ನವದೆಹಲಿ: ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದ ಪಾತಕಿ, ಮಾಜಿ ಸಂಸದ ಅತೀಕ್ ಅಹಮದ್ ಮತ್ತು ಆತನ ತಮ್ಮ ಅಶ್ರಫ್ ಅವರ ಹತ್ಯೆ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಏ.28ಕ್ಕೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಕೊಂಡಿದೆ.
ಏ.15ರ ರಾತ್ರಿ ಪತ್ರಕರ್ತರ ಸೋಗಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಪೊಲೀಸರು ಮತ್ತು ಮಾಧ್ಯಮದವರ ಎದುರೇ ಅತೀಕ್ ಮತ್ತು ಅಶ್ರಫ್ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದರು.
2017 ರಿಂದ ಉತ್ತರಪ್ರದೇಶದಲ್ಲಿ ನಡೆದ 183 ಎನ್ಕೌಂಟರ್ಗಳ ಬಗ್ಗೆ ತನಿಖೆ ನಡೆಸಬೇಕೆಂದು ವಕೀಲ ವಿಶಾಲ್ ತಿವಾರಿ ಅವರು ಅರ್ಜಿಯಲ್ಲಿ ಕೋರಿದ್ದಾರೆ.
ಈ ವಿಷಯವನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡುವಂತೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಪೀಠಕ್ಕೆ ತಿವಾರಿ ಸೋಮವಾರ ಮನವಿ ಮಾಡಿದರು.
‘ಐವರು ನ್ಯಾಯಮೂರ್ತಿಗಳು ಲಭ್ಯವಿಲ್ಲದ ಕಾರಣ ಕೆಲ ಪ್ರಕರಣಗಳನ್ನು ಪಟ್ಟಿ ಮಾಡಲಾಗಿಲ್ಲ. ಏ. 28ಕ್ಕೆ ಪಟ್ಟಿ ಮಾಡಲು ಪ್ರಯತ್ನಿಸುತ್ತೇವೆ. ಕೆಲ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಕೋವಿಡ್ -19 ನಿಂದ ಬಳಲುತ್ತಿದ್ದಾರೆ ಮತ್ತು ಇನ್ನೂ ಕೆಲವರು ಇತರ ಕಾರಣಗಳಿಂದಾಗಿ ಅಸ್ವಸ್ಥರಾಗಿದ್ದಾರೆ’ ಎಂದು ಸಿಜೆಐ ಹೇಳಿದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಆರು ವರ್ಷಗಳಲ್ಲಿ 183 ಅಪರಾಧಿಗಳನ್ನು ಎನ್ಕೌಂಟರ್ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಇತ್ತೀಚೆಗೆ ಹೇಳಿದ್ದರು. ಇದರಲ್ಲಿ ಅತೀಕ್ ಅಹಮದ್ ಅವರ ಮಗ ಅಸಾದ್ ಮತ್ತು ಅವರ ಸಹಚರ ಸೇರಿದ್ದಾರೆ.
ಅತೀಕ್ ಮತ್ತು ಅಶ್ರಫ್ ಹತ್ಯೆಯ ಬಗ್ಗೆ ತನಿಖೆ ನಡೆಸಲು ಸ್ವತಂತ್ರ ತಜ್ಞರ ಸಮಿತಿ ರಚಿಸುವಂತೆ ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ.