ನವದೆಹಲಿ: ಮನೆಯಲ್ಲಿದ್ದ ಹಣ ಕದಿಯಲು ತನ್ನ ಅಜ್ಜಿಯನ್ನೇ ಕೊಲೆ ಮಾಡಿದ ಆರೋಪದ ಮೇಲೆ 15 ವರ್ಷದ ಬಾಲಕ ಮತ್ತು ಆತನ ಸ್ನೇಹಿತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
77 ವರ್ಷದ ವೃದ್ಧೆಯೊಬ್ಬರು ಒಬ್ಬಂಟಿಯಾಗಿದ್ದ ವೇಳೆ ಮನೆಗೆ ಬಂದ ಮೊಮ್ಮಗ, ತನ್ನ ಸ್ನೇಹಿತನ ಜೊತೆಗೂಡಿ ಆಕೆಯನ್ನು ಕೊಂದು, ಕಪಾಟಿನಲ್ಲಿದ್ದ ನಗದನ್ನು ಅಪಹರಿಸಿ ಪರಾರಿಯಾಗಿದ್ದ ಎನ್ನಲಾಗಿದೆ.
ಸ್ವಲ್ಪ ಹೊತ್ತಿನ ಬಳಿಕ ಮನೆಗೆ ಬಂದ ವೃದ್ಧೆಯ ಪತಿ, ಹಾಸಿಗೆಯ ಮೇಲಿದ್ದ ಮೃತ ದೇಹವನ್ನು ಗಮನಿಸಿ ವಯೋಸಹಜವಾಗಿ ಪತ್ನಿಯು ಮೃತಪಟ್ಟಿರಬಹುದು ಎಂದು ಭಾವಿಸಿದ್ದರು. ಆದರೆ ಆ ನಂತರ ಅಲ್ಲಿಗೆ ಬಂದ ಸಂಬಂಧಿಕರು ವೃದ್ಧೆಯ ಹಣೆಯ ಮೇಲಿದ್ದ ಗಾಯದ ಗುರುತುಗಳನ್ನು ಪತ್ತೆ ಹಚ್ಚಿ ಕೊಲೆಯ ಅನುಮಾನಗಳನ್ನು ವ್ಯಕ್ತಪಡಿಸಿದ್ದರು.
ಮನೆಯ ಕಪಾಟಿನಲ್ಲಿಟ್ಟಿದ್ದ ನಗದು ಕಳವಾಗಿರುವುದನ್ನು ಗಮನಿಸಿದ ಸಂತ್ರಸ್ತೆಯ ಪತಿ, ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದರು.
ಮೊಮ್ಮಗ ಅದೇ ದಿನ ತನ್ನ ಸ್ನೇಹಿತನೊಂದಿಗೆ ಭೇಟಿ ನೀಡಿರುವುದು ಖಚಿತವಾದ ಹಿನ್ನೆಲೆಯಲ್ಲಿ ಆತನನ್ನು ವಿಚಾರಣೆಗೆ ಒಳಪಡಿಸಿದಾಗ, ಹಣಕ್ಕಾಗಿ ತನ್ನ ಅಜ್ಜಿಯನ್ನೇ ಕೊಲೆ ಮಾಡಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದ.