ನವದೆಹಲಿ: ಸುನೇರಿ ಬಾಗ್ನಲ್ಲಿರುವ 150 ವರ್ಷಗಳ ಹಳೆಯ ಮಸೀದಿಯನ್ನು ನೆಲಸಮಗೊಳಿಸುವ ದೆಹಲಿ ಪಾಲಿಕೆಯ (ಎನ್ಡಿಎಂಸಿ) ನಿರ್ಣಯ ಪ್ರಶ್ನಿಸಿ ದೆಹಲಿ ವಕ್ಫ್ ಮಂಡಳಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಪೂರ್ಣಗೊಳಿಸಿದೆ.
ಈ ವಿಷಯದಲ್ಲಿ ವಕ್ಫ್ ಮಂಡಳಿ ಆತಂಕ ಪಡುವ ಅಗತ್ಯವಿಲ್ಲ ಎಂದು ಪಾಲಿಕೆಯು ನ್ಯಾಯಾಲಯಕ್ಕೆ ಹೇಳಿಕೆ ನೀಡಿದ ನಂತರ, ಹೈಕೋರ್ಟ್ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದೆ.
ಮಸೀದಿ ಜಾಗದ ಮೇಲೆ ಕಾನೂನಾತ್ಮಕವಾದ ಹಕ್ಕು ಸಾಧಿಸಲು ದೆಹಲಿ ಪಾಲಿಕೆಯು ಅನಿಯಂತ್ರಿತ ಹಾಗೂ ಕಾನೂನುಬಾಹಿರ ಕ್ರಮಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಇದರಿಂದ ರಕ್ಷಣೆ ನೀಡಬೇಕು ಎಂದು ವಕ್ಫ್ ಮಂಡಳಿ ನ್ಯಾಯಾಲಯವನ್ನು ಕೋರಿತ್ತು.
ಆದರೆ ಈ ಕೋರಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಪಾಲಿಕೆ ಪರ ವಕೀಲರು, ‘ಜಾಗವನ್ನು ವಶಕ್ಕೆ ಪಡೆಯುತ್ತೇವೆ ಎಂಬ ಪ್ರತಿವಾದಿಗಳ ವಾದದಲ್ಲಿ ಹುರುಳಿಲ್ಲ. ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡರೂ ಅದು ಕಾನೂನು ಚೌಕಟ್ಟಿನಲ್ಲೇ ಇರುತ್ತದೆ. ಈಗಾಗಲೇ ಎರಡು ಬಾರಿ ಜಂಟಿ ಸರ್ವೆ ನಡೆಸಲಾಗಿದೆ. ಸುಗಮ ಸಂಚಾರಕ್ಕೆ ಧಾರ್ಮಿಕ ಕಟ್ಟಡದ ತೆರವು ಅಗತ್ಯ ಎಂಬ ಅಭಿಪ್ರಾಯವನ್ನು ವರದಿಯಲ್ಲಿ ಹೇಳಲಾಗಿದೆ’ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
‘ಪಾಲಿಕೆಯು ಇಂಥದ್ದೇ ಕ್ರಮವನ್ನು ಇತ್ತೀಚೆಗೆ ನಡೆಸಿದ್ದು, ಮಸೀದಿಗಳನ್ನು ಮಧ್ಯರಾತ್ರಿ ನೆಲಸಮಗೊಳಿಸಿದ ಉದಾಹರಣೆಗಳು ಇವೆ. ಜತೆಗೆ ಮೋತಿಲಾಲ್ ನೆಹರು ಮಾರ್ಗದಲ್ಲಿ ಅನಿಯಂತ್ರಿತ ವಾಹನಗಳ ನಿಲುಗಡೆಯಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ’ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.