ಕೋಲ್ಕತ್ತ: ಮತದಾನ ದಿನದಂದು ಪೊಲೀಸರ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರನ್ನು ವಶಕ್ಕೆ ಪಡೆಯಲು ತೆರಳಿದ್ದ ಪೊಲೀಸರು ಮತ್ತು ಮಹಿಳೆಯರ ನಡುವೆ ಸಂದೇಶ್ಖಾಲಿಯಲ್ಲಿ ಭಾನುವಾರ ಘರ್ಷಣೆ ನಡೆದಿದೆ.
ದಾಳಿ ಪ್ರಕರಣದಲ್ಲಿ ಭಾಗಿಯಾದವರಿಗಾಗಿ ಶೋಧ ಕಾರ್ಯ ನಡೆಸಲು ಕ್ಷಿಪ್ರ ಕಾರ್ಯಪಡೆಯ (ಆರ್.ಎ.ಎಫ್) ಸಿಬ್ದಂದಿ ಸಂದೇಶ್ಖಾಲಿಯ ಅಗರ್ಹಟಿ ಗ್ರಾಮಕ್ಕೆ ತೆರಳಿದ್ದ ವೇಳೆ ಅಲ್ಲಿನ ಮಹಿಳೆಯರು ರಸ್ತೆ ತಡೆ ನಡೆಸಿ, ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದರು.
‘ನಾವು ಯಾರನ್ನೂ ಬಂಧಿಸಿಲ್ಲ. ಆದರೆ ಸ್ಥಳೀಯ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ನಡೆದ ಘರ್ಷಣೆಯಲ್ಲಿ ಕೆಲವು ಮಹಿಳಾ ಸಿಬ್ಬಂದಿ ಗಾಯಗೊಂಡಿದ್ದಾರೆ’ ಎಂದು ಹೇಳಿದರು.
ವಶಕ್ಕೆ ಪಡೆದಿದ್ದ ವ್ಯಕ್ತಿಯನ್ನ ಬಿಡಿಸಲು ಮಹಿಳೆಯರು ಪ್ರಯತ್ನಿಸಿದ್ದಾರೆ ಎಂದೂ ವಿವರಿಸಿದರು.