ಮುಂಬೈ: ಮುಂಬೈ ತೀರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಛತ್ರಪತಿ ಶಿವಾಜಿ ಪ್ರತಿಮೆ, ವಿಶ್ವದಲ್ಲೇ ಅತೀ ಎತ್ತರದ ಪ್ರತಿಮೆಯಾಗಲಿದೆ ಎಂದು ಘೋಷಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮುಂದಾಗಬೇಕು ಎಂದು ಶಿವಸೇನಾ ಸೋಮವಾರ ಆಗ್ರಹಿಸಿದೆ.
ಈ ಬಗ್ಗೆ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಫಡಣವೀಸ್ ಭಯಪಡುವ ಅಗತ್ಯವಿಲ್ಲ ಎಂದೂ ಹೇಳಿದೆ.
‘ಗುಜರಾತ್ನಲ್ಲಿ ನಿರ್ಮಿಸಿರುವ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ‘ಏಕತಾ ಪ್ರತಿಮೆ’ ಜಗತ್ತಿನಲ್ಲೆ ಅತೀ ಎತ್ತರದ ಪ್ರತಿಮೆಯಾಗಿರಬೇಕೆಂಬ ಕಾರಣಕ್ಕೆ ಶಿವಾಜಿ ಪ್ರತಿಮೆಯ ಎತ್ತರವನ್ನು ಕಡಿಮೆಗೊಳಿಸಲಾಗಿದೆ ಎಂದು ಎನ್ಸಿಪಿ ಮುಖಂಡ ಜಯಂತ್ ಪಾಟೀಲ್ ಆರೋಪಿಸಿದ್ದಾರೆ’ ಎಂದೂ ಶಿವಸೇನಾ ಹೇಳಿದೆ.
ಪಟೇಲ್ ಪ್ರತಿಮೆಯ ಹೆಗ್ಗಳಿಕೆ ಉಳಿಸುವ ಸಲುವಾಗಿ ಶಿವಾಜಿ ಪ್ರತಿಮೆಯ ಎತ್ತರವನ್ನು ಕಡಿಮೆಗೊಳಿಸುವುದು ‘ಸಂಕುಚಿತ ಮತ್ತು ವಿಕೃತ ಮನಸ್ಥಿತಿ’ ಎಂದು ಶಿವಸೇನಾದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಹೇಳಲಾಗಿದೆ.