ಕೋಲ್ಕತ್ತ: ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಅಣಕಿಸಿರುವುದನ್ನು ಸಮರ್ಥಿಸಿಕೊಂಡಿರುವ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ, ಮಿಮಿಕ್ರಿಯೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕಾಗಿದೆ ಎಂದರು.
ಸೆರಾಂಪೋರ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬ್ಯಾನರ್ಜಿ, ‘ಮಿಮಿಕ್ರಿ ಮಾಡುವುದು, ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು, ಪ್ರತಿಭಟನೆ ಎಲ್ಲವೂ ವ್ಯಕ್ತಿಯ ಮೂಲಭೂತ ಹಕ್ಕಾಗಿದೆ’ ಎಂದರು.
‘ಮಿಮಿಕ್ರಿ ಮಾಡುವುದು ಒಂದು ಹಕ್ಕು, ಅದೊಂದು ಅಭಿವ್ಯಕ್ತಿ, ಮೂಲಭೂತ ಹಕ್ಕಾಗಿದೆ. ಅದನ್ನು ನಿರ್ಬಂಧಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಹೇಳಿದರು.
ಇದೇ ವೇಳೆ ಧನಕರ್ ವಿರುದ್ಧ ವಾಗ್ದಾಳಿ ನಡೆಸಿದ ಬ್ಯಾನರ್ಜಿ, ‘ನೀವು(ಧನಕರ್) ಎಷ್ಟು ಬಾಗುತ್ತೀರಾ? ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಮೆಚ್ಚಿಸಲು ಬಯಸುತ್ತಿರಾ’ ಎಂದು ಪ್ರಶ್ನಿಸಿದ್ದಾರೆ.
ಸಂಸತ್ ಭದ್ರತಾ ಲೋಪ ಕುರಿತಂತೆ ಅಮಿತ್ ಶಾ ಹೇಳಿಕೆ ನೀಡಬೇಕೆಂದು ಒತ್ತಾಯಿಸಿ ಘೋಷಣೆ ಕೂಗಿದ್ದ ವಿಪಕ್ಷಗಳ 146 ಸಂಸದರನ್ನು ಸಂಸತ್ತಿನ ಉಭಯ ಸದನಗಳಿಂದ ಅಮಾನತು ಮಾಡಲಾಗಿತ್ತು. ಇವರಲ್ಲಿ ಕಲ್ಯಾಣ ಬ್ಯಾನರ್ಜಿ ಕೂಡ ಒಬ್ಬರಾಗಿದ್ದರು. ಡಿಸೆಂಬರ್ 19ರಂದು ಸಂಸತ್ನ ಹೊರಗಡೆ ನಡೆದ ಪ್ರತಿಭಟನೆ ವೇಳೆ ಧನಕರ್ ಅವರ ಶೈಲಿಯನ್ನು ಬ್ಯಾನರ್ಜಿ ಅಣಕಿಸಿದ್ದರು.