ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಪಪಟ್ಟಿಯಲ್ಲಿ ಎಲ್ಲ ವಿವರಗಳ ಉಲ್ಲೇಖ ಕಡ್ಡಾಯ: ಸುಪ್ರೀಂ ಕೋರ್ಟ್‌ ನಿರ್ದೇಶನ

Published 13 ಮಾರ್ಚ್ 2024, 0:23 IST
Last Updated 13 ಮಾರ್ಚ್ 2024, 0:23 IST
ಅಕ್ಷರ ಗಾತ್ರ

ನವದೆಹಲಿ: ತನಿಖಾಧಿಕಾರಿಗಳು/ ಪೊಲೀಸ್‌ ಅಧಿಕಾರಿಗಳು ಸಲ್ಲಿಸುವ ಅಂತಿಮ ವರದಿ ಅಥವಾ ಆರೋಪಪಟ್ಟಿಯು ಸಿಆರ್‌ಪಿಸಿ ಸೆಕ್ಷನ್ 173(2)ರಲ್ಲಿ ಹೇಳಿರುವಂತೆ, ಎಲ್ಲ ಅಗತ್ಯ ಎಲ್ಲ  ವಿವರಗಳನ್ನು ಒಳಗೊಂಡಿರಬೇಕು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಸೂಚಿಸಿದೆ.

ತನಿಖಾಧಿಕಾರಿಗಳು ಬಹುತೇಕ ಸಂದರ್ಭಗಳಲ್ಲಿ, ಸಿಆರ್‌ಪಿಸಿ ಸೆಕ್ಷನ್‌ 173(2) ಅಡಿ ಅಗತ್ಯವಿರುವ ಮಾಹಿತಿಯನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಮೂರ್ತಿಗಳಾದ ಬೇಲಾ ಎಂ.ತ್ರಿವೇದಿ ಹಾಗೂ ಪಂಕಜ್‌ ಮಿತ್ತಲ್‌ ಅವರಿದ್ದ ನ್ಯಾಯಪೀಠ, ಇದಕ್ಕೆ ಸಂಬಂಧಿಸಿ ನಿರ್ದೇಶನಗಳನ್ನು ನೀಡಿದೆ.

‘ಸಿಆರ್‌ಪಿಸಿ ಸೆಕ್ಷನ್‌ 173(2) ಅಡಿ ಸಲ್ಲಿಸುವ ವರದಿಯು, ಪ್ರಾಸಿಕ್ಯೂಷನ್‌, ಪ್ರತಿವಾದಿ ಹಾಗೂ ನ್ಯಾಯಾಲಯದ ದೃಷ್ಟಿಯಿಂದ ಬಹಳ ಮಹತ್ವದ ದಾಖಲೆಯಾಗಿದೆ’ ಎಂದೂ ನ್ಯಾಯಪೀಠ ಹೇಳಿದೆ.

ಕೊಲೆ ಪ್ರಕರಣವೊಂದರಲ್ಲಿ ಒಬ್ಬ ವ್ಯಕ್ತಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜಾರ್ಖಂಡ್‌ ಹೈಕೋರ್ಟ್‌ ತಿರಸ್ಕರಿಸಿತ್ತು. ಹೈಕೋರ್ಟ್‌ನ ಈ ಆದೇಶ ಪ್ರಶ್ನಿಸಿ ವ್ಯಕ್ತಿಯು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ನಿರ್ದೇಶನಗಳನ್ನು ನೀಡಿದೆ.

