ನವದೆಹಲಿ: ಭ್ರಷ್ಟಾಚಾರ, ಮಹಿಳೆಯರ ವಿರುದ್ಧದ ದೌರ್ಜನ್ಯ ಪ್ರಕರಣಗಳು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಮತ್ತು ನಿರುದ್ಯೋಗ ಸಮಸ್ಯೆಗಳನ್ನು ವಿರೋಧಿಸಿ ರಾಜಸ್ಥಾನ ಸರ್ಕಾರದ ವಿರುದ್ಧ ಮಂಗಳವಾರ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಹೇಳಿದೆ.
ಮುಖ್ಯಮಂತ್ರಿ ಅಶೋಕ್ ಗೆಹಲೋತ್ ನೇತೃತ್ವದ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ‘ನಹಿ ಸಹೇಗಾ ರಾಜಸ್ಥಾನ್’ (ರಾಜಸ್ಥಾನ ಸಹಿಸುವುದಿಲ್ಲ) ಅಭಿಯಾನದ ಭಾಗವಾಗಿ ಈ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಸೋಮವಾರ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದರು. ರಾಜ್ಯದ ಬಿಜೆಪಿ ಸಂಸದರಾದ ಕಿರೋಡಿ ಲಾಲ್ ಮೀಣಾ, ಸುಖ್ಬೀರ್ ಸಿಂಗ್ ಜೌನಪುರಿಯಾ ಮತ್ತು ಭಾಗೀರತ್ ಚೌಧರಿ ಅವರು ಈ ವೇಳೆ ಅರುಣ್ ಸಿಂಗ್ ಜೊತೆಗೂಡಿದ್ದರು.
ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಅರುಣ್ ಸಿಂಗ್ ಅವರು, ‘ರಾಜ್ಯದಲ್ಲಿ ಕೊಲೆ, ಅತ್ಯಾಚಾರದಂಥ ಪ್ರಕರಣಗಳು ವ್ಯಾಪಕವಾಗಿ ನಡೆಯುತ್ತಿವೆ. ಜುಲೈ 28ರಂದು ಒಂದೇ ದಿನ ರಾಜ್ಯದಲ್ಲಿ ಆ ರೀತಿಯ 21 ಘಟನೆಗಳು ನಡೆದಿವೆ. ದಿನವೊಂದಕ್ಕೆ 17ರಿಂದ 18 ಅತ್ಯಾಚಾರ ಮೊಕದ್ದಮೆಗಳು ದಾಖಲಾಗುತ್ತಿವೆ’ ಎಂದು ಆರೋಪಿಸಿದರು.
ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೆಚ್ಚು ಸದ್ದು ಮಾಡುವ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಜ್ಯದಲ್ಲಿ ದೌರ್ಜನ್ಯಕ್ಕೊಳಗಾಗಿರುವ ಸಂತ್ರಸ್ತೆಯರನ್ನು ಭೇಟಿಯಾಗಿಲ್ಲ ಎಂದು ಬಿಜೆಪಿ ನಾಯಕರು ಆರೋಪಿಸಿದರು.