ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂಎನ್ಆರ್ಇಜಿಎಸ್) ಅಡಿ ನಿಗದಿತ ಸಮಯಕ್ಕೆ ವೇತನ ಪಾವತಿ ಮಾಡಲು ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರವು ಪ್ರಸ್ತುತ ಹಣಕಾಸು ವರ್ಷದಲ್ಲಿ ಶೇ 85 ಹಣವನ್ನು ಈಗಾಗಲೇ ಬಿಡುಗಡೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯೋಜನೆ ಅಡಿ ಉದ್ಯೋಗ ಪಡೆಯಲು, ಶೌಚಾಲಯ ಇಲ್ಲದ ಮನೆಯ ವ್ಯಕ್ತಿಗಳಿಗೆ ಉದ್ಯೋಗ ನಿರಾಕರಿಸುವ, ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವ ಅಥವಾ ಇನ್ಯಾವುದೇ ಷರತ್ತುಗಳೂ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯವು ಶುಕ್ರವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.
ಸುಪ್ರೀಂಕೋರ್ಟ್ ನಿರ್ದೇಶನದ ಅನ್ವಯ ನಿಗದಿತ ಸಮಯಕ್ಕೆ ವೇತನ ಪಾವತಿಸುವ ಮತ್ತು ತಡವಾಗಿ ಪಾವತಿಯಾದ ವೇತನ ಪರಿಹಾರವನ್ನೂ ಒದಗಿಸುವ ಕ್ರಮಗಳನ್ನು ಸಚಿವಾಲಯ ಕೈಗೊಂಡಿದೆ.
ವೇತನ ಬಿಡುಗಡೆ ಆದ 24 ಗಂಟೆ ಒಳಗಾಗಿ ಉದ್ಯೋಗಿಯ ಖಾತೆಗೆ ಜಮೆಯಾಗುವಂತೆ ನೋಡಿಕೊಳ್ಳುವ ಸಲುವಾಗಿ ಬ್ಯಾಂಕ್, ಅಂಚೆ ಕಚೇರಿ ಹಾಗೂ ಹಣಕಾಸು ಸೇವಾ ಇಲಾಖೆಯೊಂದಿಗೆ ಸಚಿವಾಲಯವು ನಿರಂತರ ಸಂಪರ್ಕ ಹೊಂದಿದೆ.
ವೇತನ ಪರಿಷ್ಕರಣೆ ಸಮಿತಿ: ಸದ್ಯ ಇರುವ ಎಂಎನ್ಆರ್ಇಜಿಎಸ್ ಕೂಲಿಯನ್ನು ಪರಿಷ್ಕರಿಸಲು ಗ್ರಾಮೀಣಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ನಾಗೇಶ್ ಸಿಂಗ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದ್ದು, ಸಮಿತಿಯು ಈಗಾಗಲೇ ವರದಿಯನ್ನೂ ಸಲ್ಲಿಸಿದೆ.