ಚೆನ್ನೈ: ತಮಿಳುನಾಡಿನ ಆರ್.ಕೆ. ನಗರ ಉಪ ಚುನಾವಣೆಗೆ ಸ್ಪರ್ಧೆ ಬಯಸಿದ್ದ ನಟ ವಿಶಾಲ್ ಕೃಷ್ಣ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಸೋದರ ಸಂಬಂಧಿ ದೀಪಾ ಜಯಕುಮಾರ್ ಅವರ ನಾಮಪತ್ರಗಳು ಮಂಗಳವಾರ ತಿರಸ್ಕೃತವಾಗಿವೆ.
ಈ ಇಬ್ಬರ ನಾಮಪತ್ರಗಳನ್ನು ತಿರಸ್ಕೃತಗೊಂಡಿವೆ ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿ ಹೇಳಿದ್ದಾರೆ.
‘ಇಬ್ಬರ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ. ನ್ಯಾಯಾಂಗ ಪ್ರಕ್ರಿಯೆ ನಡೆಯುತ್ತಿದ್ದು, ಪೂರ್ಣ ವಿವರಗಳನ್ನು ಬಳಿಕ ತಿಳಿಸಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾಗಿ ವರದಿಯಾಗಿದೆ.
ಯಾವ ಕಾರಣಕ್ಕಾಗಿ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅಧಿಕಾರಿ, ‘ತಾಂತ್ರಿಕ’ ಕಾರಣ ಎಂದಷ್ಟೇ ಹೇಳಿದ್ದಾರೆ.
ನಾಮಪತ್ರ ತಿರಸ್ಕೃತಗೊಂಡಿರುವುದನ್ನು ಖಂಡಿಸಿ ಅಭಿಮಾನಿಗಳು ಚೆನ್ನೈನಲ್ಲಿ ಪ್ರತಿಭಟನೆ ನಡೆಸಿದ್ದು, ಪೊಲೀಸರು ಅವರನ್ನು ತೆರವುಗೊಳಿಸಿದ್ದಾರೆ.