ಡೆರೆಕ್ ಒಬ್ರಯಾನ್ ಅವರಿಗೆ ಕರೆ ಮಾಡಿ ಕ್ಷಮೆ ಯಾಚಿಸಿರುವ ಅಧೀರ್, ಎಕ್ಸ್ನಲ್ಲೂ ಈ ಕುರಿತಂತೆ ಪೋಸ್ಟ್ ಮಾಡಿದ್ದಾರೆ.
‘ಮಿಸ್ಟರ್ ಡೆರೆಕ್ ಒಬ್ರಯಾನ್ ಅವರು ವಿದೇಶಿಗರೆಂದು ನಾನು ಅಜಾಗರೂಕತೆಯಿಂದ ನೀಡಿದ ಹೇಳಿಕೆ ಕುರಿತಂತೆ ನನ್ನ ವಿಷಾದವನ್ನು ಅವರಿಗೆ ತಿಳಿಸಿದ್ದೇನೆ’ಎಂದು ಅವರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಅಧೀರ್ ರಂಜನ್ ಕ್ಷಮಾಪಣೆಯನ್ನು ಒಬ್ರಯಾನ್ ಅಂಗೀಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಮಾತನಾಡಿದ್ದ ಅಧೀರ್, ‘ಡೆರೆಕ್ ಒಬ್ರಯಾನ್ ವಿದೇಶಿಗ. ಅವರಿಗೆ ಬಹಳಷ್ಟು ವಿಷಯಗಳು ತಿಳಿದಿವೆ. ಅವರನ್ನು ಕೇಳಿ’ಎಂದು ಹೇಳಿದ್ದರು.
ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಟಿಎಂಸಿ ನಡುವಿನ ಸೀಟು ಹಂಚಿಕೆ ಮಾತುಕತೆ ಫಲಪ್ರದವಾಗದಿದ್ದಕ್ಕೆ ತಮ್ಮನ್ನು ಟೀಕಿಸಿದ್ದ ಡೆರೆಕ್ ಕುರಿತಂತೆ ಅಧೀರ್ ಖಾರವಾಗಿ ಪ್ರತಿಕ್ರಿಯಿಸಿದ್ದರು.
‘ಇಂಡಿಯಾ ಮೈತ್ರಿಕೂಟ ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡದಿರುವುದಕ್ಕೆ ಮೂರು ಕಾರಣಗಳಿವೆ. ಅವು, ಅಧೀರ್, ಅಧೀರ್ ಹಾಗೂ ಅಧೀರ್’ಎಂದು ರಾಜ್ಯಸಭಾ ಸದಸ್ಯ ಡೆರೆಕ್ ಒಬ್ರಯಾನ್ ಹೇಳಿದ್ದರು.
‘ಸ್ವತಃ ಅಧೀರ್ ರಂಜನ್ ಚೌಧರಿ ಅವರೇ ತಮ್ಮ ಪಕ್ಷದ ಸಮಾಧಿ ಅಗೆಯುತ್ತಿದ್ದಾರೆ. ಇಂಡಿಯಾ ಮೈತ್ರಿಕೂಟಕ್ಕೆ ಸಾಕಷ್ಟು ವಿರೋಧಿಗಳಿದ್ದಾರೆ. ಮುಖ್ಯವಾಗಿ ಬಿಜೆಪಿ ನಾಯಕರು ಮತ್ತು ಚೌಧರಿ ಪದೇಪದೇ ಮೈತ್ರಿಕೂಟದ ವಿರುದ್ಧ ಮಾತನಾಡಿದ್ದಾರೆ’ ಎಂದು ಕುಟುಕಿದ್ದರು.