ಪ್ರಯಾಗ್ರಾಜ್(ಉತ್ತರ ಪ್ರದೇಶ): ಶಾಲೆ ಬಳಿ ಇರುವ ಮದ್ಯದಂಗಡಿ ತೆರವುಗೊಳಿಸಲು ಆದೇಶ ನೀಡುವಂತೆ ಕೋರಿ ಕಾನ್ಪುರದ 5 ವರ್ಷದ ವಿದ್ಯಾರ್ಥಿಯೊಬ್ಬ ಅಲಹಾಬಾದ್ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿದ್ದಾನೆ.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಕಾನ್ಪುರದ ಮದ್ಯದಂಗಡಿ ಇರುವ ಪ್ರದೇಶದಲ್ಲಿ ಶಾಲೆ ಅಸ್ತಿತ್ವಕ್ಕೆ ಬಂದ ನಂತರವೂ ಅದರ ಪರವಾನಗಿಯನ್ನು ಏಕೆ ನವೀಕರಿಸಲಾಗುತ್ತಿದೆ ಎಂದು ಅಧಿಕಾರಿಗಳಿಂದ ಪ್ರತಿಕ್ರಿಯೆ ಪಡೆಯುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿದೆ.
ನ್ಯಾಯಮೂರ್ತಿ ಮನೋಜ್ ಕುಮಾರ್ ಗುಪ್ತಾ ಮತ್ತು ನ್ಯಾಯಮೂರ್ತಿ ಕ್ಷಿತಿಜ್ ಶೈಲೇಂದ್ರ ಅವರನ್ನೊಳಗೊಂಡ ವಿಭಾಗೀಯ ಪೀಠವು ಮುಂದಿನ ವಿಚಾರಣೆಯನ್ನು ಮಾರ್ಚ್ 13ಕ್ಕೆ ಮುಂದೂಡಿತು.
ಪಿಐಎಲ್ ಸಲ್ಲಿಸಿರುವ ಬಾಲಕನು ಕಾನ್ಪುರದ ಆಜಾದ್ ನಗರದ ಖಾಸಗಿ ಶಾಲೆಯ ವಿದ್ಯಾರ್ಥಿಯಾಗಿದ್ದು, ತಮ್ಮ ಶಾಲೆಯ ಬಳಿ ಮದ್ಯದ ಅಂಗಡಿ ಇದೆ ಮತ್ತು ಆಗಾಗ್ಗೆ ಜನರು ಮದ್ಯ ಸೇವಿಸಿ ಅಲ್ಲಿ ಗಲಾಟೆ ಮಾಡುತ್ತಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ.