ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದಿದ್ದನ್ನು ನೆನಪಿರಿಸಿಕೊಳ್ಳುವ ಹಂತಗಳು ಯಾವುವು? ತಜ್ಞರ ಲೇಖನ ಇಲ್ಲಿದೆ

Last Updated 6 ಮಾರ್ಚ್ 2023, 0:15 IST
ಅಕ್ಷರ ಗಾತ್ರ

'ಓದಿದ್ದು ನಿನ್ನೆ ಅಷ್ಟು ಚೆನ್ನಾಗಿ ನೆನಪಿತ್ತು. ಈಗ ನೆನಪಿಗೆ ಬರುತ್ತಿಲ್ಲ‘ – ಇದು ಪರೀಕ್ಷೆ ಸಮಯದಲ್ಲಿ ಅನೇಕ ವಿದ್ಯಾರ್ಥಿ ಗಳಲ್ಲಿರುವ ಚಿಂತೆ. ಏಕೆ ಈ ರೀತಿ ಆಗುತ್ತದೆ ಎಂದು ಗೊತ್ತಾಗುವುದಿಲ್ಲ. ಇದಕ್ಕೆ ಕಾರಣ ತಿಳಿದುಕೊಳ್ಳಬೇಕು. ಅದಕ್ಕೆ ನೆನಪಿರಿಸಿಕೊಳ್ಳುವ ವೈಜ್ಞಾನಿಕ ಪ್ರಕ್ರಿಯೆ ಯಾವ ರೀತಿ ನಡೆಯುತ್ತದೆ ಎಂದು ಮೊದಲು ತಿಳಿದುಕೊಳ್ಳಬೇಕು.

ನೆನಪಿರಿಸಿಕೊಳ್ಳುವ ವೈಜ್ಞಾನಿಕ ಪ್ರಕ್ರಿಯೆಯಲ್ಲಿ ಮಿದುಳಿನಲ್ಲಿರುವ ನರಕೋಶಗಳು ಹಾಗೂನರ ವ್ಯೂಹದಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳ ಪಾತ್ರ ಮುಖ್ಯವಾಗಿರುತ್ತದೆ.

ಹೇಗಿರುತ್ತದೆ ಈ ಪ್ರಕ್ರಿಯೆ ?

* ನರವ್ಯೂಹದಲ್ಲಿ ಕೋಟ್ಯಂತರ ನರ ಕೋಶಗಳು ಇರುತ್ತವೆ.
* ನರ ಕೋಶಗಳು ಸಂಪರ್ಕ ತಂತುವಿನಿಂದ ಒಂದಕ್ಕೊಂದು ಬೆಸೆದುಕೊಂಡಿರುತ್ತವೆ.
* ಪ್ರತಿಯೊಂದು ವಿಷಯದ ಕುರಿತ ನಮ್ಮ ತಿಳಿವಳಿಕೆ ಒಂದು ಗಣದ ನರಕೋಶಗಳನ್ನು, ರಾಸಾಯನಿಕ ಸ್ರಾವದ ಮೂಲಕ ಉದ್ದೀಪಿಸುತ್ತದೆ.
* ಉದ್ದೀಪನ ಕ್ರಿಯೆಯು ತಾತ್ಕಾಲಿಕ ಮತ್ತು ದೀರ್ಘ ಕಾಲಿಕ ಎಂಬ ಎರಡು ಹಂತಗಳಲ್ಲಿ ನಡೆಯುತ್ತದೆ.
* ತಾತ್ಕಾಲಿಕ ಉದ್ದೀಪನವು ಬೇಗನೆ ಮರೆತು ಹೋಗುತ್ತದೆ. ತಾತ್ಕಾಲಿಕ ಉದ್ದೀಪನಕ್ಕೆ ಒಳಗಾದ ನರಕೋಶಗಳನ್ನು ಮತ್ತೆ ಮತ್ತೆ ಉದ್ದೀಪಿಸಿದಾಗ ದೀರ್ಘ ಕಾಲಿಕವಾಗಿ ನೆನಪಿನಲ್ಲಿ ದಾಖಲಾಗುತ್ತದೆ.

* ಕೆಲವೊಂದು ಪಠ್ಯ ವಿಷಯಗಳ ಕಂಠಪಾಠ, ಪುನರಾವರ್ತನೆ, ವಿಚಾರ ವಿನಿಮಯ, ವಿಚಾರ ಮಂಡನೆ, ಬೋಧನೆ, ಗುಂಪು ಚರ್ಚೆ, ವಿಚಾರ ಸಂಕಿರಣಗಳೆಲ್ಲವೂ ತಾತ್ಕಾಲಿಕ ಉದ್ದೀಪನವನ್ನು ಮತ್ತೆ ಮತ್ತೆ ಉದ್ದೀಪಿಸಿ ದೀರ್ಘಕಾಲಿಕವಾಗಿ ದಾಖಲಿಸುವ ಪ್ರಕ್ರಿಯೆಯಾಗಿದೆ.
* ಹೊಸ ಮಾಹಿತಿಯನ್ನು ಈಗಾಗಲೇ ಸ್ಥಾಪಿತವಾಗಿರುವ ನರಕೋಶಗಳ ಗಣಕ್ಕೆ ಹೋಲಿಕೆ, ಭಿನ್ನತೆಗಳ ಮರು ಅವಲೋಕನದ ಮೂಲಕ ಲಗತ್ತಿಸಿದರೆ ಹೊಸ ಮಾಹಿತಿಯು ಹಳೆಯದನ್ನೆ ಒಳಗೊಂಡು ಸುಲಭವಾಗಿ ನೆನಪಿನಲ್ಲಿ ಉಳಿಯುತ್ತದೆ.

ಈ ಪ್ರಕ್ರಿಯೆಗಳ ಮೂಲಕ ನೆನಪಿನಲ್ಲಿ ಉಳಿಯಬೇಕಾದರೆ ಕಲಿಕೆಯ ಮೂಲ ಅಗತ್ಯವನ್ನು ಸ್ಪಷ್ಟಪಡಿಸಿ ಕೊಳ್ಳಬೇಕು. ಕಲಿಕಾರ್ಥಿ; ಅಂದರೆ ವಿದ್ಯಾರ್ಥಿ, ಪೋಷಕರು ಮತ್ತು ಶಿಕ್ಷಕರು ಕಲಿಕೆಯ ಮೂಲ ಅಗತ್ಯಗಳಾಗಿ ರುತ್ತಾರೆ. ಇವರೆಲ್ಲರಿಗೂ ಕಲಿಕೆಯಲ್ಲಿ ತಮ್ಮದೇ ಆದ ಪಾತ್ರವಿದೆ.

* ಪೋಷಕರು ಕಲಿಕೆಗೆ ಅಗತ್ಯವಾದ ಸಂಪನ್ಮೂಲ, ಸಂಸ್ಕಾರ ಮತ್ತು ಪ್ರೋತ್ಸಾಹವನ್ನು ನೀಡಬೇಕು.

* ವಿದ್ಯಾರ್ಥಿಗೆ ಕಲಿಕೆಗೆ ಅನುಕೂಲ ಮಾಡಿಕೊಡುವವರು ಶಿಕ್ಷಕರು. ಅಂದರೆ ವಿದ್ಯಾರ್ಥಿಯು ಕಲಿಕೆಗೆ ತೊಡಗಿ ದಾಗ ಉಂಟಾಗುವ ಕಲಿಕಾ ಅಡತಡೆಗಳನ್ನು ಶಿಕ್ಷಕರು ನಿವಾರಿಸಬೇಕು. ಅವರು ವಿದ್ಯಾರ್ಥಿಗೆ ಕಲಿಕೆಗೆ ಅನುಕೂಲ ಮಾಡಿಕೊಡುವುದರೊಂದಿಗೆ ಕಲಿತುಕೊಳ್ಳಲು ವಿದ್ಯಾರ್ಥಿಗೆ ಉತ್ತೇಜನ ನೀಡಬೇಕು. ಅಲ್ಲದೆ, ವಿದ್ಯಾರ್ಥಿಗಳಿಗೆ ಒಂದು ಆದರ್ಶವನ್ನು ಕಲ್ಪಿಸಿಕೊಡಬೇಕು. ಅದು ಕಲಿಕೆಗೆ ಬೇಕಾದ ಆದರ್ಶವೂ ಹೌದು. ಜೀವನದ ಆದರ್ಶವೂ ಹೌದು. ಮತ್ತು ಸ್ವತಃ ಶಿಕ್ಷಕರೇ ವಿದ್ಯಾರ್ಥಿಗಳಿಗೆ ಆದರ್ಶವಾಗುವುದೂ ಆಗಿದೆ.

