ಲೇಹ್: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಭಾರತೀಯ ಸೈನಿಕರೊಂದಿಗೆ ಹೋಳಿ ಹಬ್ಬವನ್ನು ಇಲ್ಲಿ ಆಚರಿಸಿದರು. ಪ್ರತಿಕೂಲ ಹವಾಮಾನದಲ್ಲೂ ಶತ್ರುರಾಷ್ಟ್ರಗಳ ದಾಳಿಯಿಂದ ದೇಶವನ್ನು ರಕ್ಷಿಸುತ್ತಿರುವ ಸೈನಿಕರನ್ನು ಶ್ಲಾಘಿಸಿದರು.
ಜಗತ್ತಿನ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ನಲ್ಲಿ ಹೋಳಿ ಆಚರಿಸಲು ಸಿಂಗ್ ಮೊದಲು ತೀರ್ಮಾನಿಸಿದ್ದರು. ಆದರೆ ಪ್ರತಿಕೂಲ ಹವಾಮಾನದ ಕಾರಣದಿಂದ ಅಲ್ಲಿಗೆ ಭೇಟಿ ನೀಡುವ ಕಾರ್ಯಕ್ರಮ ರದ್ದಾಯಿತು.
ಸಿಂಗ್, ಸೈನಿಕರ ಹಣೆಗೆ ತಿಲಕವನ್ನು ಇಟ್ಟರು. ಬಳಿಕ ಮಾತನಾಡಿ, ‘ರಾಷ್ಟ್ರ ರಾಜಧಾನಿಯಾಗಿ ದೆಹಲಿ, ಆರ್ಥಿಕ ರಾಜಧಾನಿಯಾಗಿ ಮುಂಬೈ ಮತ್ತು ತಾಂತ್ರಿಕ ರಾಜಧಾನಿಯಾಗಿ ಬೆಂಗಳೂರನ್ನು ಹೊಂದಿರುವಂತೆ ಲಡಾಕ್, ಧೈರ್ಯ ಮತ್ತು ಶೌರ್ಯದ ರಾಜಧಾನಿ’ ಎಂದು ಹೇಳಿದರು.
‘ತೀವ್ರ ಚಳಿಯ ವಾತಾವರಣದಿಂದಾಗಿ ಎಲ್ಲರೂ ಮನೆಯೊಳಗೆ ಬೆಚ್ಚಗೆ ಇರಲು ಬಯಸಿದರೆ, ನೀವು ದೇಶಕ್ಕಾಗಿ ಎದೆಯೊಡ್ಡಿ ಹೋರಾಡುತ್ತಿದ್ದೀರಿ. ನಿಮ್ಮ ದೇಶಭಕ್ತಿ ಮತ್ತು ಸೇವೆಗೆ ನಾವು ಎಂದಿಗೂ ಚಿರಋಣಿ’ ಎಂದು ಹೇಳಿದರು.
ಇದೇ ಸಂದರ್ಭದಲ್ಲಿನ ಇಲ್ಲಿನ ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು.