ನವದೆಹಲಿ: ಅಬಕಾರಿ ನೀತಿ ಹಗರಣದ ಜೊತೆಗೆ ನಂಟು ಹೊಂದಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ (ಇ.ಡಿ) ವಿಚಾರಣೆಗೆ ಸತತ ಆರನೇ ಬಾರಿಯೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಗೈರುಹಾಜರಾಗಿದ್ದಾರೆ.
ಕೇಜ್ರಿವಾಲ್ ಅವರಿಗೆ ಕಾನೂನುಬಾಹಿರವಾಗಿ ಸಮನ್ಸ್ ಜಾರಿಗೊಳಿಸಲಾಗಿದೆ ಎಂದಿರುವ ಎಎಪಿ, ‘ಇ.ಡಿ. ಅಧಿಕಾರಿಗಳು ಪದೇ ಪದೇ ಸಮನ್ಸ್ ನೀಡುವ ಬದಲು ನ್ಯಾಯಾಲಯದ ಆದೇಶ ಪ್ರಕಟವಾಗುವವರೆಗೂ ಕಾಯಬೇಕು’ ಎಂದಿದೆ.
‘ಇ.ಡಿ. ಅಧಿಕಾರಿಗಳಿಗೆ ಕಾನೂನಿನ ಪ್ರಕಾರ ಪ್ರತಿಕ್ರಿಯೆ ನೀಡಲಾಗುವುದು’ ಎಂದು ಕೇಜ್ರಿವಾಲ್ ಅವರು ದೆಹಲಿ ವಿಧಾನಸಭೆಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ವಿಚಾರಣೆಗೆ ಸೋಮವಾರ ಹಾಜರಾಗುವಂತೆ ಕೇಜ್ರಿವಾಲ್ ಅವರಿಗೆ ಇ.ಡಿ. ಅಧಿಕಾರಿಗಳು ಆರನೇ ಬಾರಿ ಸಮನ್ಸ್ ನೀಡಿದ್ದರು.
ಕೇಜ್ರಿವಾಲ್ ಅವರು ಸಮನ್ಸ್ಗೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಆರೋಪಿಸಿ ಇ.ಡಿ ಅಧಿಕಾರಿಗಳು ಈಚೆಗೆ ನ್ಯಾಯಾಲಯದ ಮೊರೆಹೋಗಿದ್ದರು. ಇದರ ವಿಚಾರಣೆಗಾಗಿ ಕೇಜ್ರಿವಾಲ್ ಅವರು ಶನಿವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ದೆಹಲಿ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿರುವ ಕಾರಣ ಕೇಜ್ರಿವಾಲ್ ಅವರಿಗೆ ಖುದ್ದಾಗಿ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಅವರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.
ಮಾರ್ಚ್ 16ರಂದು ನಡೆಯಲಿರುವ ಮುಂದಿನ ವಿಚಾರಣೆಗೆ ಕೇಜ್ರಿವಾಲ್ ಅವರು ಖುದ್ದಾಗಿ ಹಾಜರಾಗುವರು ಎಂದೂ ಹೇಳಿದ್ದರು.