ಇವರೆಲ್ಲರಲ್ಲಿ ಬಹಳ ಮುಖ್ಯರಾದವರು ವಿದ್ಯಾರ್ಥಿಗಳು. ತಾನು ಕಲಿಯಬೇಕು ಎಂಬ ಇಚ್ಛಾಶಕ್ತಿ ಇರಬೇಕು. ಅದಿಲ್ಲದೆ ಹೋದರೆ ಪೋಷಕರು ಮತ್ತು ಶಿಕ್ಷಕರು ಅಸಹಾಯಕರಾಗುತ್ತಾರೆ. ವಿದ್ಯಾರ್ಥಿಯು ಕಲಿತುಕೊಳ್ಳಲು ಹೊರಟಾಗ ಪೋಷಕರು ಮತ್ತು ಶಿಕ್ಷಕರು ಏನನ್ನಾದರೂ ಮಾಡಲು ಸಾಧ್ಯವಾಗುವುದು. ವಿದ್ಯಾರ್ಥಿಗಳು ತಮ್ಮನ್ನು ತಾವು ಸನ್ನದ್ಧಗೊಳಿಸಿಕೊಂಡ ನಂತರ ಕ್ರಮಿಸಬೇಕಾದ ಕಲಿಕಾ ಹಂತಗಳು ಹೀಗಿವೆ:

ಶ್ರವಣ: ಅಂದರೆ ಕೇಳಿಸಿಕೊಳ್ಳುವುದು.‌ ಕೇಳಿಸಿಕೊಳ್ಳುವುದು ತರಗತಿ ಕಲಿಕೆಯ ಪ್ರಾಥಮಿಕ ಹಂತವಾಗಿದೆ. ಕೇಳಿಸಿಕೊಳ್ಳಲಿಕ್ಕೇ ತಯಾರಿಲ್ಲದವರು ಮುಂದಿನ ಹಂತಕ್ಕೆ ಹೋಗುವುದು ಬಹಳ ಕಷ್ಟ. ಆದ್ದರಿಂದ ಪಾಠಗಳನ್ನು ಕೇಳಿಸಿಕೊಳ್ಳಬೇಕು.

ಪಠನ: ಅಂದರೆ ಓದುವುದು. ವ್ಯವಸ್ಥಿತ ಕಲಿಕೆಗಾದಾಗ ಕಥೆ, ಕಾದಂಬರಿಗಳನ್ನು ಓದುವ ಹಾಗೆ ಓದುವುದಲ್ಲ. ಪಠ್ಯದ ವಿಚಾರ, ಭಾವ, ಪರಿಕಲ್ಪನೆ, ಕ್ಲಿಷ್ಟ ವಿಷಯಗಳನ್ನು ಅರ್ಥ ಮಾಡಿಕೊಂಡು‌‌ ಓದಬೇಕು.

ಮನನ: ಅರ್ಥ ಮಾಡಿಕೊಂಡದ್ದನ್ನು‌ ಮನಸ್ಸಿಗೆ ಖಚಿತಪಡಿಸಿಕೊಳ್ಳುವುದು. ಈ ಹಂತದಲ್ಲಿ ಹೊರಗಿನಿಂದ ಬಂದ ವಿಷಯಗಳು ವಿದ್ಯಾರ್ಥಿಯದ್ದೇ ಆಗಿ " ಇದು ಹೀಗೀಗೆ" ಎಂಬ ಸ್ಪಷ್ಟ ರೂಪವನ್ನು ಧರಿಸಿ ವಿದ್ಯಾರ್ಥಿಯಲ್ಲಿ ಸೇರಿಕೊಳ್ಳಬೇಕು.

ನಿದಿಧ್ಯಾಸನ: ಮನಸ್ಸಿಗೆ ಖಚಿತವಾದದ್ದನ್ನು ಜಿಜ್ಞಾಸೆ ನಡೆಸಬೇಕು. " ಇದು ಹೀಗಲ್ಲದಿದ್ದರೆ ಬೇರೆ ಹೇಗೆ ಸಾಧ್ಯ?" ಎಂಬಂತಹ ಬಹುಮುಖಿ ಪ್ರಶ್ನೆಗಳನ್ನಿರಿಸಿಕೊಂಡು ತಾರ್ಕಿಕವಾಗಿ ವಿಚಾರ ಮಂಥನ ನಡೆಸಬೇಕು.

ಪುನರಾವರ್ತನೆ: ಜಿಜ್ಞಾಸೆಯ ನಂತರ ವಿದ್ಯಾರ್ಥಿಯಲ್ಲಿ ಆಂತರಿಕವಾಗಿ ದೃಢೀಕರಣವಾದದ್ದನ್ನು ಮತ್ತೊಮ್ಮೆ ಅಧ್ಯಯನ ಮಾಡಿ ಅಥವಾ ಗುಂಪಾಗಿ ಚರ್ಚೆ ನಡೆಸಿ ಅಥವಾ ಪ್ರಶ್ನೋತ್ತರಗಳನ್ನು ನಡೆಸುವ ಮೂಲಕ ಅಧ್ಯಯನ ನಡೆಸಿ ದೃಢೀಕರಿಸಿಕೊಳ್ಳಬೇಕು.

ಪುನರ್‌ ಪ್ರತಿಷ್ಠಾಪನೆ: ಸ್ಪಷ್ಟವಾದದ್ದನ್ನು ಸರಳ ಟಿಪ್ಪಣಿಯಾಗಿ ಒಂದೆರಡು ಅಂಶಗಳಲ್ಲಿ ಬರೆದಿಡಬೇಕು. ಅಥವಾ ಮಾನಸಿಕ ಕ್ರಿಯೆಯಾಗಿ ಮನದೊಳಗೇ ಪಠ್ಯ ವಿಷಯಗಳನ್ನು ವಿದ್ಯಾರ್ಥಿಗಳದ್ದೇ ಆದ ಮಾತುಗಳಲ್ಲಿ ದೃಢಪಡಿಸಿರಿಸಿಕೊಳ್ಳಬೇಕು.

ನೆನಪಿರಿಸಿಕೊಳ್ಳಲು ಅಥವಾ ನೆನಪು ಶಕ್ತಿಯನ್ನು ಹೆಚ್ಚಿಸಲು ಯಾವ ಔಷಧಿಗಳೂ ಇಲ್ಲ. ಆದರೆ ಕಲಿಕೆಯನ್ನು ಸಮರ್ಪಕವಾಗಿ ನಡೆಸುವ ಮೂಲಕ, ಪರಿಣಾಮಕಾರಿಯಾದ ವಿಧಾನಗಳಿಂದ ಅಧ್ಯಯನ ನಡೆಸುವ ಮೂಲಕ ಕಲಿತದ್ದು ನೆನಪಿನಲ್ಲಿ ಉಳಿಯುವಂತೆ ಮಾಡಬಹುದು.‌ ಮೇಲೆ ಹೇಳಿದ ವಿಧಾನಗಳನ್ನು ಅಳವಡಿಸಿಕೊಳ್ಳುವ ದೃಢ ನಿರ್ಧಾರ ವಿದ್ಯಾರ್ಥಿಗಳಲ್ಲಿದ್ದರೆ ನೆನಪಿರಿಸಿಕೊಳ್ಳುವುದು ಕಷ್ಟವಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT