ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ತೆರಿಗೆ ಭಯೋತ್ಪಾದನೆ: ಐಟಿ ಇಲಾಖೆ ನೋಟಿಸ್‌ ವಿರುದ್ಧ ಕಾಂಗ್ರೆಸ್ ಕಿಡಿ

Published 29 ಮಾರ್ಚ್ 2024, 8:52 IST
Last Updated 29 ಮಾರ್ಚ್ 2024, 8:52 IST
ಅಕ್ಷರ ಗಾತ್ರ

ನವದೆಹಲಿ: ಆದಾಯ ತೆರಿಗೆ (ಐ.ಟಿ) ಇಲಾಖೆಯಿಂದ ಹೊಸದಾಗಿ ₹ 1,823 ಕೋಟಿ ಮೊತ್ತದ ನೋಟಿಸ್‌ ಬಂದಿದೆ ಎಂದು ಹೇಳಿರುವ ಕಾಂಗ್ರೆಸ್‌, ಲೋಕಸಭೆ ಚುನಾವಣೆ ಹೊತ್ತಿನಲ್ಲಿ ವಿರೋಧ ಪಕ್ಷಗಳನ್ನು ಹಣಿಯಲು ಬಿಜೆಪಿಯು ತೆರಿಗೆ ಭಯೋತ್ಪಾದನೆ ನಡೆಸುತ್ತಿದೆ ಎಂದು ಕಿಡಿಕಾರಿದೆ.

ಎಐಸಿಸಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, ಖಜಾಂಜಿ ಅಜಯ್‌ ಮಾಕೆನ್‌ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯು ಐಟಿ ಕಾನೂನುಗಳನ್ನು ಗಂಭೀರವಾಗಿ ಉಲ್ಲಂಘಿಸುತ್ತಿದೆ. ಅದಕ್ಕಾಗಿ ಇಲಾಖೆಯು ₹ 4,600 ಕೋಟಿಗಿಂತಲೂ ಹೆಚ್ಚಿನ ಡಿಮ್ಯಾಂಡ್‌ ನೋಟಿಸ್‌ ಅನ್ನು ಆ ಪಕ್ಷಕ್ಕೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಜೈರಾಮ್‌ ರಮೇಶ್‌, ಬಿಜೆಪಿಯು‌ 'ಚುನಾವಣಾ ಬಾಂಡ್‌ ಹಗರಣ'ದ ಮೂಲಕ ₹ 8,200 ಕೋಟಿ ಸಂಗ್ರಹಿಸಿದೆ. ಅದಕ್ಕಾಗಿ, ಪ್ರೀ ಪೇಯ್ಡ್‌ (ಪೂರ್ವ ಪಾವತಿ), ಪೋಸ್ಟ್‌ ಪೇಯ್ಡ್‌ (ನಂತರ ಪಾವತಿ), ಪೋಸ್ಟ್‌ ರೇಡ್‌ ಪೇಯ್ಡ್‌ (ದಾಳಿ ನಂತರ ಪಾವತಿ) ಹಾಗೂ ನಕಲಿ ಕಂಪನಿಗಳ ಮಾರ್ಗವನ್ನು ಅನುಸರಿಸಿದೆ ಎಂದು ಕಿಡಿಕಾರಿದ್ದಾರೆ.

ಮತ್ತೊಂದೆಡೆ, ತೆರಿಗೆ ಭಯೋತ್ಪಾದನೆಯನ್ನೂ ನಡೆಸುತ್ತಿದೆ ಎಂದು ಟೀಕಿಸಿದ್ದಾರೆ.

'ಕಾಂಗ್ರೆಸ್‌ ಪಕ್ಷವನ್ನು ಆರ್ಥಿಕವಾಗಿ ಕುಗ್ಗಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಆದರೆ, ಅದಕ್ಕೆಲ್ಲ ನಾವು ಬಗ್ಗುವುದಿಲ್ಲ. ಇಂತಹ ನೋಟಿಸ್‌ಗಳಿಗೆ ಹೆದರುವುದಿಲ್ಲ. ಮತ್ತಷ್ಟು ಉತ್ಸುಕರಾಗಿ ಮುನ್ನುಗ್ಗುತ್ತೇವೆ ಹಾಗೂ ಚುನಾವಣೆಯಲ್ಲಿ ಹೋರಾಡುತ್ತೇವೆ' ಎಂದಿದ್ದಾರೆ.

ಕಾಂಗ್ರೆಸ್‌ ಹಾಗೂ ಅದೇರೀತಿಯ ಧೋರಣೆ ಹೊಂದಿರುವ ವಿರೋಧ ಪಕ್ಷಗಳನ್ನು ಗುರಿಯಾಗಿಸಿ ಐ.ಟಿ ಇಲಾಖೆ ದಾಳಿ ನಡೆಸುತ್ತಿದೆ ಎಂದು ಅಜಯ್‌ ಮಾಕೇನ್ ದೂರಿದ್ದಾರೆ.‌

ಐ.ಟಿ ಇಲಾಖೆಯು, ತೆರಿಗೆ ಪಾವತಿಗೆ ಸಂಬಂಧಿಸಿದ ಹಳೆಯ, ಆಧಾರರಹಿತ ಪ್ರಕರಣಗಳನ್ನು ಮುನ್ನೆಲೆಗೆ ತರುವ ಮೂಲಕ, ಕಾಂಗ್ರೆಸ್‌ ವಿರುದ್ಧ ಪೂರ್ವಯೋಜಿತ, ಕುಟಿಲ ತಂತ್ರಗಳನ್ನು ಬಳಸುತ್ತಿದೆ. ಈ ಸಂಬಂಧ ಶೀಘ್ರವೇ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುತ್ತೇವೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್‌ನ ಚುನಾವಣಾ ವೆಚ್ಚಕ್ಕೆ ತಡೆ ಒಡ್ಡಲು, ಹಣಕಾಸು ಹೊಂದಿಸಿಕೊಳ್ಳುವಲ್ಲಿ ವಿಳಂಬ ಆಗುವಂತೆ ಮಾಡಲು ಮತ್ತು ಒಟ್ಟಾರೆಯಾಗಿ ನಿಷ್ಕ್ರಿಯಗೊಳಿಸಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ದೂರಿದರು. 

‘ದಿವಂಗತ ಸೀತಾರಾಮ್‌ ಕೇಸರಿ ಅವರು ಪಕ್ಷದ ಖಜಾಂಚಿಯಾಗಿದ್ದ 1993–94ರ ಆರ್ಥಿಕ ವರ್ಷಗಳನ್ನೂ ಅಂದಾಜಿಸಿರುವುದು ನಿಜಕ್ಕೂ ಆಘಾತಕಾರಿ. ಎಂಟು ವರ್ಷಗಳ ಪೈಕಿ ನಾಲ್ಕು ವರ್ಷಗಳಿಗೆ ಸಂಬಂಧಿಸಿದ ಮೌಲ್ಯಮಾಪನ ಆದೇಶಗಳೇ ಇಲ್ಲದೆ ಐ.ಟಿ ಇಲಾಖೆಯು ಬೇಡಿಕೆ ಆದೇಶಗಳನ್ನು ಹೊರಡಿಸಿದೆ. ಇದು ಭಾರತದ ತೆರಿಗೆಯ ಇತಿಹಾಸದಲ್ಲಿಯೇ ಕಂಡರಿಯದ್ದಾಗಿದೆ’ ಎಂದರು.

ಐ.ಟಿ ಇಲಾಖೆ ನಡೆಸಿದ ದಾಳಿ ವೇಳೆಯಲ್ಲಿ ದೊರೆತಿದೆ ಎನ್ನಲಾದ ಡೈರಿಗಳನ್ನು ಆಧರಿಸಿ ಈ ಆದೇಶಗಳನ್ನು ಹೊರಡಿಸಲಾಗಿದೆ. ದಾಳಿಗೊಳಗಾದ ಹಲವರು ಐ.ಟಿ ಇಲಾಖೆಯ ದೋಷಪೂರಿತ ಶೋಧ ಪ್ರಕ್ರಿಯೆಗೆ ಸಂಬಂಧಿಸಿದಂತೆ ನ್ಯಾಯಾಲಯಗಳಿಂದ ತಡೆಯಾಜ್ಞೆಗಳನ್ನು ತಂದಿದ್ದಾರೆ ಎಂದೂ ಮಾಕನ್‌ ವಿವರಿಸಿದರು.

‘ಇತರ ಡೈರಿಗಳನ್ನು ಏಕೆ ಗಮನಿಸಿಲ್ಲ’:

‘ಕಾಂಗ್ರೆಸ್‌ ವಿರುದ್ಧವೇ ಏಕೆ ಈ ರೀತಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಬಿಜೆಪಿ ಅಥವಾ ಅದರ ಮೈತ್ರಿ ಪಕ್ಷಗಳ ವಿರುದ್ಧ ಐ.ಟಿ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ಐ.ಟಿ ಇಲಾಖೆಯು ಯಡಿಯೂರಪ್ಪ ಡೈರಿ, ಜೈನ್‌ ಡೈರಿ, ಸಹಾರಾ ಡೈರಿ, ಬಿರ್ಲಾ ಡೈರಿ, ಬಂಗಾರು ಲಕ್ಷ್ಮಣ್‌ ಅಪರಾಧಗಳ ಬಗ್ಗೆ ಏಕೆ ಗಮನಹರಿಸಿಲ್ಲ’ ಎಂದು ಅವರು ಕೇಳಿದರು. 

‘ಆಯೋಗ ಮೂಕಪ್ರೇಕ್ಷಕ’:

‘ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಭರವಸೆ ನೀಡುವ ಚುನಾವಣಾ ಆಯೋಗ ಏಕೆ ಮೂಕ ಪ್ರೇಕ್ಷಕನಂತಾಗಿದೆ, 2024ರ ಲೋಕಸಭೆ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತ ಎಂದು ಕರೆಯುವುದಾದರೂ ಹೇಗೆ’ ಎಂದು ಅವರು ಪ್ರಶ್ನಿಸಿದರು.

ಕೇಂದ್ರ ಸರ್ಕಾರದ ‘ತೆರಿಗೆ ಭಯೋತ್ಪಾದನೆ’ ಖಂಡಿಸಿ ದೇಶದಾದ್ಯಂತ ಶನಿವಾರ ಮತ್ತು ಭಾನುವಾರ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ ನಡೆಸಲಿದೆ
–ಕೆ.ಸಿ. ವೇಣುಗೋಪಾಲ್‌, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂಘಟನೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT