ನವದೆಹಲಿ: ಬೈಜುಸ್ ಕಂಪನಿಯ ಮಾತೃಸಂಸ್ಥೆಯಾದ ಥಿಂಕ್ ಆ್ಯಂಡ್ ಲರ್ನ್ನಲ್ಲಿ ತಲೆದೋರಿರುವ ಬಿಕ್ಕಟ್ಟಿನ ಬಗ್ಗೆ ತ್ವರಿತವಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು, ಅಧಿಕಾರಿಗಳಿಗೆ ಸೂಚಿಸಿದೆ.
ಅಧಿಕಾರಿಗಳು ಸಲ್ಲಿಸುವ ವರದಿಯನ್ನು ಪರಾಮರ್ಶೆ ನಡೆಸಿದ ಬಳಿಕ ಕಂಪನಿಗಳ ಕಾಯ್ದೆಯಡಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದೆ.
‘ಕಳೆದ ವರ್ಷದ ಜುಲೈನಲ್ಲಿಯೇ ಥಿಂಕ್ ಆ್ಯಂಡ್ ಲರ್ನ್ ಸಂಸ್ಥೆಯ ಬಿಕ್ಕಟ್ಟಿನ ಬಗ್ಗೆ ಪರಿಶೀಲನೆ ನಡೆಸುವಂತೆ ಹೈದರಾಬಾದ್ನ ಪ್ರಾದೇಶಿಕ ನಿರ್ದೇಶಕರಿಗೆ ಸಚಿವಾಲಯವು ಸೂಚಿಸಿತ್ತು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತ್ತೊಂದೆಡೆ ಕೆಲವು ನಿರ್ದಿಷ್ಟ ಹಣಕಾಸು ವರ್ಷಗಳಿಗೆ ಸಂಬಂಧಿಸಿದಂತೆ ಬೈಜುಸ್ನಲ್ಲಿ ಲೆಕ್ಕ ಪರಿಶೋಧನೆ ಸಂಬಂಧ ಅನುಸರಿಸಿರುವ ಮಾನದಂಡಗಳ ಬಗ್ಗೆ ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯು (ಐಸಿಎಐ) ವರದಿ ಸಿದ್ಧಪಡಿಸುತ್ತಿದೆ ಎಂದು ಐಸಿಎಐ ಅಧ್ಯಕ್ಷ ರಂಜೀತ್ ಕುಮಾರ್ ಅಗರ್ವಾಲ್ ಹೇಳಿದ್ದಾರೆ.
ಇತ್ತೀಚೆಗೆ ಕಂಪನಿಯ ಪ್ರಮುಖ ಹೂಡಿಕೆದಾರರು ಕರೆದಿದ್ದ ಷೇರುದಾರರ ವಿಶೇಷ ಸಾಮಾನ್ಯ ಸಭೆಯಲ್ಲಿ ಕಂಪನಿಯ ಸಿಇಒ ಬೈಜು ರವೀಂದ್ರನ್ ಹಾಗೂ ಅವರ ಕುಟುಂಬದ ಸದಸ್ಯರನ್ನು ಆಡಳಿತ ಮಂಡಳಿಯಿಂದ ಪದಚ್ಯುತಿಗೊಳಿಸುವಂತೆ ನಿರ್ಣಯ ಅಂಗೀಕರಿಸಲಾಗಿದೆ.