ನವದೆಹಲಿ: ದೇಶದಾದ್ಯಂತ ದ್ವೇಷ ಭಾಷಣಗಳ ಕುರಿತು ಕ್ರಮ ಕೈಗೊಳ್ಳುವುದಕ್ಕಾಗಿ ಆಡಳಿತಾತ್ಮಕ ಕಾರ್ಯವಿಧಾನ ಸ್ಥಾಪಿಸುವ ಆಲೋಚನೆ ಇದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ದ್ವೇಷ ಭಾಷಣಕ್ಕೆ ಸಂಬಂಧಿಸಿ ಒಂದೊಂದೇ ಪ್ರಕರಣ ಕುರಿತು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ಈ ಸಂಬಂಧ ಒಂದು ಆಡಳಿತಾತ್ಮಕ ಕಾರ್ಯವಿಧಾನ ರೂಪಿಸುವ ಚಿಂತನೆ ಇದೆ ಎಂದು ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ಎಸ್ವಿಎನ್ ಭಟ್ಟಿ ಅವರಿದ್ದ ನ್ಯಾಯಪೀಠ ಅರ್ಜಿ ವಿಚಾರಣೆ ವೇಳೆ ಈ ಮಾತು ಹೇಳಿದೆ.
‘ಯಾವುದು ದ್ವೇಷ ಭಾಷಣ ಎಂಬುದನ್ನು ಈಗಾಗಲೇ ನ್ಯಾಯಾಲಯ ವ್ಯಾಖ್ಯಾನಿಸಿದೆ. ಈಗ, ಅದರ ಅನುಷ್ಟಾನ ಮತ್ತು ಹೇಗೆ ಅನ್ವಯಿಸಬೇಕು ಎಂಬುದನ್ನು ಅರಿಯುವುದೇ ನಮ್ಮ ಮುಂದಿರುವ ಪ್ರಶ್ನೆ’ ಎಂದು ನ್ಯಾಯಪೀಠ ಹೇಳಿದೆ.
‘ಒಂದರ ನಂತರ ಒಂದು ಪ್ರಕರಣಗಳ ವಿಚಾರಣೆ ಸಾಧ್ಯವಿಲ್ಲ. ಈ ರೀತಿ ಮಾಡಿದಲ್ಲಿ ಪ್ರಕರಣಗಳ ರಾಶಿಯೇ ನಮ್ಮ ಮುಂದೆ ಬೀಳುತ್ತದೆ. ಹೀಗಾಗಿ, ಈ ವಿಷಯಕ್ಕೆ ಸಂಬಂಧಿಸಿ ಸೂಕ್ತ ಮೂಲಸೌಕರ್ಯ ಇಲ್ಲವೇ ಆಡಳಿತಾತ್ಮಕ ಕಾರ್ಯವಿಧಾನ ಜಾರಿಯಾಗಬೇಕು ಎಂಬುದು ನಮ್ಮ ಬಯಕೆ. ಇಂತಹ ಕಾರ್ಯವಿಧಾನದಲ್ಲಿಯೂ ನ್ಯೂನತೆ ಕಂಡುಬಂದಲ್ಲಿ ಸಂಬಂಧಿಸಿದ ಹೈಕೋರ್ಟ್ಗೆ ಅರ್ಜಿ ಸಲ್ಲಿಸಬಹುದು’ ಎಂದು ನ್ಯಾಯಪೀಠ ಹೇಳಿತು.
ಅಲ್ಲದೇ, ಈ ವಿಷಯವಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡದಿರುವುದಕ್ಕಾಗಿ ತಮಿಳುನಾಡು, ಕೇರಳ, ನಾಗಾಲ್ಯಾಂಡ್ ಹಾಗೂ ಗುಜರಾತ್ ಸರ್ಕಾರಗಳಿಗೆ ನ್ಯಾಯಪೀಠ ನೋಟಿಸ್ ಜಾರಿ ಮಾಡಿತು.