ನಂದೂರ್ಬಾರ್: 'ಜಾತಿ ಗಣತಿ ನಡೆಸುವುದು ನಮ್ಮ ಪಕ್ಷದ ಗ್ಯಾರಂಟಿ' ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಮಂಗಳವಾರ ಹೇಳಿದರು.
ರಾಹುಲ್ ಗಾಂಧಿ ನೇತೃತ್ವದ ಕೊನೆಯ ಹಂತದ ಭಾರತ ಜೋಡೊ ನ್ಯಾಯ ಯಾತ್ರೆ ಮಹಾರಾಷ್ಟ್ರಕ್ಕೆ ಪ್ರವೇಶಿಸುವ ಮುನ್ನ ರಾಜ್ಯದ ನಂದೂರ್ಬಾರ್ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಬಿಜೆಪಿ ಮತ್ತು ಆರ್ಎಸ್ಎಸ್ ದೇಶವನ್ನು ವಿಭಜಿಸಿ ಸಮಾಜವನ್ನು ಧ್ರುವೀಕರಣಗೊಳಿಸುತ್ತಿವೆ' ಎಂದು ಆರೋಪಿಸಿದರು.
‘ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ ನಡೆಸುತ್ತೇವೆ ಎಂದು ನಾವು ಭರವಸೆ ನೀಡಿದ್ದೇವೆ. ಇದು ವಿವಿಧ ಜಾತಿಗಳ ಜನಸಂಖ್ಯೆ ಮತ್ತು ರಾಷ್ಟ್ರದ ಸಂಪತ್ತಿನಲ್ಲಿ ಅವರ ಪಾಲನ್ನು ತೋರಿಸುತ್ತದೆ. ಜತೆಗೆ ನಮ್ಮ ಪ್ರಜಾಪ್ರಭುತ್ವದಲ್ಲಿ ಅವರ ಪಾಲನ್ನು ಪ್ರತಿಬಿಂಬಿಸುತ್ತದೆ' ಎಂದು ಹೇಳಿದರು.
'ಭಾರತ ಜೋಡೊ ನ್ಯಾಯ ಯಾತ್ರೆ ಯಾವುದೇ ಚುನಾವಣಾ ಪ್ರಚಾರದ ಭಾಗವಲ್ಲ. ಬದಲಾಗಿ ಇದು ರಾಜಕೀಯ ರ್ಯಾಲಿಯಾಗಿದೆ. ರಾಜಕೀಯ ಗುರಿ ಮತ್ತು ಸಿದ್ಧಾಂತವನ್ನು ಆಧರಿಸಿದೆ' ಎಂದು ಅವರು ಹೇಳಿದರು.
'ಕಾಂಗ್ರೆಸ್ ಒಂದು ರಾಜಕೀಯ ಪಕ್ಷವಾಗಿದೆಯೇ ಹೊರತು ನೋಡುಗರ ಗುಂಪಲ್ಲ. ನಾವು ಚುನಾವಣೆಯಲ್ಲಿ ಗೆಲ್ಲಬಹುದು ಅಥವಾ ಸೋಲಬಹುದು. ಇದು ವಾಸ್ತವ. ಆದರೆ ಬಿಜೆಪಿ ಮತ್ತು ಆರ್ಎಸ್ಎಸ್ ಸಮಾಜವನ್ನು ವಿಭಜಿಸಲು ಯಾವುದೇ ಅವಕಾಶವನ್ನು ಬಿಡುತ್ತಿಲ್ಲ. ಪ್ರಧಾನಿ ಮೋದಿಯವರ ವರ್ತನೆ ಮತ್ತು ನೀತಿಗಳಿಂದ ದೇಶ ವಿಭಜನೆಯಾಗುತ್ತಿದೆ. ಅವರೆಲ್ಲರೂ ಸಮಾಜವನ್ನು ಧ್ರುವೀಕರಣ ಮಾಡುವತ್ತ ಗಮನಹರಿಸಿದ್ದಾರೆ' ಎಂದು ಜೈರಾಮ್ ರಮೇಶ್ ಆರೋಪಿಸಿದರು.