ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತರು

Last Updated 1 ಆಗಸ್ಟ್ 2013, 16:10 IST
ಅಕ್ಷರ ಗಾತ್ರ

ಇಟಾ ಇದಾ ಸಾರಿ
  ಟಾ ಎಂದರೇ ತಟ್ಟನೆ ನೆನಪಾಗುವುದು ಶೋಷಣೆಯ ವಿಮೋಚನೆ. ಹೋರಾಟವನ್ನೇ ಪ್ರಬಲ ಅಸ್ತ್ರವಾಗಿಸಿಕೊಂಡಿರುವ ಇಟಾ ಇಂಡೋನೇಷ್ಯಾದಲ್ಲಿ ದುರ್ಬಲ ವರ್ಗದವರ ಆರಾಧ್ಯ ದೈವವಾಗಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.

ಮಹಿಳೆಯರು, ಮಕ್ಕಳು ಮತ್ತು ಕಾರ್ಮಿಕರ ಶೋಷಣೆಯ ವಿರುದ್ಧ ದನಿ ಎತ್ತಿ ಸರ್ಕಾರ ಮತ್ತು ಕಾರ್ಪೊರೇಟ್ ಸಂಸ್ಥೆಗಳ ವಿರೋಧ ಕಟ್ಟಿಕೊಂಡು ಐದು ವರ್ಷ ಜೈಲು ವಾಸ ಅನುಭವಿಸಿ ಮತ್ತೆ ಹೋರಾಟದಲ್ಲಿ ಸಕ್ರಿಯರಾಗಿರುವ ದಿಟ್ಟ ಹೋರಾಟಗಾರ್ತಿಯೇ ಇಟಾ ಇದಾ ಸಾರಿ.

ಉತ್ತರ ಸುಮಾತ್ರ ಪ್ರಾಂತ್ಯದ ಪುಟ್ಟ ಹಳ್ಳಿಯಲ್ಲಿ ಇಟಾ ಜನಿಸಿದರು. ಕಾಲೇಜು ದಿನಗಳಲ್ಲೇ ವಿದ್ಯಾರ್ಥಿ ಸಂಘಟನೆಗಳನ್ನು ಸೇರಿ ಶಿಕ್ಷಣದ ಹಕ್ಕುಗಳಿಗಾಗಿ ಹೋರಾಟ ನಡೆಸಿದರು.

1996ರಲ್ಲಿ ಸುಹಾತ್ರೋ ಸರ್ಕಾರ ಮಾನವ ಹಕ್ಕುಗಳನ್ನು ಉಲ್ಲಂಘನೆ  ಮಾಡುತ್ತಿದೆ ಎಂದು ಆರೋಪಿಸಿ  ಬೃಹತ್ ಪ್ರತಿಭಟನೆ ನಡೆಸಿದರು. ಈ ವೇಳೆ ಸರ್ಕಾರ ರಾಷ್ಟ್ರದ್ರೋಹದ ಅಪವಾದ ಹೊರಿಸಿ 24ರ ಹರೆಯದ ಇಟಾರನ್ನು ಜೈಲಿಗೆ ಹಾಕಿತು. ಅಂತರರಾಷ್ಟ್ರೀಯ ಸಮುದಾಯಗಳ ಒತ್ತಡಕ್ಕೆ ಮಣಿದ ಸರ್ಕಾರ ಐದು ವರ್ಷಗಳ ಬಳಿಕ  ಬಿಡುಗಡೆ ಮಾಡಿತು.

ಬಿಡುಗಡೆಯಾದ ಬಳಿಕ ಇಂಡೋನೇಷ್ಯಾ ಕಾರ್ಮಿಕರ ಸಂಘಟನೆಯ ಅಧ್ಯಕ್ಷೆಯಾಗಿ ಕಾರ್ಮಿಕರ ಹಕ್ಕುಗಳಿಗಾಗಿ ತಮ್ಮ ಹೋರಾಟವನ್ನು ಮುಂದುವರೆಸಿದರು. ಇವರ ದಿಟ್ಟ ಹೋರಾಟಕ್ಕೆ 2001ರಲ್ಲಿ ರಾಮನ್ ಮ್ಯಾಗ್ಸೆಸೆ ಪುರಸ್ಕಾರ ಸಂದಿತು. ಆಗ ಇಟಾಗೆ 29 ವರ್ಷ. 30ವರ್ಷದೊಳಗೆ ಮ್ಯಾಗ್ಸೆಸ್ಸೆ ಪುರಸ್ಕಾರ ಪಡೆದ ಬೆರಳೆಣಿಕೆ ಸಾಧಕರಲ್ಲಿ ಇಟಾ ಕೂಡ ಒಬ್ಬರಾದರು.

2002ರಲ್ಲಿ ರಿಬುಕ್ ಕಂಪೆನಿ ವಿರುದ್ಧ ಇಟಾ ಪ್ರತಿಭಟನೆಗೆ ಇಳಿದರು.  ಕಂಪೆನಿಯು ಇಟಾ ಅವರಿಗೆ ಹೋರಾಟವನ್ನು ಹಿಂಪಡೆಯುವ ಸಲುವಾಗಿ  50 ಸಾವಿರ ಅಮೆರಿಕನ್ ಡಾಲರ್ ಮೊತ್ತದ ಪ್ರಶಸ್ತಿಯನ್ನು ಘೋಷಿಸಿತು. ಇದನ್ನು ತಿರಸ್ಕರಿಸಿ  ಕಾರ್ಮಿಕರಿಗೆ ಜೀವನ ಭದ್ರತೆ ನೀಡಬೇಕೆಂದು ಪಟ್ಟು ಹಿಡಿದರು.

ಅಂತಿಮವಾಗಿ ಕಂಪೆನಿ ಕಾರ್ಮಿಕರ ಬೇಡಿಕೆಗಳನ್ನು ಅಸ್ತು ಎಂದಿತು. ಇಂಡೋನೇಷ್ಯಾದಲ್ಲಿ ಪ್ರಸ್ತುತ ಸಮಾಜವಾದಿ ಪಕ್ಷ ಕಟ್ಟಿರುವ ಇಟಾ ಪ್ರಜಾತಂತ್ರ ವ್ಯವಸ್ಥೆ ಸ್ಥಾಪಿಸಲು ಹೋರಾಟ ನಡೆಸುತ್ತಿದ್ದಾರೆ.

ಅಮಿತಾಭ್ ಚೌಧರಿ

ಕಿರಿಯ ವಯಸ್ಸಿಗೆ ರಾಮನ್ ಮ್ಯಾಗ್ಸೆಸ್ಸೆ ಪುರಸ್ಕಾರ ಪಡೆದ ಭಾರತೀಯನೆಂದರೆ ಅಮಿತಾಭ್ ಚೌಧರಿ. ಚೌಧರಿ ಅವರ ಪತ್ರಿಕೋದ್ಯಮ ಮತ್ತು ಸಾಹಿತ್ಯ ಸೇವೆಗೆ 1961ರಲ್ಲಿ ಮ್ಯಾಗ್ಸೆಸ್ಸೆ ಪುರಸ್ಕಾರ ನೀಡಲಾಗಿದೆ. ಬಂಗಾಳಿ ಪತ್ರಿಕೋದ್ಯಮದಲ್ಲಿ ಚೌಧರಿ ಅವರದ್ದು ಬಹುದೊಡ್ಡ ಹೆಸರು.

ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದಲ್ಲಿ ಬಂಗಾಳಿ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ಹಾಕಿಕೊಟ್ಟ ಹೆಗ್ಗಳಿಕೆ  ಇವರದ್ದು. ಪತ್ರಕರ್ತರು ಸರ್ಕಾರ ಮತ್ತು  ಜನರ ನಡುವಿನ ಕೊಂಡಿಯಾಗಿರಬೇಕು. ನೈತಿಕತೆ ಕಾಯ್ದುಕೊಂಡು ಪತ್ರಿಕೋದ್ಯಮದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿರಬೇಕು.

ಪತ್ರಕರ್ತರು ಪ್ರಾಮಾಣಿಕರಾಗಿದ್ದರೆ ಮಾತ್ರ ಸಮಾಜವನ್ನು ತಿದ್ದಬಹುದು ಮತ್ತು ಸರ್ಕಾರಕ್ಕೆ ಅಂಕುಶ ಹಾಕಬಹುದು ಎಂದು ಚೌಧರಿ ಪತ್ರಿಕಾ ಧರ್ಮದ ಆದರ್ಶಗಳನ್ನು ಎತ್ತಿಹಿಡಿದವರು. ಜುಗಾಂತರ ಬಂಗಾಳಿ ಪತ್ರಿಕೆ ಮೂಲಕ ಚೌಧರಿ ತಮ್ಮ ವೃತ್ತಿ ಜೀವನ ಆರಂಭಿಸಿದರು. `ನೇಪಥ್ಯ ದರ್ಶನ' (Scenes Behind the Curtain) ಎಂಬ ಅಂಕಣದ ಮೂಲಕ ಇವರು ಪ್ರಸಿದ್ಧಿ ಪಡೆದರು.

ಸರ್ಕಾರಗಳ ಆಷಾಢಭೂತಿತನಗಳನ್ನು ತಮ್ಮ ಅಂಕಣದ ಮೂಲಕ ಬಯಲು ಮಾಡಿದರು. ಸಾಮಾಜಿಕ ಅಸಮಾನತೆ ಕುರಿತು ಬರೆದರು. ಉಳ್ಳವರು ಮತ್ತು ಬಡವರ ನಡುವಿನ ಅಂತರವನ್ನು ಸಮಾಜವಾದಿ ನೆಲೆಯಲ್ಲಿ ವಿಶ್ಲೇಷಣೆ ಮಾಡಿದರು. ಬಹುಶ ಇವರ ಪ್ರಭಾವವೇ ಬಂಗಾಳದಲ್ಲಿ ಎಡಪಂಥೀಯ ಸರ್ಕಾರ ರಚನೆಯಾಗಲು ಪ್ರೇರಣೆಯಾಯಿತು ಎಂಬ ವಾದಗಳು ಇವೆ.

ಅಂದು ಚೌಧರಿ ವಿರುದ್ಧ ಸರ್ಕಾರ ಸೇರಿದಂತೆ ಪಟ್ಟಭದ್ರರು, ಜಮೀನ್ದಾರರು ಮತ್ತು ಬಂಡವಾಳಶಾಹಿಗಳು 250ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದರು. ಇದ್ಯಾವುದಕ್ಕೂ ಅಂಜದೇ ಚೌಧರಿ ನಿರ್ಭೀತರಾಗಿ ನಡೆದರು.

ಒಂಗ್ ಚಾಂತೋಲ್

ಡ, ಗಲಭೆಗ್ರಸ್ತ ದೇಶ ಕಾಂಬೋಡಿಯಾ ಮೂಲದ ಒಂಗ್ ಚಾಂತೋಲ್ ವಿಶ್ವ ಪ್ರಸಿದ್ಧ ಮಹಿಳಾ ಹೋರಾಟಗಾರ್ತಿ. ಚಾಂತೋಲ್ ಬಾಲಕಿಯಾಗಿದ್ದಾಗ ಗಲಭೆಯೊಂದರಲ್ಲಿ ತಂದೆಯನ್ನು ಕಳೆದುಕೊಂಡರು.

ನಂತರ ಥೈಲೆಂಡ್ ನಿರಾಶ್ರಿತರ ಶಿಬಿರ ಸೇರಿ ಅಲ್ಲಿಯೇ ವಿದ್ಯಾಭ್ಯಾಸ ಮಾಡಿದರು.  ಕಾನೂನಿನಲ್ಲಿ ಪದವಿ ಮತ್ತು ಸಾರ್ವಜನಿಕ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದರು.