ತನಿಖೆಯು ಪೂರ್ಣಗೊಂಡ ಕೂಡಲೇ, ಸಂಬಂಧಪಟ್ಟ ಪೊಲೀಸ್‌ ಠಾಣೆಯ ಅಧಿಕಾರಿ ಮ್ಯಾಜಿಸ್ಟ್ರೇಟ್‌ ಅವರಿಗೆ ವರದಿಯನ್ನು ಸಲ್ಲಿಸಬೇಕು. ಈ ವರದಿಯು ಆಯಾ ರಾಜ್ಯ ಸರ್ಕಾರ ನಿಗದಿಪಡಿಸಿರುವ ನಮೂನೆಯಲ್ಲಿಯೇ ಇರಬೇಕು ಎಂದು ಸಿಆರ್‌ಪಿಸಿ ಸೆಕ್ಷನ್‌ 173(2) ಹೇಳುತ್ತದೆ.

‘ಪೊಲೀಸ್‌ ಅಧಿಕಾರಿ ಸಲ್ಲಿಸುವ ತನಿಖಾ ವರದಿಯಲ್ಲಿ ಎಲ್ಲ ಕಕ್ಷಿದಾರರ ಹೆಸರುಗಳು ಇರಬೇಕು, ಮಾಹಿತಿಯ ಸ್ವರೂಪ, ಯಾವುದೇ ಅಪರಾಧ ಕೃತ್ಯ ಎಸಗಲಾಗಿದ್ದರೆ ಹಾಗೂ ಆ ಕೃತ್ಯ ಎಸಗಿದವರ ಕುರಿತು ಸಾಂದರ್ಭಿಕ ಅಂಶಗಳ ಮಾಹಿತಿ ಗೊತ್ತಿರುವ ವ್ಯಕ್ತಿಗಳ ಹೆಸರುಗಳನ್ನು ವರದಿಯಲ್ಲಿ ಉಲ್ಲೇಖಿಸಬೇಕು‘ ಸಿಆರ್‌ಪಿಸಿ ಸೆಕ್ಷನ್‌ 173ರಲ್ಲಿನ ಅವಕಾಶಗಳನ್ನು ಉಲ್ಲೇಖಿಸಿ ನ್ಯಾಯಪೀಠ ನಿರ್ದೇಶನ ನೀಡಿದೆ. 

ಆರೋಪಿಯನ್ನು ಬಂಧಿಸಿರುವ, ಯಾವ ಆಧಾರದಲ್ಲಿ ಜಾಮೀನು ನೀಡಿ ಬಿಡುಗಡೆ ಮಾಡಲಾಗಿದೆ ಎಂಬ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಬೇಕು. ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಮಹಿಳೆಯ ವೈದ್ಯಕೀಯ ಪರೀಕ್ಷೆಗೆ ಸಂಬಂಧಿಸಿದ ವರದಿಯನ್ನು ಲಗತ್ತಿಸಿರುವ ಕುರಿತು ಆರೋಪಪಟ್ಟಿಯಲ್ಲಿ ಉಲ್ಲೇಖಿಸಬೇಕು ಎಂದೂ ನಿರ್ದೇಶನ ನೀಡಿದೆ.

ಸಾಕ್ಷ್ಯಾಧಾರಗಳ ಕೊರತೆ ಕಾರಣ ನೀಡಿ, ಆರೋಪಿಯನ್ನು ಬಿಡುಗಡೆ ಮಾಡಿದ್ದಲ್ಲಿ, ಸಿಆರ್‌ಪಿಸಿ ಸೆಕ್ಷನ್ 169ರಡಿ ಈ ಕುರಿತು ಅಗತ್ಯವಿರುವ ಮಾಹಿತಿಯನ್ನು ಉಲ್ಲೇಖಿಸಬೇಕು ಎಂದು ತನಿಖಾಧಿಕಾರಿಗಳು/ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ.

ಎಲ್ಲ ರಾಜ್ಯಗಳ ಪೊಲೀಸ್‌ ಠಾಣೆಗಳ ಉಸ್ತುವಾರಿ ಅಧಿಕಾರಿಗಳು ಈ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಪಾಲನೆಯಲ್ಲಿ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟ ನ್ಯಾಯಾಲಯಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದೂ ನ್ಯಾಯಪೀಠ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT