ಪುರಿ (ಪಿಟಿಐ): ಇಲ್ಲಿನ ಜಗನ್ನಾಥ ದೇವರು ಮತ್ತು ದೇವಿ ಸುಭದ್ರಾರನ್ನು ಹೊತ್ತ ರಥವು ರಾತ್ರಿಯಿಡೀ ಮೆರವಣಿಗೆ ಮೂಲಕ ಸಾಗಿ ಬುಧವಾರ ಗುಂಡಿಚಾ ದೇವಾಲಯಕ್ಕೆ ತಲುಪಿತು.
ಸುಭದ್ರಾ ದೇವಿಯ ‘ದರ್ಪದಲ’ ರಥವು ಗುಂಡಿಚಾದಿಂದ 200 ಮೀಟರ್ ದೂರವಿರುವ ಬಂದಸಖ ಪ್ರದೇಶದಲ್ಲಿ ನಿಂತಿದ್ದು, ಜಗನ್ನಾಥ ದೇವರ ‘ನಂದಿಗೋಶ್’ ರಥವು ಗಲಗಂಡಿ ಪ್ರದೇಶದಲ್ಲಿ ನಿಂತಿತು.
ಗುಂಡಿಚಾ ದೇವಾಲಯದ ಒಳಗೆ ದೇವರ ವಿಗ್ರಹ ಕೊಂಡೊಯ್ಯಲಾಗಿದ್ದು, ಜೂನ್ 28ರವರೆಗೆ ಅಲ್ಲಿ ಇರಲಿದೆ.
ಮಂಗಳವಾರ ನಡೆದ ರಥಯಾತ್ರೆಯ ಮೆರವಣಿಗೆ ಯಲ್ಲಿ ಸುಮಾರು 12 ಲಕ್ಷ ಭಕ್ತಾದಿಗಳು ಪಾಲ್ಗೊಂಡಿದ್ದರು. ರಥ ಎಳೆಯುವ ವೇಳೆ ಉಂಟಾದ ನೂಕು ನುಗ್ಗಲಿನಿಂದ 14 ಮಂದಿ ಗಾಯಗೊಂಡಿದ್ದಾರೆ ಎಂದು ಪುರಿಯ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಸಿಂಗ್ ತಿಳಿಸಿದ್ದಾರೆ.