25 ವರ್ಷಗಳ ಬಳಿಕ  ಮಾನವಹಕ್ಕುಗಳ ಕಾರ್ಯಕರ್ತೆಯಾಗಿ ಚಾಂತೋಲ್ ಕಾಂಬೋಡಿಯಾಕ್ಕೆ ಮರಳಿದರು. ಗಲಭೆಗ್ರಸ್ತ ಮತ್ತು ಯುದ್ಧ ಪೀಡಿತ ಪ್ರದೇಶಗಳಲ್ಲಿನ ಮಹಿಳೆಯರ ರಕ್ಷಣೆಗೆ ಮುಂದಾದರು. ಯುವತಿಯರು, ವಿಧವೆಯರನ್ನು ವಿದೇಶಗಳಿಗೆ ಮಾರಾಟ ಮಾಡುವುದರ ವಿರುದ್ಧ ಹೋರಾಟಕ್ಕೆ ಅಣಿಯಾದರು.

ಇದರಿಂದ ಆಡಳಿತ ಸರ್ಕಾರದ ವಿರೋಧ ಕಟ್ಟಿಕೊಂಡರು. ಆದರೆ ವಿಶ್ವಸಂಸ್ಥೆ ಚಾಂತೋಲ್ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದರ ಜೊತೆಗೆ ಭದ್ರತೆಯನ್ನು ನೀಡಿತು. ಚಾಂತೋಲ್  ಮೇಲೆ  ನಾಲ್ಕೈದು ಬಾರಿ ಕೊಲೆ ಯತ್ನಗಳು ನಡೆದವು. ಹಂತ ಹಂತವಾಗಿ ಮಹಿಳೆಯರ ಮಾರಾಟ ಚಾಂತೋಲ್ ಹೋರಾಟದ ಫಲವಾಗಿ ನಿಂತು ಹೋಯಿತು. 

ಚಾಂತೋಲ್ ಅವರ ಮಹಿಳಾ ಪರವಾದ ಹೋರಾಟಗಳು ವಿಶ್ವದ ಗಮನ ಸೆಳೆಯಿತು. 2001ರಲ್ಲಿ ಚಾಂತೊಲ್‌ಗೆ ರಾಮನ್ ಮ್ಯಾಗ್ಸೆಸ್ಸೆ ಪುರಸ್ಕಾರ ಸಂದಿತು. ಆಗ ಅವರಿಗೆ 32 ರ ಹರೆಯ. ಮ್ಯಾಗ್ಸೆಸೆ ಪುರಸ್ಕಾರ ಪಡೆದ ಯುವ ಸಾಧಕರಲ್ಲಿ ಚಾತೋಲ್ ಕೂಡ ಒಬ್ಬರಾದರು.

ವಿದೇಶಗಳಿಗೆ ಮಹಿಳೆಯರ ಮಾರಾ ಟ ತಡೆಯುವಲ್ಲಿ ಚಾಂತೋಲ್ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ. ಆದರೆ ಕಾಂಬೋಡಿಯಾದಲ್ಲಿ ವೇಶ್ಯಾವಾಟಿಕೆ ತಡೆಯುವಲ್ಲಿ ಇನ್ನೂ ಸಾಧ್ಯವಾಗಿಲ್ಲ. ಸರ್ಕಾರದ ಬೆದರಿಕೆ ನಡುವೆಯು ಚಾಂತೋಲ್ ಹೋರಾಟವನ್ನು ಮುಂದುವರೆಸಿದ್ದಾರೆ.

ಆನಂದ್ ಗಾಳಪ್ಪಟ್ಟಿ

ನಂದ್ ಗಾಳಪಟ್ಟಿ ಶ್ರೀಲಂಕಾದ ನಾಗರಿಕ ಹಕ್ಕುಗಳ ಹೋರಾಟಗಾರ ಮತ್ತು ಖ್ಯಾತ ಮಾನಸಿಕ ತಜ್ಞ.
ಇಲ್ಲಿನ ನಾಗರಿಕ ಯುದ್ಧಗಳಲ್ಲಿ ಮತ್ತು ಪ್ರಕೃತಿ ವಿಕೋಪಗಳಲ್ಲಿ ಮನೆ ಮಠ, ಬಂಧು ಬಾಂಧವರನ್ನು ಕಳೆದುಕೊಂಡವರಿಗೆ ಮಾನಸಿಕ ಸಾಂತ್ವಾನ ನೀಡುವ ಕಾಯಕದಲ್ಲಿ ಆನಂದ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ವಿಶಿಷ್ಟ ಸೇವೆಗೆ  2008ರಲ್ಲಿ ರಾಮನ್ ಮ್ಯಾಗ್ಸೆಸ್ಸೆ ಪುರಸ್ಕಾರ ಬಂದಿದೆ. ಆಗ ಅವರಿಗೆ 30 ವರ್ಷ.

ಲಂಡನ್‌ನಲ್ಲಿ ಜನಿಸಿದ ಆನಂದ್ ತಮ್ಮ ಬಾಲ್ಯವನ್ನು ಶ್ರೀಲಂಕಾದಲ್ಲಿಯೇ ಕಳೆದರು. ಬಾಂಗ್ಲಾದೇಶದ ಡಾಕಾದಲ್ಲಿ ಪ್ರೌಢ ಶಿಕ್ಷಣ ಪೂರೈಸಿದರು. ಬ್ರಿಟನ್‌ನ ಕೆಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಮನಶಾಸ್ತ್ರ ಪದವಿ ಪಡೆದರು. ನಂತರ ಶ್ರೀಲಂಕಾಗೆ ಮರಳಿ ನಾಗರಿಕ ಸೇವೆಯಲ್ಲಿ ಸಕ್ರಿಯರಾದರು.

ಎಲ್‌ಟಿಟಿಇ ಮತ್ತು ಶ್ರೀಲಂಕಾ ಸೇನೆ ನಡುವಿನ ಘರ್ಷಣೆಯಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಿದರು. 2004ರಲ್ಲಿ ಸಂಭವಿಸಿದ ಸುನಾಮಿ ದುರಂತದಲ್ಲಿ ನಿರಾಶ್ರಿತರಾದವರ  ನೆರವಿಗೆ ನಿಂತರು. ಬದುಕುಳಿದವರಿಗೆ ಮಾನಸಿಕ ಸ್ಥೈರ್ಯ ತುಂಬಿ ಅವರಲ್ಲಿ ಜೀವನ ಪ್ರೀತಿಯನ್ನು ಮತ್ತೆ ಚಿಗುರಿಸಿದರು. ಅಂತರರಾಷ್ಟ್ರೀಯ ಸಂಸ್ಥೆಯೊಂದನ್ನು ಸ್ಥಾಪಿಸಿ ನೊಂದವರಿಗೆ ಬದುಕು ರೂಪಿಸಿಕೊಟ್ಟರು. ಅನಾಥರಾದ ಮಕ್ಕಳಿಗಾಗಿಯೇ ವಸತಿ ಶಾಲೆ ಸ್ಥಾಪಿಸಿ ವಿದ್ಯಾಭ್ಯಾಸ ನೀಡುತ್ತಿದ್ದಾರೆ.

ಪ್ರಸ್ತುತ `ಮಾನಸಿಕ ಸಾಂತ್ವಾನ ಕಾರ್ಯಕ್ರಮ' ಎಂಬ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ. ಈ ಮೂಲಕ ಶ್ರೀಲಂಕಾದೆಲ್ಲಡೆ ವಿಚಾರ ಸಂಕಿರಣ ಮತ್ತು ಕಾರ್ಯಾಗಾರಗಳನ್ನು ನಡೆಸುತ್ತಿದ್ದಾರೆ. ದುರಂತಗಳು ಸಂಭವಿಸಿದ ಬಳಿಕ ನೊಂದವರಿಗೆ ಸ್ಪಂದಿಸುವುದು ಹೇಗೆ ಎಂಬುದನ್ನು ಯುವಕರಿಗೆ ತಿಳಿಸಿಕೊಡುತ್ತಿದ್ದಾರೆ. ಈ ಮುಖೇನಾ ಸ್ವಯಂ ಸೇವಾ ಯುವ ಕಾರ್ಯಪಡೆ ಕಟ್ಟುತ್ತಿದ್ದಾರೆ.
-ಪೃಥ್ವಿರಾಜ್ ಎಂ.ಎಚ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT