್ಯಾಯಾಲಯ ದೋಷಿ ಎಂದಿದೆ.

ಚಾಯಿಬಾಸಾ ಖಜಾನೆಯಲ್ಲಿ ₹33.67 ಕೋಟಿ ಮೊತ್ತದ ವಂಚನೆ ಪ್ರಕರಣದ ಸಂಬಂಧ ಇಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದ್ದು, 5 ವರ್ಷ ಶಿಕ್ಷೆ ಪ್ರಕಟಿಸಿದೆ.

‘ಲಾಲು ಪ್ರಸಾದ್‌ ಅವರ ವಿರುದ್ಧ ಬಿಜೆಪಿ, ಆರ್‌ಎಸ್‌ಎಸ್‌ ಹಾಗೂ ಮುಖ್ಯವಾಗಿ ನಿತೀಶ್‌ ಕುಮಾರ್ ಹೂಡಿರುವ ಪಿತೂರಿ ಜನರಿಗೆ ತಿಳಿದಿದೆ. ಮೇವು ಹಗರಣಕ್ಕೆ ಸಂಬಂಧಿಸಿದ ತೀರ್ಪುಗಳ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇವೆ’ ಎಂದು ಲಾಲು ಪುತ್ರ ತೇಜಸ್ವಿ ಯಾದವ್‌ ಹೇಳಿಕೆ ನೀಡಿದ್ದಾರೆ.

ಲಾಲು ಪ್ರಸಾದ್‌ ವಿರುದ್ಧ ಇರುವ ಆರು ಪ್ರಕರಣಗಳ ಪೈಕಿ ಒಟ್ಟು ಮೂರು  ಪ್ರಕರಣಗಳಲ್ಲಿ ಅವರು ದೋಷಿ ಎಂದು ಘೋಷಣೆಯಾಗಿದೆ. 2013ರಲ್ಲಿ ಐದು ವರ್ಷ ಹಾಗೂ 2017ರಲ್ಲಿ ಮೂರೂವರೆ ವರ್ಷ ಜೈಲು ಶಿಕ್ಷೆಯಾಗಿದೆ.

ಮೇವು ಹಗರಣ: ಅಂದಿನಿಂದ ಇಂದಿನವರೆಗೆ

ಜನವರಿ, 1996: ಚಾಯಿಬಾಸಾ ಜಿಲ್ಲಾಧಿಕಾರಿಯಾಗಿದ್ದ ಅಮಿತ್‌ ಖರೆ ಅವರು ಪಶುಸಂಗೋಪನಾ ಇಲಾಖೆಯಲ್ಲಿ ತಪಾಸಣೆ ನಡೆಸಿದಾಗ ಮೇವು ಹಗರಣ ಬಯಲಿಗೆ. ಶೋಧಕಾರ್ಯದ ವೇಳೆ ವಶಪಡಿಸಿಕೊಳ್ಳಲಾಗಿದ್ದ ದಾಖಲೆಗಳು ಹಗರಣ ನಡೆದಿರುವ ಬಗ್ಗೆ ಪುರಾವೆ ಒದಗಿಸಿತ್ತು

ಮಾರ್ಚ್‌, 1996: ಮೇವು ಹಗರಣದ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿದ ಪಟ್ನಾ ಹೈಕೋರ್ಟ್‌. ತೀರ್ಪಿನ ಅನುಸಾರ ಚಾಯಿಬಾಸಾ (ಅವಿಭಜಿತ ಬಿಹಾರ) ಖಜಾನೆಯಿಂದ ಹಣ ಪಡೆದ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲು‌

ಜೂನ್‌, 1997: ಆರೋಪಪಟ್ಟಿ ಸಲ್ಲಿಸಿದ ಸಿಬಿಐ. ಆರೋಪಿಗಳಲ್ಲಿ ಒಬ್ಬರಾಗಿ ಲಾಲು ಪ್ರಸಾದ್‌ ಹೆಸರು ದಾಖಲು

ಜುಲೈ, 1997: ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಲಾಲು. ಪತ್ನಿ ರಾಬ್ಡಿದೇವಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ. ಸಿಬಿಐ ನ್ಯಾಯಾಲಯಕ್ಕೆ ಶರಣಾದ ಲಾಲು. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನ್ಯಾಯಾಲಯ

ಏಪ್ರಿಲ್‌, 2000: ರಾಬ್ಡಿ ದೇವಿ ಕೂಡ ಪ್ರಕರಣದ ಆರೋಪಿಗಳಲ್ಲಿ ಒಬ್ಬರು ಎಂದು ಹೆಸರಿಸಲಾಯಿತು. ಆದರೆ, ಅವರಿಗೆ ಜಾಮೀನು ಮಂಜೂರು

ಅಕ್ಟೋಬರ್‌, 2001: ರಾಜ್ಯ ವಿಭಜನೆ ನಂತರ ಜಾರ್ಖಂಡ್‌ ಹೈಕೋರ್ಟ್‌ಗೆ ಪ್ರಕರಣ ವರ್ಗಾಯಿಸಿದ ಸುಪ್ರೀಂ ಕೋರ್ಟ್‌

ಫೆಬ್ರುವರಿ, 2002: ಜಾರ್ಖಂಡ್‌ನ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆ ಆರಂಭ

ಡಿಸೆಂಬರ್‌, 2006: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಪ್ರಕರಣದಲ್ಲಿ ಲಾಲು ಮತ್ತು ರಾಬ್ಡಿದೇವಿ ಅವರನ್ನು ಖುಲಾಸೆ ಮಾಡಿದ ಪಟ್ನಾದ ಅಧೀನ ನ್ಯಾಯಾಲಯ

ಮಾರ್ಚ್‌, 2012: ಲಾಲು ಮತ್ತು ಪ್ರಕರಣದ ಮತ್ತೊಬ್ಬ ಆರೋಪಿ ಜಗನ್ನಾಥ್‌ ಮಿಶ್ರಾ ವಿರುದ್ಧ ದೋಷಾರೋಪ ನಿಗದಿ

ಸೆಪ್ಟೆಂಬರ್‌ 30, 2013: ಮೇವು ಹಗರಣದ ಮತ್ತೊಂದು ಪ್ರಕರಣದಲ್ಲಿ (ಆರ್‌ಸಿ 20ಎ/96) ಲಾಲು, ಮಿಶ್ರಾ ಮತ್ತು ಇತರ 45 ಮಂದಿ ತಪ್ಪಿತಸ್ಥರು ಎಂದು ಸಾಬೀತು. ರಾಂಚಿ ಜೈಲಿಗೆ ಲಾಲು. ಲೋಕಸಭೆಯಿಂದ ಅನರ್ಹಗೊಂಡ ಆರ್‌ಜೆಡಿ ಮುಖ್ಯಸ್ಥ. ಚುನಾವಣೆ ಸ್ಪರ್ಧಿಸುವುದಕ್ಕೂ ನಿರ್ಬಂಧ

ಡಿಸೆಂಬರ್‌, 2013: ಲಾಲುಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್‌

ಮೇ, 2017: ಸುಪ್ರೀಂ ಕೋರ್ಟ್‌ನ ಮೇ 8ರ ತೀರ್ಪಿನ ನಂತರ ವಿಚಾರಣೆ ಪುನಾರರಂಭ. ದೇವಗಡ ಖಜಾನೆಯಿಂದ ಹಣ ಪಡೆದ ಪ್ರಕರಣಕ್ಕೆ (ಆರ್‌ಸಿ 64ಎ/96) ಸಂಬಂಧಿಸಿದಂತೆ ಪ್ರತ್ಯೇಕ ವಿಚಾರಣೆ ಆರಂಭಿಸುವಂತೆ ಅಧೀನ ನ್ಯಾಯಾಲಯಕ್ಕೆ ಸೂಚಿಸಿದ ‘ಸುಪ್ರೀಂ’. ಒಂಬತ್ತು ತಿಂಗಳೊಳಗೆ ವಿಚಾರಣೆ ಮುಕ್ತಾಯಗೊಳಿಸಲು ನಿರ್ದೇಶನ

ಡಿಸೆಂಬರ್‌ 23, 2017: ಲಾಲು ಪ್ರಸಾದ್‌ ಮತ್ತು ಇತರ 15 ಆರೋಪಿಗಳು ಅಪರಾಧಿಗಳು ಎಂದು ಘೋಷಿಸಿದ ಸಿಬಿಐ ವಿಶೇಷ ನ್ಯಾಯಾಲಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT