ಗುರುಗ್ರಾಮ: ಉದ್ಯೋಗ ಕೇಳಿಕೊಂಡು ಬಂದಿದ್ದ 23 ವರ್ಷ ವಯಸ್ಸಿನ ಮಹಿಳೆಯನ್ನು ಪೀಡಿಸಿದ, ಕಿರುಕುಳ ನೀಡಿದ ಮತ್ತು ಬೆದರಿಸಿದ ಆರೋಪದ ಮೇಲೆ ಇಲ್ಲಿಯ ಪೀಠೋಪಕರಣ ಮಳಿಗೆಯೊಂದರ ಮಾಲೀಕನ ಮೇಲೆ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
‘ಅತುಲ್ ಕಟಾರಿಯ ಚೌಕದ ಶ್ರೀ ಕೃಷ್ಣ ಫರ್ನಿಚರ್ಸ್ ಮಳಿಗೆಯ ಮಾಲಿ ಕಮಹೇಶ್ ಗೋಯಲ್ನನ್ನು ಉದ್ಯೋಗ ಕೇಳಿಕೊಂಡು ಮೇ 16ರಂದು ಭೇಟಿಯಾಗಿದ್ದೆ. ಆ ವೇಳೆ ನನ್ನನ್ನು ಕಚೇರಿಗೆ ಕರೆದೊಯ್ದಿದ್ದ ಆತ ಕಿರುಕುಳ ನೀಡಿದ್ದ. ಆತನಿಂದ ತಪ್ಪಿಸಿಕೊಂಡು ಮನೆಗೆ ಮರಳಿದ್ದ. ಅದೇ ದಿನ ರಾತ್ರಿಯಿಂದ ನನಗೆ ಕರೆ ಮಾಡಿ ಮಳಿಗೆಗೆ ಬರುವಂತೆ ಬೆದರಿಕೆ ಒಡ್ಡಿದ್ದ. ಅಂದಿನಿಂದ ಆತ ನನಗೆ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಾನೆ’ ಎಂದು ಮಹಿಳೆ ಆರೋಪಿಸಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಯು ತನ್ನ ಮೇಲೆ ಅತ್ಯಾಚಾರ ನಡೆಸಲೂ ಯತ್ನಿಸಿದ್ದಾನೆ ಮತ್ತು ಕೊಲೆ ಬೆದರಿಕೆ ಒಡ್ಡಿದ್ದಾನೆ ಎಂದು ಕೂಡಾ ಸಂತ್ರಸ್ತೆ ಆರೋಪಿಸಿದ್ದಾಳೆ.
‘ಮೇಲೆ ಮೇ 27ರಂದು ಎಫ್ಐಆರ್ ದಾಖಲಿಸಲಾಗಿದೆ. 10 ದಿನಗಳು ಕಳೆದರೂ ಮಹೇಶ್ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಆತ ನನಗೆ ನಿರಂತರವಾಗಿ ಬೆದರಿಕೆಯೊಡ್ಡುತ್ತಿದ್ದಾನೆ. ನನಗೆ ನ್ಯಾಯ ಬೇಕು’ ಎಂದು ಸಂತ್ರಸ್ತೆಯು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾಳೆ.
ಪ್ರಕರಣದ ಸತ್ಯಾಸತ್ಯತೆ ಕುರಿತು ಪೊಲೀಸರ ತಂಡವು ಪರಿಶೀಲನೆ ನಡೆಸುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.